
ಅಖಿಲ ಭಾರತ ಬ್ಯಾರಿ ಪರಿಷತ್ ಇದರ ಆಶ್ರಯದಲ್ಲಿ ಮುಹಮ್ಮದ್ ಕುಂಜತ್ತಬೈಲ್ ಸ್ಮರಣಾರ್ಥ ಇಫ್ತಾರ್ ಕೂಟ
ಮಂಗಳೂರು: ಅಖಿಲ ಭಾರತ ಬ್ಯಾರಿ ಪರಿಷತ್ ವತಿಯಿಂದ ಮರ್ಹೂಮ್ ಮಹಮ್ಮದ್ ಕುಂಜತ್ ಬೈಲ್ ಸ್ಮರಣಾರ್ಥ ಇಫ್ತಾರ್ ಕೂಟವು ಪಂಪ್ವೆಲ್ನ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಎಂ.ಎಚ್. ಮೊಯ್ದಿನ್ ಅಡ್ಡೂರು ಅವರು ರಂಝಾನ್ ನಮ್ಮ ಸಮುದಾಯದ ಸಂತಸದ ತಿಂಗಳು. ಈ ತಿಂಗಳಲ್ಲಿ ಹಸಿವು ಹೇಗಿರುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ಸಾಧ್ಯ ಆಗುತ್ತದೆ. ನಾವು ಜತೆಯಾಗಿ ಬಾಳಿದರೆ ಸಮುದಾಯ ಅಭಿವೃದ್ಧಿ ಆಗಬಹುದು ಎಂದು ಹೇಳಿದರು.
ಧಾರ್ಮಿಕ ಉಪದೇಶ ನೀಡಿದ ಲಿಮ್ರಾ ಗ್ರೂಪ್ ಆಫ್ ಕರ್ನಾಟಕ ಅಧ್ಯಕ್ಷ ಶೇಖ್ ಮೊಹಮ್ಮದ್ ಇರ್ಫಾನಿ ಅವರು ಧರ್ಮ ಪಾಲನೆ, ಜಾಗೃತಿ ಮತ್ತು ಉಪವಾಸದ ಪ್ರಾಮುಖ್ಯತೆಯ ಬಗ್ಗೆ ಮಾಹಿತಿ ನೀಡಿ, ಮಾದಕವಸ್ತು ದಂಧೆ ಬೆಳೆಯುತ್ತಿದೆ. ಇದರಿಂದ ನಮ್ಮ ಮಕ್ಕಳು ದಾರಿ ತಪ್ಪುತ್ತಿದ್ದಾರೆ. ಈ ಬಗ್ಗೆ ನಾವು ಆಂದೋಲನ ಮಾಡಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಸುಳ್ಯ ನಗರ ಯೋಜನಾ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಕೆ.ಎಂ. ಮುಸ್ತಫಾ ಸುಳ್ಯ ಅವರನ್ನು ಸನ್ಮಾನಿಸಲಾಯಿತು.
ಅಖಿಲ ಭಾರತ ಬ್ಯಾರಿ ಪರಿಷತ್ ಅಧ್ಯಕ್ಷ ಯು.ಎಚ್. ಖಾಲಿದ್ ಉಜಿರೆ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾದಕ ದ್ರವ್ಯ ದುಶ್ಚಟ ನಿವಾರಣಾ ಕೇಂದ್ರವನ್ನು ಪರಿಷತ್ತಿನ ವತಿಯಿಂದ ತೆರೆಯಲು ಯೋಜನೆ ರೂಪಿಸಲಾಗುವುದು ಎಂದರು.
ವಕ್ಫ್ ಜಿಲ್ಲಾ ಸಲಹಾ ಸಮಿತಿ ಅಧ್ಯಕ್ಷ ಅಬ್ದುಲ್ ನಾಸಿರ್ ಲಕ್ಕಿ ಸ್ಟಾರ್, ಕೆ.ಎಂ. ಮುಸ್ತಫಾ ಸುಳ್ಯ ಮಾತನಾಡಿದರು. ಕೆಪಿಸಿಸಿ ಪ್ರದಾನ ಕಾರ್ಯದರ್ಶಿ ಟಿ.ಎಂ. ಶಹೀದ್ ಸುಳ್ಯ ಉಪಸ್ಥಿತರಿದ್ದರು.
ಅಬ್ದುಲ್ ಖಾದರ್ ನಾವೂರು ಕಿರಾಅತ್ ಪಠಿಸಿದರು. ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ನಡುಪದವು ಸ್ವಾಗತಿಸಿ, ಪರಿಷತ್ ಗೌರವಾಧ್ಯಕ್ಷ ಯೂಸುಫ್ ವಕ್ತಾರ ಕಾರ್ಯಕ್ರಮ ನಿರೂಪಿಸಿದರು. ಕೋಶಾಧಿಕಾರಿ ನಿಸಾರ್ ಎಫ್ ಮೊಹಮ್ಮದ್ ವಂದಿಸಿದರು.