ಸಮಾಜದ ಶ್ರೇಯೋಭಿವೃದ್ಧಿಗೆ ರೋಟರಿ ಸಂಸ್ಥೆ ಶ್ರಮಿಸುತ್ತಿದೆ: ವಿಕ್ರಮ್‌ದತ್ತ

ಸಮಾಜದ ಶ್ರೇಯೋಭಿವೃದ್ಧಿಗೆ ರೋಟರಿ ಸಂಸ್ಥೆ ಶ್ರಮಿಸುತ್ತಿದೆ: ವಿಕ್ರಮ್‌ದತ್ತ


ಮಂಗಳೂರು: ರೋಟರಿ ಸಂಸ್ಥೆಯು ಸಮಾಜದಲ್ಲಿರುವ ಆರ್ಥಿಕವಾಗಿ ಹಿಂದುಳಿದ ವರ್ಗದವರ ಮೂಲಭೂತ ಸೌಕರ್ಯಕ್ಕೆ ಸ್ಪಂದಿಸುತ್ತಿದ್ದು, ಸಮಾಜದ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದೆ ಎಂದು ರೋಟರಿ ಜಿಲ್ಲಾ 3181ರ ಗವರ್ನರ್ ವಿಕ್ರಮ್‌ದತ್ತ ಹೇಳಿದರು. 

ಅವರು ರೋಟರಿ ಕ್ಲಬ್ ಸುರತ್ಕಲ್ ಹಾಗೂ ರೋಟರಿ ಕ್ಲಬ್ ಮಂಗಳೂರು ಸಿಟಿ ಜಂಟಿ ಆಶ್ರಯದಲ್ಲಿ ಮಾ.೨೪ ರಂದು ಸುರತ್ಕಲ್‌ನ ಶ್ರೀ ಮಹಾಲಿಂಗೇಶ್ವರ ಆಂಗ್ಲ ಮಾಧ್ಯಮ ಶಾಲೆಯ ಶ್ರೀ ವಿದ್ಯಾ ವಿನಾಯಕ ಆವರಣದಲ್ಲಿ ರೋಟರಿ ಸಂಸ್ಥೆಯು ನಿರ್ಮಿಸಿದ್ದ 2,00,000 ರೂ. ಮೌಲ್ಯದ ಮಳೆ ನೀರು ಕೊಯ್ಲಿನ ಯಂತ್ರೋಪಕರಣ ಘಟಕವನ್ನು ಉದ್ಘಾಟಿಸಿ ಮಾತನಾಡಿದರು. 

ವಿಶ್ವದಲ್ಲಿ ಮಕ್ಕಳನ್ನು ಬಾಧಿಸುವ ರೋಗವಾದ ಪೋಲಿಯೋವನ್ನು ನಿರ್ಮೂಲನೆಗೊಳಿಸಿದ ಸೇವಾಕಾರ್ಯ ಅಂತರಾಷ್ಟ್ರೀಯದಲ್ಲಿ ಜನಮನ್ನಣೆಗೆ ಪಾತ್ರವಾಗಿದೆ ಎಂದು ತಿಳಿಸಿದರು.

ಬಳಿಕ ರೋಟರಿ ಸಂಸ್ಥೆಯವರು ಶಾಲೆಗೆ ದಾನದ ರೂಪದಲ್ಲಿ ನೀಡಿದ 40,000 ರೂ. ಮೌಲ್ಯದ ದೃಶ್ಯ ಮತ್ತು ಶ್ರಾವ್ಯ ಮಾಧ್ಯಮ ಉಪಕರಣವನ್ನು ಶಾಲೆಯ ಮುಖ್ಯೋಪಾಧ್ಯಾಯಿನಿಯವರಾದ ನಾಗವೇಣಿ ಮತ್ತು ಮಾಲಿನಿ ಬಂಗೇರ ಅವರಿಗೆ ಹಸ್ತಾಂತರಿಸಿದರು.

ಗೌರವ ಅತಿಥಿಯಾಗಿ ಪಾಲ್ಗೊಂಡ ದ.ಕ. ಜಿಲ್ಲಾ ನಿರ್ಮಿತಿ ಕೇಂದ್ರದ ಕಾರ್ಯನಿರ್ವಾಹಕ ನಿರ್ದೇಶಕ ರಾಜೇಂದ್ರ ಕಲ್ಬಾವಿ ಅವರು ಮಳೆ ನೀರು ಕೊಯ್ಲಿನ ಉದ್ದೇಶ ಮತ್ತು ಮಹತ್ವವನ್ನು ವಿವರಿಸಿ ಮಳೆ ನೀರನ್ನು ಸಂಗ್ರಹಿಸಿ ನೀರಿನ ಅಭಾವವನ್ನು ಪರಿಹರಿಸಬೇಕೆಂದು ಸಲಹೆ ನೀಡಿದರು. 

ಶಾಲಾ ಆಡಳಿತ ಸಮಿತಿಯ ಅಧ್ಯಕ್ಷ ರಮಾನಂದ ರಾವ್ ಅವರು ರೋಟರಿ ಸಂಸ್ಥೆಯ ನಿಸ್ವಾರ್ಥ ಸಮಾಜ ಸೇವಾ ಮನೋಭಾವನ್ನು ಶ್ಲಾಘಿಸಿದರು.

ರೋಟರಿ ವಲಯ ಸಹಾಯಕ ಗವರ್ನರ್ ಡಾ. ರಂಜನ್ ಮತ್ತು ಕೆ.ಎಂ. ಹೆಗ್ಡೆ ಉಪಸ್ಥಿತರಿದ್ದರು. ರೋಟರಿ ಕ್ಲಬ್ ಸುರತ್ಕಲ್‌ನ ಅಧ್ಯಕ್ಷ ಸಂದೀಪ್ ರಾವ್ ಸ್ವಾಗತಿಸಿ, ರೋಟರಿ ಕ್ಲಬ್ ಸಿಟಿ ಸಂಸ್ಥೆಯ ಅಧ್ಯಕ್ಷ ಗಣೇಶ್ ಕೊಡ್ಲಮೊಗರು ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article