
ಮಾ.30-ಏ.8 ರವರೆಗೆ ಅಶ್ವತ್ಥಪುರದಲ್ಲಿ ಶ್ರೀರಾಮನವಮಿ ಮಹೋತ್ಸವ
ಮೂಡುಬಿದಿರೆ: ಅಶ್ವತ್ಥಪುರ ಶ್ರೀ ಸೀತಾರಾಮಚಂದ್ರ ದೇವಸ್ಥಾನದಲ್ಲಿ ಮಾರ್ಚ್ 30ರಿಂದ ಏಪ್ರಿಲ್ 8ರ ವರೆಗೆ ಶ್ರೀರಾಮನವಮಿ ಮಹೋತ್ಸವ, ಮನ್ಮಹಾರಥೋತ್ಸವ ನಡೆಯಲಿದೆ.
ಮಾ.30 ರಂದು ಬೆಳಿಗ್ಗೆ 7.30ರಿಂದ ಧ್ವಜಾರೋಹಣ ನಡೆಯಲಿದೆ. ಪ್ರತಿದಿನ ಚತುರ್ವೇದ-ಪುರಾಣ ಪಾರಾಯಣ, ಸುಂದರಕಾಂಡ ಪಾರಾಯಣ, ವಿಶೇಷ ಪೂಜೆ, ರಾತ್ರಿ ಭಜನೆ, ಪಲ್ಲಕಿ ಉತ್ಸವ, ವಾಹನೋತ್ಸವ ನಡೆಯಲಿದೆ.
ಏಪ್ರಿಲ್ 6ರಂದು ಮಧ್ಯಾಹ್ನ 12.06 ಗಂಟೆಗೆ ಶ್ರೀರಾಮ ಜನ್ಮೋತ್ಸವ, ರಾತ್ರಿ ಪುಷ್ಪರಥೋತ್ಸವ, 7ರಂದು ಮನ್ಮಹಾರಥೋತ್ಸವ, ಸಾರ್ವಜನಿಕ ಮಹಾ ಅನ್ನಸಂತರ್ಪಣೆ ನಡೆಯಲಿದೆ.
ಪ್ರತಿದಿನವೂ ಸಂಜೆ 6.30ರಿಂದ ಚಂದ್ರಕಾಂತ ಭಟ್ ಅಶ್ವತ್ಥಪುರ ಅವರಿಂದ ಕಥಾಕೀರ್ತನ, ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಏ.6ರಂದು ಸಂಜೆ 6ರಿಂದ ‘ಸರಿಗಮಪ’ ಖ್ಯಾತಿಯ ಕೀರ್ತನ ಹೊಳ್ಳ ಮತ್ತು ಬಳಗ ಬೆಂಗಳೂರು ಅವರಿಂದ ‘ಸಂಗೀತಸುಧಾ’ ಹಾಗೂ 7ರಂದು ಸಂಜೆ 6.30ರಿಂದ ಚಿಂತನ ಹೆಗಡೆ ಮಾಳಕೋಡು ನೇತೃತ್ವದ ಯಕ್ಷಪಲ್ಲವಿ ತಂಡದ ಕಲಾವಿದರಿಂದ ಬಡಗುತಿಟ್ಟು ಯಕ್ಷಗಾನ ‘ಪಂಚವಟಿ-ಕುಶಲವ’ ಯಕ್ಷಗಾನ ನಡೆಯಲಿದೆ.
ಮಾ.29ರಂದು ಕೋಠಿ (ಉಗ್ರಾಣ) ಪೂಜೆ, ಏ.3ರಂದು ಶೃಂಗೇರಿ ಜಗದ್ಗುರು ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳವರ ವರ್ಧಂತೀ ಮಹೋತ್ಸವ ನಡೆಯಲಿದೆ ಎಂದು ಆಡಳಿತ ಮಂಡಳಿ ಪ್ರಕಟಣೆ ತಿಳಿಸಿದೆ.