ಸಾಸ್ತಾನ: ವೈಭವದ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವಕ್ಕಾಗಿ ಕ್ಷಣಗಣನೆ

ಸಾಸ್ತಾನ: ವೈಭವದ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವಕ್ಕಾಗಿ ಕ್ಷಣಗಣನೆ


ಕುಂದಾಪುರ: ಉಡುಪಿ ಜಿಲ್ಲೆ ಬ್ರಹ್ಮಾವರ ತಾಲೂಕು ಸಾಸ್ತಾನದಲ್ಲಿ ಸಾರ್ವಜನಿಕ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿಯ ಆಶ್ರಯದಲ್ಲಿ ನಾಳೆಯಿಂದಾರಂಭಿಸಿ, ಏಪ್ರಿಲ್ 3 ರವರೆಗೆ ನಡೆಯಲಿರುವ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವಕ್ಕಾಗಿ ಸಾಸ್ತಾನದ ಕಾರ್ತಿಕೇಯ ಎಸ್ಟೇಟ್ ಭವ್ಯವಾಗಿ ಸಜ್ಜುಗೊಂಡಿದೆ.

ರಾಷ್ಟ್ರೀಯ ಹೆದ್ದಾರಿ ಬಳಿ ಆಕರ್ಷಕವಾದ ಭೂ ವೈಕುಂಠ ಮಹಾದ್ವಾರವನ್ನು ಈಗಾಗಲೇ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಗಣ್ಯರ ಜೊತೆಗೂಡಿ ಉದ್ಘಾಟಿಸಿದ್ದಾರೆ. ಸಾಲಿಗ್ರಾಮದಿಂದ ಬ್ರಹ್ಮಾವರದವರೆಗೂ ಹೆದ್ದಾರಿ ಇಕ್ಕೆಲಗಳಲ್ಲಿ ಆಕರ್ಷಕ ಬೃಹತ್ ಹೋರ್ಡಿಂಗ್, ಸರದೀಪ, ಬ್ಯಾನರ್‌ಗಳನ್ನು ಹಾಕಿ ಗಣ್ಯರು ಶುಭಕೋರಿದ್ದಾರೆ. ಸಾಸ್ತಾನದ ವಿಶಾಲವಾದ ಕಾರ್ತಿಕೇಯ ಎಸ್ಟೇಟ್ ಸಾಕ್ಷಾತ್ ಭೂ ವೈಕುಂಠದಂತೆಯೇ ಸಿಂಗಾರಗೊಂಡು ಕಂಗೊಳಿಸುತ್ತಿದೆ.

ಏ.1 ರಂದು ಬೆಳಗ್ಗೆ 9 ಗಂಟೆಗೆ ಸಾಮೂಹಿಕ ದೇವತಾ ಪ್ರಾರ್ಥನೆ, ಮಹಾಗಣಪತಿ ಯಾಗದ ಮೂಲಕ ವೈಭವದ ಶ್ರೀ ಶ್ರೀನಿವಾಸ ಕಲ್ಯಾಣ ಕಾರ್ಯಕ್ರಮಗಳಿಗೆ ಅಧಿಕೃತ ಚಾಲನೆ ದೊರೆಯಲಿದೆ. ಸಂಜೆ ಭವ್ಯ ಮೆರವಣಿಗೆಯ ಮೂಲಕ ಮದುವೆಯ ಹೊರೆಕಾಣಿಕೆ ಆಗಮಿಸಲಿದೆ. ಏ.2 ರಂದು ಬೆಳಗ್ಗೆ ನವಗ್ರಹ ಹೋಮ, ನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಕುಣಿತ ಭಜನೆ ನಡೆಯಲಿವೆ. 

ರಾತ್ರಿ 7.45 ರಿಂದ ಸಾರ್ವಜನಿಕ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿಯ ಅಧ್ಯಕ್ಷ ಎಂ.ಸಿ. ಚಂದ್ರಶೇಖರ ಪೂಜಾರಿಯವರ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭೆಯು ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕಾರ್ಯಕ್ರಮವನ್ನು ಉದ್ಘಾಟಿಸುವರು. ವಿಧ್ವಾಂಸರು, ಜನಪ್ರತಿನಿಧಿಗಳು, ಉದ್ಯಮಿಗಳು, ದಾನಿಗಳು, ಗಣ್ಯಮಾನ್ಯರು ಸಭೆಯಲ್ಲಿ ಪಾಲ್ಗೊಳ್ಳುವರು. 

ಏ.3 ರಂದು ಬೆಳಗ್ಗೆ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ವಿಷ್ಣು ಸಹಸ್ರನಾಮ ಪಾರಾಯಣ ನಡೆಯುತ್ತದೆ. ಮಧ್ಯಾಹ್ನ 3 ಗಂಟೆಗೆ ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಾಲಯದಿಂದ ಕುಣಿತ ಭಜನೆ, ಆಕರ್ಷಕ ಟ್ಯಾಬ್ಲೋಗಳು, ಮಂಗಳ ವಾದ್ಯಗಳೊಂದಿಗೆ ಭವ್ಯವಾದ ಪದ್ಮಾವತಿ ಸಹಿತ ಶ್ರೀ ಶ್ರೀನಿವಾಸನ ದಿವ್ಯ ಶೋಭಾಯಾತ್ರೆ ಎಸ್ಟೇಟಿನ ವಿವಾಹ ಮಂಟಪಕ್ಕೆ ಆಗಮಿಸಲಿದೆ. ನಂತರ ಋತ್ವಿಜರಿಂದ ವಿವಾಹ ಧಾರ್ಮಿಕ ಕಾರ್ಯಕ್ರಮಗಳು ನಡೆದು, ಸಂಜೆ 6.30 ರ ಗೋಧೂಳಿ ಲಗ್ನ ಸುಮುಹೂರ್ತದಲ್ಲಿ ಶ್ರೀ ಶ್ರೀನಿವಾಸ-ಪದ್ಮಾವತಿಯರ ಕಲ್ಯಾಣೋತ್ಸವ ನೆರವೇರಲಿದೆ. ರಾತ್ರಿ 8.30 ರಿಂದ ವಿವಾಹ ಭೋಜನ ನಡೆಯಲಿದೆ.

ಕಲ್ಯಾಣೋತ್ಸವ ಸಮಿತಿ ಹಾಗೂ ವಿವಿಧ ಉಪಸಮಿತಿಗಳು, ವಿವಿಧ ಸಂಘ-ಸಂಸ್ಥೆಗಳವರು, ಈಗಾಗಲೇ ಅಹೋರಾತ್ರಿ ಈ ಮಹಾನ್ ಕಲ್ಯಾಣೋತ್ಸವ ಯಶಸ್ಸಿಗಾಗಿ ಶ್ರಮಿಸುತ್ತಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article