
ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವನೆ ಮುಖ್ಯ: ಡಾ ವಿಜಯಕುಮಾರ್ ಎಂ
Friday, February 28, 2025
ಸಂತ ಫಿಲೋಮಿನಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಶಿಬಿರದ ಸಮಾರೋಪ ಸಮಾರಂಭ
ಪುತ್ತೂರು: ಈಗಿನ ಡಿಜಿಟಲ್ ಯುಗದಲ್ಲಿ ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವನೆ ಮುಖ್ಯ ಎಂದು ಕಾಲೇಜಿನ ಉಪಪ್ರಾಂಶುಪಾಲ ಡಾ. ವಿಜಯಕುಮಾರ್ ಎಂ. ಶಿಬಿರದ ಮಹತ್ವವನ್ನು ತಿಳಿಸಿದರು.
ಸಂತ ಫಿಲೋಮಿನಾ ಕಾಲೇಜು (ಸ್ವಾಯತ್ತ) ಇದರ ಎನ್ಎಸ್ಎಸ್ ವಾರ್ಷಿಕ ಶಿಬಿರ 2024-25ರ ಡಿಜಿಟಲ್ ಸಾಕ್ಷರತೆಗಾಗಿ ಯುವಜನತೆ-ನನ್ನ ಭಾರತಕ್ಕಾಗಿ ಯುಜಜನತೆ ಎಂಬ ಧ್ಯೇಯವಾಕ್ಯದಡಿಯಲ್ಲಿ ಫೆ.20 ರಿಂದ ಫೆ.26 ರ ವರೆಗೆ ಸ.ಹಿ.ಪ್ರಾ ಶಾಲೆ ಆನಡ್ಕ ಇಲ್ಲಿ ನಡೆದಿದ್ದು, ಇದರ ಸಮಾರೋಪ ಸಮಾರಂಭ ಫೆ.೨೬ ರಂದು ನಡೆಯಿತು.
ಕಾಲೇಜಿನ ಪ್ರಾಂಶುಪಾಲ ವಂ. ಡಾ. ಆಂಟನಿ ಪ್ರಕಾಶ್ ಮೊಂತೆರೋ ಅವರು ಸಭಾಧ್ಯಕ್ಷತೆಯನ್ನು ವಹಿಸಿ ಶಿಬಿರಾರ್ಥಿಗಳನ್ನು ಹಾಗೂ ಊರವರ ಸಹಕಾರವನ್ನು ಶ್ಲಾಗಿಸಿದರು.
ಸಹ ಶಿಬಿರಾಧಿಕಾರಿ ಹರ್ಷಿತ್ ಆರ್. ದಾನಿಗಳ ವಿವರವನ್ನು ವಾಚಿಸಿದರು. ಶಿಬಿರಾರ್ಥಿಗಳಾದ ವಿಷ್ಣುಜಿತ್, ಲವಿಕಾ ಶಿಬಿರದ ವರದಿ ವಾಚಿಸಿದರು. ಶಿಬಿರಾರ್ಥಿಗಳಾದ ಪ್ರತಿಭಾ, ಮನ್ವಿತ್ ಹಾಗೂ ಕಾವ್ಯ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಶಿಬಿರದ ಯಶಸ್ಸಿಗಾಗಿ ಶ್ರಮಿಸಿದವರನ್ನು ಗೌರವಿಸಲಾಯಿತು.
ಸ.ಹಿ.ಪ್ರಾ ಶಾಲೆ ಆನಡ್ಕಕ್ಕೆ ಕಿರು ಕಾಣಿಕೆಯನ್ನು ನೀಡಲಾಯಿತು. ನರಿಮೊಗರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಉಮೇಶ್ ಇಂದಿರಾನಗರ, ಸ.ಹಿ.ಪ್ರಾ ಶಾಲೆ ಆನಡ್ಕ ಇದರ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ನಾರಾಯಣ ಸುವರ್ಣ, ಸ.ಹಿ.ಪ್ರಾ. ಶಾಲೆ ಆನಡ್ಕ ಇದರ ಹಿರಿಯ ಶಿಕ್ಷಕಿ ವಿಶಾಲಾಕ್ಷಿ, ಅಯ್ಯಪ್ಪ ಸೇವಾ ಭಜನಾ ಮಂದಿರ ಆನಡ್ಕ ಇದರ ಅಧ್ಯಕ್ಷ ಪದ್ಮಯ್ಯ ಗೌಡ ಮಲೆಪಡ್ಪು, ನವಶಕ್ತಿ ಸ್ಪೋರ್ಟ್ಸ್ ಕ್ಲಬ್ ಮುಂಡೋಡಿ ಇದರ ಸ್ಥಾಪಕಾಧ್ಯಕ್ಷ ಆನಂದ ಬಲ್ಯಾಯ, ಹಾಲು ಉತ್ಪಾದಕರ ಸಹಕಾರಿ ಸಂಘ ಆನಡ್ಕ ಇದರ ಅಧ್ಯಕ್ಷೆ ವನಜಾಕ್ಷಿ ಮರಕ್ಕೂರು ಉಪಸ್ಥಿತರಿದ್ದರು.
ಶಿಬಿರಾರ್ಥಿಗಳಾದ ಅರ್ಚನಾ ಮತ್ತು ಬಳಗದವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವು ಆರಂಭವಾಯಿತು. ಶಿಬಿರಾಧಿಕಾರಿಗಳಾದ ಪುಷ್ಪ ಎನ್. ಸ್ವಾಗತಿಸಿ, ಡಾ. ಚಂದ್ರಶೇಖರ್ ಕೆ ವಂದಿಸಿದರು. ಶಿಬಿರಾರ್ಥಿಯಾದ ಗೀತಾ ಕೆ.ಬಿ. ಕಾರ್ಯಕ್ರಮ ನಿರೂಪಿಸಿದರು.