
ಧರ್ಮಸ್ಥಳ ಗ್ರಾ.ಯೋ. ವತಿಯಿಂದ ‘ವಾತ್ಸಲ್ಯ’ ಮನೆ ಹಸ್ತಾಂತರ
Wednesday, February 5, 2025
ಮೂಡುಬಿದಿರೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್, ಮೂಡುಬಿದಿರೆ ವತಿಯಿಂದ ವಾಲ್ಪಾಡಿ ಗ್ರಾಮದ ಬಿಜಿಲು ಎಂಬವರಿಗೆ ನಿರ್ಮಿಸಲಾದ ‘ವಾತ್ಸಲ್ಯ’ ಮನೆ ಹಸ್ತಾಂತರ ಕಾರ್ಯಕ್ರಮವು ಸೋಮವಾರ ಬೆಳಿಗ್ಗೆ ನಡೆಯಿತು.
ಯೋಜನೆಯ ಟ್ರಸ್ಟಿ, ಶಿರ್ತಾಡಿ ಶಿಮುಂಜೆಗುತ್ತು ಸಂಪತ್ ಸಾಮ್ರಾಜ್ಯ ಅವರು ದೀಪ ಬೆಳಗಿಸಿ ಉದ್ಘಾಟಿಸಿ, ಸಮಾಜದಲ್ಲಿ ಹಿಂದುಳಿದವರಿಗೆ, ಅಶಕ್ತರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಹಾಗೂ ಹೇಮಾವತಿ ವಿ. ಹೆಗ್ಗಡೆ ಅವರು ಹಲವಾರು ಸೇವಾ ಯೋಜನೆಗಳನ್ನು ರೂಪಿಸಿದ್ದಾರೆ, ಅವುಗಳ ಪೈಕಿ ‘ವಾತ್ಸಲ್ಯ’ ಯೋಜನೆಯೂ ಒಂದು, ಬಡವರ ಪಾಲಿನ ಆಶಾಕಿರಣವಾಗುತ್ತಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾ. ಯೋಜನೆಯ ಈ ಕೆಲಸ ಶ್ಲಾಘನೀಯ ಎಂದರು.
ವಾಲ್ಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ವಿಶಾಲಾಕ್ಷಿ ಅವರು ಅಧ್ಯಕ್ಷತೆ ವಹಿಸಿದ್ದರು.
ಯೋಜನೆಯ ಉಡುಪಿ ಪ್ರಾದೇಶಿಕ ಕಚೇರಿಯ ಪ್ರಾದೇಶಿಕ ನಿರ್ದೇಶಕ ದುಗ್ಗೇ ಗೌಡ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಶುಭ ಹಾರೈಸಿದರು.