
ಗೋವನ್ನು ರಾಷ್ಟ್ರೀಯ ಪ್ರಾಣಿಯಾಗಿ ಪರಿಗಣಿಸಿ: ರಮಿತಾ ಶೈಲೇಂದ್ರ ಕಾರ್ಕಳ
ಬಂಟ್ವಾಳ: ಪ್ರಪಂಚದಲ್ಲಿರುವ ಎಲ್ಲಾ ಪ್ರಾಣಿಗಳ ಪೈಕಿ ಗೋವು ಶ್ರೇಷ್ಟ ಪ್ರಾಣಿಯಾಗಿದ್ದು, ಗೋವುಗಳ ಸಂಖ್ಯೆ ಹೆಚ್ಚಾದಂತೆ ಸಮಾಜದಲ್ಲಿ ಶಾಂತಿಯು ನೆಲೆಸಿ ರಾಷ್ಟ್ರವು ಸಮೃದ್ದ ಭರಿತವಾಗುತ್ತದೆ ಗೋಮಾತೆಯು ಭೂಮಾತೆಯ ಪ್ರತೀಕವಾಗಿದ್ದು, ಸಾಕ್ಷತ್ ಭಗವಂತನನ್ನು ಗೋಮಾತೆಯ ಮೂಲಕ ಕಾಣಬಹುದಾಗಿದೆ ಎಂದು ಗ್ರಾಮ ವಿಕಾಸ ಮಂಗಳೂರು ವಿಭಾಗದ ಟೋಲಿ ಸದಸ್ಯೆ ರಮಿತಾ ಶೈಲೇಂದ್ರ ಕಾರ್ಕಳ ತಿಳಿಸಿದ್ದಾರೆ.
ಗೋಸೇವಾ ಗತಿ ವಿಧಿ ಕರ್ನಾಟಕ, ರಾಧ ಸುರಭಿ ಗೋಮಂದಿರ, ರಾಷ್ಟ್ರೀಯ ಗೋಸೇವಾ ಸಂಸ್ಥಾನ್ ಟ್ರಸ್ಟ್ ನಂದಿ ರಥಯಾತ್ರೆ ಆಯೋಜನಾ ಸಮಿತಿ ಸಿದ್ದಕಟ್ಟೆ,ಸಂಗಬೆಟ್ಟು ಮಂಡಲ ಬಂಟ್ವಾಳ ತಾಲೂಕು ವತಿಯಿಂದ ಸಿದ್ದಕಟ್ಟೆ ಪೇಟೆಯಲ್ಲಿ ಗುರುವಾರ ಸಂಜೆ ಜರಗಿದ ನಂದಿರಥ ಯಾತ್ರೆ ಶೋಭಾಯಾತ್ರೆ ,ವಿಷ್ಣು ಸಹಸ್ರ ನಾಮ ಪಾರಾಯಣ ಹಾಗೂ ಗೋಕಥೆ ಬಗೆಗಿನ ಸಾಮೂಹಿಕ ಸಭಾ ಕಾರ್ಯಕ್ರಮದಲ್ಲಿ ಗೋವಿನ ವಿಶೇಷತೆ ಬಗ್ಗೆ ಅವರು ಬೌದ್ದಿಕ್ ನೀಡಿದರು
ಭಾರತವು ಗೋಮಾತೆಗೆ ವಿಶೇಷವಾಗಿ ತಾಯಿಯ ಸ್ಥಾನ ನೀಡಿರುವುದರಿಂದ ಭಾರತ ಸಂಪದ್ಬರಿತ ರಾಷ್ಟ್ರವಾಗಿರುವುದನ್ನು ಮನಗಂಡ ಬ್ರಿಟಿಷರು ಭಾರತದಲ್ಲಿನ ಗೋವುಗಳ ಸಂಖ್ಯೆ ಕಡಿಮೆ ಮಾಡುವ ದುರುದ್ದೇಶದಿಂದ ಕಸಾಯಿಖಾನೆಯನ್ನು ತೆರೆಯುವ ಮೂಲಕ ಪಿತೂರಿ ನಡೆಸಿದರು. ಆದರೆ ಗೋವುಗಳನ್ನು ನಾಶ ಮಾಡುವ ಬ್ರಿಟಿಷರ ಕುತಂತ್ರ ಭಾರತದಲ್ಲಿ ಫಲಿಸಲಿಲ್ಲ .ಈ ನಿಟ್ಟಿನಲ್ಲಿ ಗೋ ಮಾತೆಯನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಪರಿಗಣಿಸಬೇಕೆಂದು ಆಗ್ರಹಿಸಿದರು.
ಪುದುಗ್ರಾಮದ ರಾಧ ಸುರಭಿ ಗೋಮಂದಿರ, ರಾಷ್ಟ್ರೀಯ ಗೋಸೇವಾ ಸಂಸ್ಥಾನ್ ಟ್ರಸ್ಟ್ (ರಿ) ಸಂಸ್ಥಾಪಕರಾದ ಭಕ್ತಿ ಭೂಷಣ್ ದಾಸ್ ಮಾತಾನಾಡಿ,ಗೋವಿನ ಪ್ರತಿಯೊಂದು ವಸ್ತುವು ಸಕಲ ರೋಗಗಳಿಗೆ ಮನೆ ಮದ್ದಾಗಿದ್ದು, ಗೋವು ರಕ್ಷಣೆ ಮಾಡಿದರೆ ಮಾತ್ರ ಮನುಕುಲದ ರಕ್ಷಣೆ ಆಗುತ್ತದೆ. ಗೋವು ಸಂತತಿ ಇಲ್ಲದೇ ಮಾನವ ಸಂತತಿ ಬೆಳವಣಿಗೆ ಸಾಧ್ಯವಿಲ್ಲ, ನಾವು ನಿತ್ಯ ಜೀವನದಲ್ಲಿ ಗೋಭಕ್ತಿ ಮತ್ತು ಗುರುಭಕ್ತಿಯನ್ನು ಮೈಗೂಡಿಸಿಗೊಂಡಾಗ ಜೀವನ ಸಾರ್ಥಕವಾಗಲು ಸಾಧ್ಯ ಎಂದರು.
ನಂದಿಯ ನಾಲ್ಕು ಕಾಲುಗಳು ಧರ್ಮದ ನಾಲ್ಕು ಕಂಬಗಳಿದ್ದಂತೆ ನಂದಿಯು ಧರ್ಮದ ಪ್ರತೀಕವಾಗಿದ್ದು, ಗೋ ಉತ್ಪನ್ನಗಳನ್ನು ಬಳಸಿಕೊಂಡು ದೇಶಿಯ ತಳಿಗಳ ಸಂರಕ್ಷಣೆ ಮಾಡುವ ಮೂಲಕ ಗೋಮಾತೆಯನ್ನು ನಿತ್ಯ ನಿರಂತರ ಪೂಜಿಸೋಣ ಎಂದು ಹೇಳಿದರು.
ಆರಂಬೋಡಿ ಹಾಲು ಉತ್ಪಾದಕರ ಸಹಕಾರದ ಸಂಘದ ಉಪಾಧ್ಯಕ್ಷ ಪ್ರತಾಪ ಶೆಟ್ಟಿ ಕುಂಡಾಜೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ನಂದಿ ರಥಯಾತ್ರೆ ಆಯೋಜನಾ ಸಮಿತಿ ಸಿದ್ದಕಟ್ಟೆ ಸಂಚಾಲಕರಾದ ಪ್ರಭಾಕರ ಪ್ರಭು ಸ್ವಾಗತಿಸಿದರು. ಪ್ರಜ್ವಲ್ ಸಿದ್ದಕಟ್ಟೆ ಕಾರ್ಯಕ್ರಮ ನಿರೂಪಿಸಿದರು, ಉಮೇಶ್ ಗೌಡ ಮಂಚಕಲ್ಲು ವಂದಿಸಿದರು.