
ಅಪಾಯಕಾರಿ ವಸ್ತುಗಳ ನಿರ್ವಹಣೆ ಪ್ರತಿಯೊಬ್ಬರ ಹೊಣೆ: ಡಾ. ರಾಂಪುರ್ ವಿಶ್ವನಾಥ್
ಆಳ್ವಾಸ್ನಲ್ಲಿ ಇಂಡೋ-ಅಮೆರಿಕ ಸಂಯೋಜಿತ 3 ದಿನಗಳ ಕಾರ್ಯಾಗಾರ
ಮೂಡುಬಿದಿರೆ: ಅಪಾಯಕಾರಿ ವಸ್ತುಗಳನ್ನು ವೈಜ್ಞಾನಿಕ ರೀತಿಯಲ್ಲಿ ನಿರ್ವಹಿಸುವುದು ಮಾನವ ಹಾಗೂ ಪರಿಸರದ ಸುಸ್ಥಿರತೆಗೆ ಬಹಳ ಅಗತ್ಯ. ಅಪಾಯಕಾರಿ ವಸ್ತುಗಳನ್ನು ನಿರ್ವಹಿಸುವುದು ಪ್ರತಿಯೊಬ್ಬರ ಜವಬ್ದಾರಿ. ನಾವು ಯಾವುದೇ ಜ್ಞಾನವನ್ನು ಇತರರೊಂದಿಗೆ ಹಂಚಿಕೊಂಡಾಗ ಜ್ಞಾನವು ಕೆಲವರಿಗಾದರು ಉಪಯುಕ್ತವಾಗುತ್ತದೆ ಎಂದು ಎಸಿಎಚ್ ಎಂಎಂ-ಇಂಡಿಯಾ ಚಾಪ್ಟರ್ ಸಂಸ್ಥೆಯ ಸ್ಥಾಪಕ ಹಾಗೂ ಅಧ್ಯಕ್ಷ ಡಾ. ರಾಂಪುರ್ ವಿಶ್ವನಾಥ್ ಹೇಳಿದರು.
ಅವರು ಅಕಾಡೆಮಿ ಆಫ್ ಸರ್ಟಿಫೈಡ್ ಹಝಾರ್ಡಸ್ ಮೆಟೀರಿಯಲ್ಸ್ ಮ್ಯಾನೇಜರ್ (ಎಸಿಎಚ್ ಎಂಎಂ)-ಇಂಡಿಯಾ ಚಾಪ್ಟರ್, ಆಳ್ವಾಸ್ ಅಲೈಡ್ ಹೆಲ್ತ್ ಸೈನ್ಸ್ ಕಾಲೇಜು ಹಾಗೂ ಆಳ್ವಾಸ್ ತಾಂತ್ರಿಕ ಮಹಾವಿದ್ಯಾಲಯದ ಜಂಟಿ ಸಹಯೋಗದಲ್ಲಿ ನಡೆಯಲಿರುವ 3 ದಿನಗಳ ಕಾರ್ಯಗಾರವನ್ನು ವಿದ್ಯಾಗಿರಿಯ ಕುವೆಂಪು ಸಭಾಂಗಣದಲ್ಲಿ ನಡೆಯುತ್ತಿರುವ ಭಾರತ ಹಾಗೂ ಅಮೆರಿಕಾ ದೇಶಗಳ ಸಂಪನ್ಮೂಲ ವ್ಯಕ್ತಿಗಳನ್ನು ಒಳಗೊಂಡ ಕಾರ್ಯಗಾರವನ್ನು ಇಂದು ಉದ್ಘಾಟಿಸಿ ಮಾತನಾಡಿದರು.
ಪ್ರತಿಯೊಬ್ಬರು ತಮ್ಮ ಅನುಭವ, ಪರಿಣತಿ ಹಾಗೂ ವಿಷಯದ ತಿಳಿವಳಿಕೆಯನ್ನು ಹಂಚಿಕೊಳ್ಳಲು ಉತ್ಸುಕರಾಗಿರಬೇಕು. ಎಸಿಎಚ್ ಎಂಎಂ ಸಂಸ್ಥೆಯ ಮೂಲಕ ಅಪಾಯಕಾರಿ ವಸ್ತುಗಳನ್ನು ನಿರ್ವಹಣೆಗೆ ಸಂಬಂಧಿಸಿದ 30 ಮಾದರಿಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಇವುಗಳಲ್ಲಿ 18 ನಿರ್ವಹಣಾ ಮಾದರಿಗಳ ಕುರಿತು ಈ ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಗುವುದು ಎಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ಭಾರತ ದೇಶದಲ್ಲಿ ಅಪಾಯಕಾರಿ ವಸ್ತುಗಳ ನಿರ್ವಹಣೆಗೆ ಹೆಚ್ಚಿನ ಮಹತ್ವವನ್ನು ನೀಡಲಾಗುತ್ತಿಲ್ಲ, ಎಸಿಎಚ್ ಎಂಎಂ-ಇಂಡಿಯಾ ಚಾಪ್ಟರ್ ಸಂಸ್ಥೆಯು ಸ್ವಯಂ ಪ್ರೇರಿತವಾಗಿ ಈ ರೀತಿಯ ತಿಳಿವಳಿಕೆಯನ್ನು ಜನರಿಗೆ ನೀಡುತ್ತಿರುವುದು ಅನುಕರಣೆಯ, ವಿದ್ಯಾರ್ಥಿಗಳು ಇಲ್ಲಿ ಪಡೆಯುವ ಜ್ಞಾನವನ್ನು ಬಳಸಿಕೊಂಡು ಜವಾಬ್ದಾರಿಯುತವಾಗಿ ಅಪಾಯಕಾರಿ ವಸ್ತುಗಳ ನಿರ್ವಹಣೆಯನ್ನು ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಮಂಗಳೂರು ಪ್ರಾದೇಶಿಕ ಪರಿಸರ ಅಧಿಕಾರಿ ಡಾ. ಲಕ್ಷ್ಮೀಕಾಂತ ಎಚ್, ಅಮೆರಿಕಾದ ಹಿರಿಯ ಪರಿಸರ ತಜ್ಞೆ ಸಾರಾ ಹೊಫ್ಮನ್, ಹಿರಿಯ ಪರಿಸರ ಇಂಜಿನಿಯರ್ ಕಾರ್ಲ್ ಹೆಕ್ಸ್, ಹಿರಿಯ ಪರಿಸರ ತಜ್ಞೆ ಜೆನ್ನಿಫರ್ ಜೇಮ್ಸ್, ಜಾರ್ಜಿಯ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಪ್ರಾಧ್ಯಾಪಕ ರಿಚಿ ಸ್ಪಾನ್ಗ್ಲರ್, ಅಳ್ವಾಸ್ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಪೀಟರ್ ಫೆನಾರ್ಂಡಿಸ್, ಆಳ್ವಾಸ್ ಸ್ವಾಯತ್ತ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಉಪಸ್ಥಿತರಿದ್ದರು.
ಕಾರ್ಯಕ್ರಮ ಸಂಯೋಜಕ ಡಾ. ವಿನಯ್ ಎಸ್ ಸ್ವಾಗತಿಸಿದರು. ಉಪನ್ಯಾಸಕ ಡಾ. ದತ್ತಾತ್ರೇಯ ವಂದಿಸಿ, ಡಾ. ಸಾಕ್ಷಿ ಕಾಮತ್ ಕಾರ್ಯಕ್ರಮ ನಿರೂಪಿಸಿದರು.