
ವಿಶ್ವವಿದ್ಯಾನಿಲಯ ಮುಚ್ಚಲು ರಾಜ್ಯ ಸರ್ಕಾರ ಹುನ್ನಾರ
ಮಂಗಳೂರು: ಕರ್ನಾಟಕದ ಕಾಂಗ್ರೆಸ್ ಸರ್ಕಾರ ರಾಜ್ಯದ 9 ವಿಶ್ವ ವಿಶ್ವವಿದ್ಯಾನಿಲಯಗಳನ್ನು ಮುಚ್ಚುವ ಹುನ್ನಾರ ನಡೆಸುತ್ತಿದ್ದು ಇದನ್ನು ತೀವ್ರವಾಗಿ ವಿರೋಧಿಸುವುದಾಗಿ ಬಿಜೆಪಿ ಶಿಕ್ಷಣ ಪ್ರಕೋಷ್ಠದ ರಾಜ್ಯ ಸಮಿತಿ ಸದಸ್ಯ ಮುರಳಿ ಹೊಸಮಜಲು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಆರಂಭಿಸಿದ 10 ಹೊಸ ವಿ.ವಿ.ಗಳ ಪೈಕಿ ಹಾಸನ, ಚಾಮರಾಜನಗರ, ಕೊಡಗು ಸಹಿತ 9 ವಿಶ್ವವಿದ್ಯಾನಿಲಯವನ್ನು ಮುಚ್ಚುವ ಪ್ರಯತ್ನ ನಡೆಯುತ್ತಿದೆ. ಬೀದರ್ ವಿ.ವಿ.ಯನ್ನು ಮಾತ್ರ ಉಳಿಸಲು ಸರ್ಕಾರ ನಿರ್ಧರಿಸಿದೆ.
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸಚಿವ ಸಂಪುಟ ಉಪ ಸಮಿತಿ ಫೆ.14 ರಂದು ನಡೆಸಿದ ಸಭೆಯಲ್ಲಿ ಈ ತೀರ್ಮಾನ ಕೈಗೊಂಡಿದೆ. ವಿಶ್ವವಿದ್ಯಾನಿಲಯಗಳು ಲಾಭದಾಯಕವಲ್ಲ .ಸೂಕ್ತ ಸೌಲಭ್ಯಗಳ ಕೊರತೆ ಹಾಗೂ ಹಣಕಾಸಿನ ಮುಗ್ಗಟ್ಟು ಮುಚ್ಚಲು ಕಾರಣ ಎಂದು ಸಮಿತಿ ತಿಳಿಸಿರುವುದು ನಾಚಿಕೆಗೇಡಿನ ವಿಚಾರ ಎಂದು ಅವರು ಹೇಳಿದರು.
ಮಾಜಿ ಎಂಎಲ್ಸಿ ಕ್ಯಾ.ಗಣೇಶ್ ಕಾರ್ಣಿಕ್ ಮಾತನಾಡಿ ‘ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಆಗಿನ ಶಿಕ್ಷಣ ಸಚಿವ ಡಾ.ಅಶ್ವಥ್ ನಾರಾಯಣ ಅವರ ಕಲ್ಪನೆಯಂತೆ ಒಂದು ಜಿಗೆ ಒಂದು ವಿಶ್ವವಿದ್ಯಾನಿಲಯ ಆರಂಭಿಸಲಾಗಿತ್ತು. ಬಿಜೆಪಿ ಸರ್ಕಾರ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಪಡೆಯುವ ಅವಕಾಶ ಹೆಚ್ಚಿಸುವ ನಿಟ್ಟಿನಲ್ಲಿ ವಿ.ವಿ.ಗಳನ್ನು ಆರಂಭಿಸಿ, ಈಗಿನ ಕಾಂಗ್ರೆಸ್ ಶಿಕ್ಷಣದ ಅಭಿವೃದ್ಧಿಯನ್ನು ಕುಂಠಿತಗೊಳಿಸುತ್ತಿದೆ. ವಿ.ವಿ.ಗಳನ್ನು ಮುಚ್ಚುವ ಮೂಲಕ ಹಲವಾರು ಜಿಗಳ ಉನ್ನತ ಶಿಕ್ಷಣ ಆಕಾಂಕ್ಷಿಗಳ ನಿರೀಕ್ಷೆಗೆ ತಣ್ಣೀರೆರೆಚುವ ಪ್ರಯತ್ನವನ್ನು ಈ ಸರ್ಕಾರ ಮಾಡುತ್ತಿದೆ ಎಂದು ಆರೋಪಿಸಿದರು.
ಎಲ್ಲಾ ಜಿಗಳಲ್ಲಿ ಇರುವ ಸರ್ಕಾರಿ ವಿ.ವಿ.ಗಳಿಗೆ ಅವಶ್ಯ ಮೂಲಭೂತ ಸೌಕರ್ಯ ಮತ್ತು ಹಣಕಾಸು ಒದಗಿಸುವುದು ಸರ್ಕಾರದ ಜವಾಬ್ದಾರಿ. ಆದರೆ ಕಾಂಗ್ರೆಸ್ ಸರ್ಕಾರ ಈ ನಿಟ್ಟಿನಲ್ಲಿ ವಿಫಲವಾಗಿದೆ. ವಿ.ವಿ.ಗಳನ್ನು ಆದಾಯ ತರುವ ದೇಗುಲಗಳಂತೆ ನೋಡದೆ ಸಾಮಾಜಿಕ ಬೆಳವಣಿಗೆಗೆ ವಿದ್ಯಾಭ್ಯಾಸದ ಮಟ್ಟವನ್ನು ಉನ್ನತೀಕರಿಸುವ ವಿದ್ಯಾ ದೇಗುಲಗಳಾಗಿ ನೀಡಬೇಕು. ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣವನ್ನು ಸರ್ಕಾರ ನಿರಾಕರಿಸಬಾರದೆಂದು ಕ್ಯಾ.ಕಾರ್ಣಿಕ್ ಆಗ್ರಹಿಸಿದರು.
ಬಿಜೆಪಿ ಜಿಲ್ಲಾ ವಕ್ತಾರ ರಾಜ್ಗೋಪಾಲ ರೈ ಉಪಸ್ಥಿತರಿದ್ದರು.