
ಒಂದೇ ದಿನ ಎರಡು ನಾಯಿಯನ್ನು ಕೊಂದ ಚಿರತೆ
Saturday, February 8, 2025
ಸುಳ್ಯ: ಇಲ್ಲಿನ ಅಜ್ಜಾವರ ಗ್ರಾಮದ ಮನೆಯೊಂದರ ಅಂಗಳಕ್ಕೆ ಚಿರತೆಯೊಂದು ಬಂದು ಎರಡು ನಾಯಿಯ ಮೇಲೆ ದಾಳಿ ಮಾಡಿ ಕೊಂದು ಹಾಕಿರುವ ಘಟನೆ ನಡೆದಿದೆ.
ಬಿಎಸ್ಎನ್ಎಲ್ ನಿವೃತ್ತ ಉದ್ಯೋಗಿ ಪಡ್ಡಂಬೈಲು ಶಂಕರ ಪಾಟಾಳಿ ಅವರ ಮನೆ ಅಂಗಳದಲ್ಲಿ ರಾತ್ರಿ ಸುಮಾರು 1 ಗಂಟೆ 40 ನಿಮಿಷದಿಂದ 1 ಗಂಟೆ 42 ನಿಮಿಷದೊಳಗೆ ಚಿರತೆ ಬಂದಿದೆ. ನಂತರ ಅಲ್ಲಿದ್ದ ನಾಯಿಯನ್ನು ಹಿಡಿದು ಅಂಗಳದಲ್ಲೇ ಕೊಂದು ತಿನ್ನಲು ಮುಂದಾಗಿದೆ. ಈ ವೇಳೆ ಇನ್ನೊಂದು ನಾಯಿ ಬೊಗಳುವ ಶಬ್ದ ಕೇಳಿ ಮನೆಯವರು ನಿದ್ರೆಯಿಂದ ಎದ್ದು ಹೊರಬರುವಷ್ಟರಲ್ಲಿ ಅಲ್ಲಿಂದ ಪರಾರಿಯಾಗಿದೆ.
ಮುಂಜಾನೆ ಸುಮಾರು 5 ಗಂಟೆ 25 ನಿಮಿಷಕ್ಕೆ ಮತ್ತೆ ಬಂದು ಎರಡನೇ ನಾಯಿಯನ್ನೂ ಕೊಂದು ಹಾಕಿದೆ. ಆ ಸಂದರ್ಭದಲ್ಲಿ ಮನೆಯವರು ಎಚ್ಚರಗೊಂಡು ಲೈಟ್ ಹಾಕುವ ಸಂದರ್ಭದಲ್ಲಿ ಅಲ್ಲಿಂದ ಮತ್ತೆ ಪರಾರಿಯಾಗಿದೆ.
ಒಂದೇ ರಾತ್ರಿ ಬೇರೆ ಬೇರೆ ಸಮಯಗಳಲ್ಲಿ ಎರಡು ಬಾರಿ ಅಂಗಳಕ್ಕೆ ಬಂದು ಚಿರತೆ ಸಂಚರಿಸಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.