
ಶಕ್ತಿ ವಸತಿ ಶಾಲೆಯಲ್ಲಿ ಜಿಲ್ಲೆಯ ಸಿಬಿಎಸ್ಇ ಶಾಲೆಗಳ ವಿಜ್ಞಾನ ಮತ್ತು ಗಣಿತ ಶಿಕ್ಷಕರಿಗೆ ಎರಡು ದಿನದ ಕಾರ್ಯಗಾರ
Wednesday, March 19, 2025
ಮಂಗಳೂರು: ಶಕ್ತಿನಗರದ ಶಕ್ತಿ ರೆಸಡೆನ್ಶಿಯಲ್ ಶಾಲೆಯಲ್ಲಿ ಸಿಬಿಎಸ್ಇ ದೆಹಲಿಯಿಂದ ‘ವಿಜ್ಞಾನ ಮತ್ತು ಗಣಿತ ಸಾಮರ್ಥ್ಯ ಆಧಾರಿತ ಮೌಲ್ಯಮಾಪನ’ ವಿಷಯದ ಕುರಿತು ದಕ್ಷಿಣ ಕನ್ನಡ ಜಿಲ್ಲೆಯ ಸಿಬಿಎಸ್ಇ ಶಾಲೆಯಲ್ಲಿ ಭೋದನೆ ಮಾಡುತ್ತಿರುವ ವಿಜ್ಞಾನ ಮತ್ತು ಗಣಿತ ಶಿಕ್ಷಕರಿಗೆ ಎರಡು ದಿನದ ಕಾರ್ಯಗಾರವನ್ನು ಇಂದು ಉದ್ಘಾಟಿಸಲಾಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಶಕ್ತಿ ಎಜ್ಯುಕೇಶನ್ ಟ್ರಸ್ಟ್ನ ಪ್ರಧಾನ ಸಲಹೆಗಾರ ರಮೇಶ ಕೆ. ಮಾತನಾಡಿ, ಸಿಬಿಎಸ್ಇಯು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಯಶಸ್ವಿಯಾಗಿ ಅಳವಡಿಸುತ್ತಿರುವ ಸಂದರ್ಭದಲ್ಲಿ ಗಣಿತ ಮತ್ತು ವಿಜ್ಞಾನ ಅಧ್ಯಾಪಕರಿಗೆ ಕಾರ್ಯಗಾರವನ್ನು ಆಯೋಜಿಸುವ ಮೂಲಕ ವಿಷಯದ ಜ್ಞಾನವನ್ನು ನೀಡುತ್ತಿದೆ. ನಾವೆಲ್ಲ ಶಿಕ್ಷಕರು ನಾವು ಬೋಧನೆ ಮಾಡುತ್ತಿರುವ ವಿಷಯದಲ್ಲಿ ಆಳವಾಗಿ ಅಧ್ಯಯನ ಮಾಡಿಕೊಂಡು ಜ್ಞಾನವಂತರಾಗಿದ್ದರು, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಇನ್ನಷ್ಟು ಜ್ಞಾನವನ್ನು ಪಡೆಯಬೇಕಾಗುತ್ತದೆ. ಈ ಜ್ಞಾನವನ್ನು ಕಾರ್ಯಗಾರದ ಮೂಲಕ ಪಡೆಯಲು ಸಾಧ್ಯವಿದೆ. ನಾವು ವಿದ್ಯಾರ್ಥಿಗಳಿಗೆ ಉತ್ತಮವಾಗಿರುವ ಜ್ಞಾನವನ್ನು ನೀಡಬೇಕಾಗಿದೆ. ಅನೇಕ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಎದುರಿಸಲು ಗಣಿತ ಮತ್ತು ವಿಜ್ಞಾನ ವಿಷಯಗಳು ಅತಿ ಅವಶ್ಯವಾಗಿರುತ್ತದೆ. ಆದ್ದರಿಂದ ಈ ಕಾರ್ಯಗಾರವನ್ನು ಶಕ್ತಿ ವಿದ್ಯಾ ಸಂಸ್ಥೆಯಲ್ಲಿ ಆಯೋಜಿಸಲು ಅನುವು ಮಾಡಿಕೊಟ್ಟಿರುವ ಸಿಬಿಎಸ್ಇ ಬೋರ್ಡ್ಗೆ ಅಭಿನಂದನೆಯನ್ನು ಸಲ್ಲಿಸಿದರು.
ಶಕ್ತಿ ವಿದ್ಯಾ ಸಂಸ್ಥೆಯಲ್ಲಿ ಶೈಕ್ಷಣಿಕ ಕಾರ್ಯಗಾರಕ್ಕೆ ಬೇಕಾಗಿರುವ ಎಲ್ಲಾ ವ್ಯವಸ್ಥೆಯನ್ನು ಕಲ್ಪಿಸಲು ಸಂಸ್ಥೆಯ ಸಂಸ್ಥಾಪಕ ಡಾ. ಕೆ.ಸಿ. ನಾಕ್ ಸ್ವತಃ ಮುತುವರ್ಜಿಯನ್ನು ವಹಿಸಿರುವುದರಿಂದ ಇಲ್ಲಿಗೆ ಆಗಮಿಸಿರುವ ಎಲ್ಲಾ ಶಿಕ್ಷಕರಿಗೆ ಇದರ ಪ್ರಯೋಜನ ಲಭಿಸಲೆಂದು ಶುಭ ಹಾರೈಸಿದರು.
ಈ ಕಾರ್ಯಗಾರದಲ್ಲಿ ವಿಜ್ಞಾನಕ್ಕೆ ವಿಷಯದಲ್ಲಿ ಜಿಲ್ಲೆಯ ಒಟ್ಟು 28 ಶಾಲೆಗಳಿಂದ 45 ಶಿಕ್ಷಕರು ಮತ್ತು ಗಣಿತ ವಿಷಯದಲ್ಲಿ ಜಿಲ್ಲೆಯ 22 ಶಾಲೆಗಳಿಂದ 40 ಶಿಕ್ಷಕರು ಭಾಗವಹಿಸಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಪೊದಾರ್ ಇಂಟರ್ ನ್ಯಾಷನಲ್ ಶಾಲೆ ಉಡುಪಿಯ ಪ್ರಾಂಶುಪಾಲ ಉದಯ ಕುಮಾರ್ ಎ.ಎನ್., ವಿದ್ಯಾದಾಯಿನಿ ಇಂಗ್ಲೀಷ್ ಮೀಡಿಯಂ ಸುರತ್ಕಲ್ನ ಪ್ರಾಂಶುಪಾಲ ಶಿಶಿಕುಮಾರ್, ಪುತ್ತೂರು ಅಂಬಿಕಾ ಶಾಲೆಯ ವಿದ್ಯಾಲಕ್ಷ್ಮಿ ಮತ್ತು ಪೊದಾರ್ ಇಂಟರ್ನ್ಯಾಷನಲ್ ಶಾಲೆಯ ಶಿಕ್ಷಕಿ ಪ್ರತಿಭಾ ಆಗಮಿಸಿ ಮಾರ್ಗದರ್ಶನ ನೀಡಿದರು.
ಈ ಸಂದರ್ಭದಲ್ಲಿ ಶಕ್ತಿ ಪಪೂ ಕಾಲೇಜು ಪ್ರಾಂಶುಪಾಲ ವೆಂಕಟೇಶ ಮೂರ್ತಿ ಹೆಚ್. ಉಪಸ್ಥಿತರಿದ್ದರು. ಶಕ್ತಿ ರೆಸಿಡೆನ್ಶಿಯಲ್ ಶಾಲೆ ಪ್ರಾಂಶುಪಾಲೆ ಬಬಿತಾ ಸೂರಜ್ ಸ್ವಾಗತಿಸಿ, ಶಿಕ್ಷಕಿ ಪ್ರಿಯಾಂಕ ರೈ ನಿರೂಪಿಸಿದರು.