
ಘಟಕ ಕಾಲೇಜುಗಳ ನಿರ್ವಹಣೆ ಕಷ್ಟಸಾಧ್ಯ: ಪ್ರೊ. ಪಿ.ಎಲ್. ಧರ್ಮ
ಮಂಗಳೂರು: ಈಗಿರುವ ಪರಿಸ್ಥಿತಿಯಲ್ಲಿ ಮಂಗಳೂರು ವಿವಿಯ ಘಟಕ ಕಾಲೇಜುಗಳ ನಿರ್ವಹಣೆ ಕಷ್ಟ ಸಾಧ್ಯವಾಗಿದೆ. ಪದವಿ ಕಾಲೇಜುಗಳಿಗೆ ಖಾಯಂ ಉಪನ್ಯಾಸಕರ ಕೊರತೆ ಇದೆ. ಅತಿಥಿ ಉಪನ್ಯಾಸಕರು ಉತ್ತಮವಾಗಿ ನಿರ್ವಹಣೆ ತೋರುತ್ತಿದ್ದರೂ, ಹಿರಿಯ ಅನುಭವಿ ಅಧ್ಯಾಪಕರ ಅಗತ್ಯ ಇದೆ. ಅದಕ್ಕಾಗಿ ಈ ಘಟಕ ಕಾಲೇಜುಗಳನ್ನು ಸರಕಾರಿ ಕಾಲೇಜು ಆಗಿ ಪರಿವರ್ತಿಸಲು ಮನವಿ ಮಾಡಲಾಗಿದೆ. ಈ ಮೂಲಕ ವಿದ್ಯಾರ್ಥಿಗಳಿಗೂ ನ್ಯಾಯ ದೊರಕಿಸಲು ಸಾಧ್ಯವಾಗಲಿದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ.ಎಲ್. ಧರ್ಮ ತಿಳಿಸಿದರು.
ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಸಂಧ್ಯಾ ಕಾಲೇಜು, ಮಂಗಳಗಂಗೋತ್ರಿ, ಬನ್ನಡ್ಕ, ನೆಲ್ಯಾಡಿ ಸೇರಿ ನಾಲ್ಕು ಘಟಕ ಕಾಲೇಜುಗಳು ಕಾರ್ಯ ನಿರ್ವಹಿಸುತ್ತಿವೆ. ಮಂಗಳೂರು ವಿವಿಯ ಸಂಧ್ಯಾ ಕಾಲೇಜಿಗೆ ಅಧಿಕೃತ ಸ್ಥಾನಮಾನವೇ ದೊರಕಿಲ್ಲ. ಅಲ್ಲಿ ಕಾರ್ಯ ನಿರ್ವಹಿಸುತ್ತಿರುವವವರು ಅತಿಥಿ ಉಪನ್ಯಾಸಕರು, ಪ್ರಾಂಶುಪಾಲರಾಗಿ ವಿಶ್ವವಿದ್ಯಾನಿಲಯದ ಹಿರಿಯ ಪ್ರಾಧ್ಯಾಪಕರಿದ್ದಾರೆ. ಆದರೆ ಖಾಯಂ ಅಧ್ಯಾಪಕರನ್ನು ನೇಮಕ ಮಾಡದೆ, ಕಾಲೇಜಿಗೆ ಅಧಿಕೃತ ಸ್ಥಾನಮಾನ ಇಲ್ಲದೆ ಕಾಲೇಜು ನಡೆಸುವುದು ವಿದ್ಯಾರ್ಥಿಗಳಿಗೂ ಮಾಡುವ ಅನ್ಯಾಯವಾಗುತ್ತದೆ. ಈ ಕಾರಣದಿಂದ ಸರಕಾರವು ಇವುಗಳನ್ನು ಸರಕಾರಿ ಕಾಲೇಜುಗಳಾಗಿ ಪರಿಗಣಿಸಲು ಮನವಿ ಸಲ್ಲಿಕೆಯಾಗಿದೆ ಎಂದರು.
ಕೆಲವೊಂದು ಪಿಜಿ ತರಗತಿಗಳನ್ನು ನುರಿತ ಪ್ರಾಧ್ಯಾಪಕರ ಕೊರತೆಯಿಂದ ನಡೆಸಲು ಕಷ್ಟಸಾಧ್ಯವಾಗುತ್ತಿದ್ದು, ಮುಂದಿನ ಶೈಕ್ಷಣಿಕ ವರ್ಷದಿಂದ ಸಂಪೂರ್ಣವಾಗಿ ತರಗತಿ ನಿಲ್ಲಿಸಲು ನಿರ್ಧರಿಸಲಾಗಿದೆ. ಪದವಿ ತರತಿಗಳಿಗೆ ಕಲಿಸಲು ನೇಮಕ ಮಾಡಲಾದ ಅಧ್ಯಾಪಕರು ಸ್ನಾತಕೋತ್ತರ ಪದವಿ ಮಕ್ಕಳಿಗೂ ಕಲಿಸುತ್ತಿದ್ದಾರೆ. ಅವರಿಗೆ ಅರ್ಹತೆ ಇಲ್ಲ ಎಂದಲ್ಲ. ಆದರೆ ಇದು ಕಲಿಕಾ ಮಾನದಂಡಗಳಿಗೆ ಪೂರಕವಾಗಿರುವುದಿಲ್ಲ. ಹಾಗಾಗಿ ಇಂತಹ ಘಟಕ ಕಾಲೇಜುಗಳಲ್ಲಿನ ಸ್ನಾತಕೋತ್ತರ ಪದವಿಗಳಿಗೆ ಅರ್ಜಿ ಸಲ್ಲಿಕೆ ಮಾಡುವ ಬದಲು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿಯೇ ಅರ್ಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬೇಕು ಎಂದು ಅವರು ಮನವಿ ಮಾಡಿದರು.