ಹಾಮದ್ ಸಾವಿಗೆ ನ್ಯಾಯ ಒದಗಿಸಲು ಮತ್ತು ಪರಿಹಾರಕ್ಕೆ ಆಗ್ರಹಿಸಿ ಪ್ರತಿಭಟನೆ

ಹಾಮದ್ ಸಾವಿಗೆ ನ್ಯಾಯ ಒದಗಿಸಲು ಮತ್ತು ಪರಿಹಾರಕ್ಕೆ ಆಗ್ರಹಿಸಿ ಪ್ರತಿಭಟನೆ


ಮಂಗಳೂರು: ತೇಜಸ್ವಿನಿ ಆಸ್ಪತ್ರೆಯ ವೈದ್ಯಕೀಯ ನಿರ್ಲಕ್ಷ್ಯಕ್ಕೆ ಒಳಗಾಗಿ ಸಾವನ್ನಪ್ಪಿದ ಪಂಜಿಮೊಗರು ನಿವಾಸಿ ಹಾಮದ್ ಎಂಬವರ ಸಾವಿಗೆ ನ್ಯಾಯ ಒದಗಿಸುವ ಮತ್ತು ಸಂತ್ರಸ್ತ ಕುಟುಂಬಕ್ಕೆ ಗರಿಷ್ಠ ಪ್ರಮಾಣದ ಪರಿಹಾರ ಒದಗಿಸಲು ಒತ್ತಾಯಿಸಿ ಡಿವೈಎಫ್‌ಐ ಪಂಜಿಮೊಗರು ಘಟಕ ನೇತೃತ್ವದಲ್ಲಿ ಇಂದು ಮಿನಿವಿಧಾನಸೌಧದ ಮುಂಭಾಗ ನಡೆದ ಪ್ರತಿಭಟನೆ ನಡೆಯಿತು.

ಈ ಸಂದರ್ಭದಲ್ಲಿ ಡಿವೈಎಫ್‌ಐ ದ.ಕ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಮಾತನಾಡಿ, ಡಿಸೆಂಬರ್ 21ರಂದು ಅಪಘಾತಗೊಳಗಾದ ಹಾಮದ್ ಅವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರೂ ಗಂಭೀರ ಗಾಯಗಳನ್ನು ಗುರುತಿಸಿ ಚಿಕಿತ್ಸೆ ನೀಡುವಲ್ಲಿ ತೇಜಸ್ವಿನಿ ಆಸ್ಪತ್ರೆ ಬೇಜಾವಾಬ್ದಾರಿ ವರ್ತನೆ ತೋರಿಸಿದ್ದು, ಈ ಘಟನೆಗೆ ಕಾರಣ. ಸುಮಾರು ಸಂಜೆ 4.30 ದಾಖಲಾಗಿರುವ ಹಾಮದ್ ಅವರನ್ನು ಪರೀಕ್ಷಿಸಿದ ವೈದ್ಯರ ತಂಡ ಕೇವಲ ಮೂಳೆ ಮುರಿತಗೊಳಗಾಗಿರುವುದನ್ನು ಪತ್ತೆ ಹಚ್ಚಿರುತ್ತಾರೆಯೆ ಹೊರತು ತಲೆಗಾದ ಬಲವಾದ ಗಾಯವನ್ನು ಹೆಚ್ಚಿನ ಪರೀಕ್ಷೆಗೊಳಪಡಿಸಿರುವುದಿಲ್ಲ ಎಂಬುದು ಕುಟುಂಬಸ್ಥರ ಬಲವಾದ ಆರೋಪ. ಕಾಲಿನ ಸರ್ಜರಿ ನಡೆಸಲಷ್ಟೇ ಪ್ಯಾಕೇಜ್ ಮೊತ್ತದ ಬಗ್ಗೆ ಚರ್ಚೆ ನಡೆಸಿ 20,000 ಮುಂಗಡ ಹಣ ಪಾವತಿಸಲು ಒತ್ತಾಯಿಸಿರುವರೇ ಹೊರತು ತಲೆಯ ಗಾಯಗಳ ಬಗ್ಗೆ ಪ್ರಸ್ತಾಪಗಳೇ ಇರಲಿಲ್ಲ. ಹಾಗಾದರೆ ಹಾಮದ್ ಅವರ ಆರೋಗ್ಯ ಏರುಪೇರಾಗುವವರೆಗೂ ತಲೆಯಲ್ಲಿದ್ದ ಗಾಯ ಪತ್ತೆ ಹಚ್ಚಿ ಹೆಚ್ಚಿನ ಪರೀಕ್ಷೆ ನಡೆಸುವಲ್ಲಿನ ವಿಳಂಬತನವು ಇವರ ನಿರ್ಲಕ್ಷ್ಯತನವನ್ನು ಮತ್ತು ಚಿಕಿತ್ಸಾ ಲೋಪವನ್ನು ಎತ್ತಿತೋರಿಸುತ್ತಿದೆ. ಆರೋಗ್ಯ ಇಲಾಖೆಗೆ ದೂರು ಸಲ್ಲಿಸಿದರೂ ಕೇವಲ ಖಾಸಗಿ ಆಸ್ಪತ್ರೆ ಪರವಾದ ವರದಿಗಳನ್ನು ನೀಡುತ್ತಿರುವುದು ಖೇದಕರ. ತೇಜಸ್ವಿನಿ ಆಸ್ಪತ್ರೆ ತಪ್ಪಾದ ಚಿಕಿತ್ಸಾ ಕ್ರಮಕ್ಕೆ ಹಾಮದ್ ಜೀವ ಬಲಿಯಾಗಿದೆ ಈ ಬಗ್ಗೆ ಸಮಗ್ರ ತನಿಖೆಗೊಳಪಡಿಸಿ ನ್ಯಾಯಯುತ ಪರಿಹಾರ ಒದಗಿಸಿಕೊಡಬೇಕೆಂದು ಜಿಲ್ಲಾಡಳಿತವನ್ನು ಒತ್ತಾಯಿಸಿದರು. 


ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಪಂಜಿಮೊಗರು ಪ್ರದೇಶದ ಮಾಜಿ ಕಾರ್ಪೊರೇಟರ್ ದಯಾನಂದ ಶೆಟ್ಟಿ ಅವರು, ಹಾಮದ್ ಸಾವಿಗೆ ವೈದ್ಯಕೀಯ ನಿರ್ಲಕ್ಷ್ಯದ ಜೊತೆಗೆ ಅಪಘಾತಕ್ಕೊಳಗಾಗಿ ಆಸ್ಪತ್ರೆಗೆ ದಾಖಲಾದಾಗ ಕನಿಷ್ಟ ಪೊಲೀಸ್ ಠಾಣೆಗೆ ಆಸ್ಪತ್ರೆಯವರು ಮಾಹಿತಿ ನೀಡದಿರುವುದು ಕೂಡ ಇವರ ಬೇಜವಬ್ದಾರಿ ವರ್ತನೆಗೆ ಸಾಕ್ಷಿಯಾಗಿದೆ. ಆರೋಗ್ಯ ಇಲಾಖೆಗೆ ಮನವಿ ಮಾಡಿದ್ದರೂ ತನಿಖೆ ಆದಾರದಲ್ಲಿ ತೇಜಸ್ವಿನಿ ಆಸ್ಪತ್ರೆ ನೀಡಿದ ವರದಿಯನ್ನೇ ಆರೋಗ್ಯ ಇಲಾಖೆ ಕನ್ನಡಕ್ಕೆ ತರ್ಜುಮೆ ಮಾಡಿ ತನ್ನ ವರದಿಯೆಂದು ನೀಡಿದೆ. ಆರೋಗ್ಯ ಇಲಾಖೆ ಈ ಘಟನೆ ಬಗ್ಗೆ ನಿರ್ಲಕ್ಷ್ಯ ತೋರಿದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ತೀವೃಗೊಳಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯನ್ನು ಉದ್ದೇಶಿಸಿ ಡಿವೈಎಫ್‌ಐ ಮುಖಂಡ ಶ್ರೀನಾಥ್ ಕಾಟಿಪಳ್ಳ ಮಾತನಾಡಿದರು.


ಈ ವೇಳೆ ತಾಲೂಕು ಆರೋಗ್ಯಾಧಿಕಾರಿ ಡಾ ಸುಜಯ್ ಪ್ರತಿಭಟನಾ ಸ್ಥಳಕ್ಕಾಗಮಿಸಿ ಮನವಿಯನ್ನು ಸ್ವೀಕರಿಸಿದರು. ಈ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿಗಳ ಜೊತೆ ಚರ್ಚಿಸಿ ಸಮಗ್ರ ತನಿಖೆಗೊಳಪಡಿಸುವ ಭರವಸೆ ವ್ಯಕ್ತಪಡಿಸಿದರು. 

ಪ್ರತಿಭಟನೆಯಲ್ಲಿ ಡಿವೈಎಫ್‌ಐ ಮಂಗಳೂರು ನಗರ ಅದ್ಯಕ್ಷ ಜಗದೀಶ್ ಬಜಾಲ್, ಜಿಲ್ಲಾ ಮುಖಂಡ ರಿಜ್ವಾನ್ ಹರೇಕಳ, ಡಿವೈಎಫ್‌ಐ ಪಂಜಿಮೊಗರು ಘಟಕ ಅಧ್ಯಕ್ಷ ಚರಣ್ ಶೆಟ್ಟಿ, ಜನವಾದಿ ಮಹಿಳಾ ಸಂಘಟನೆ ಮುಖಂಡರಾದ ಪ್ರಮೀಳಾ, ಮೃತ ಹಾಮದ್ ರವರ ಮಗ ಹನೀಫ್, ಕಲಂದರ್, ಡಿವೈಎಫ್‌ಐ ಮುಖಂಡರಾದ ನೌಶಾದ್, ಬಶೀರ್, ಅಝರ್, ಹನುಮಂತ, ಖಲೀಲ್, ಅಸುಂತಾ ಡಿಸೋಜ, ಸೋಮೇಶ, ನವೀನ್ ಡಿಸೋಜ, ಖಾದರ್, ಮುಸ್ತಾಫ, ಹಕೀಂ ಮಾಹಿಲಾ, ಅಬೂಬಕರ್, ಕಲಂದರ್, ಶೆರೀಫ್, ಸಿದ್ದಿಕ್, ಅನೀಸ್, ಹಮೀದ್, ಶೇರು ಬಾನು, ತ್ರಿಶಾ, ಸೋಮನಾಥ್ ಮತ್ತಿತರರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article