
ದೇವಾಲಯಗಳ ಮುಖೇನ ದೇವರ ಸಾಮೀಪ್ಯ: ಪೇಜಾವರಶ್ರೀ
ಪುತ್ತಿಗೆ ಬ್ರಹ್ಮಕಲಶೋತ್ಸವ-ಧಾರ್ಮಿಕ ಸಭೆ
ಮೂಡುಬಿದಿರೆ: ದೇವರ ಸರ್ವವ್ಯಾಪಿಯಾಗಿದ್ದರೂ, ಅವರನ್ನು ನಮಗೆ ಕಾಣಲು ಸಾಧ್ಯವಿಲ್ಲ. ದೇವಾಲಯಗಳ ಮುಖೇನ ದೇವರ ಸಾಮೀಪ್ಯ ಸಿಗುತ್ತದೆ. ಕಾಲ ಕಾಲಕ್ಕೆ ಜೀರ್ಣೋದ್ಧಾರಗೊಂಡು ಮತ್ತಷ್ಟು ಆಸ್ತಿಕರ ಭಕ್ತಿ ಭಾವದ ತಾಣವಾಗಿ ದೇವಾಲಯಗಳು ಕಾಣಸಿಗುತ್ತದೆ. ಪುತ್ತಿಗೆ ಕ್ಷೇತ್ರ ಎಲ್ಲರ ಸಹಕಾರದೊಂದಿಗೆ ಅಭೂತಪೂರ್ವವಾಗಿ ನಿರ್ಮಾಣಗೊಂಡಿದೆ. ಎಲ್ಲೂ ಕಾಣ ಸಿಗದ ವಿಶಾಲವಾದ ಅಂಗಣವಿರುವ ಪುತ್ತಿಗೆ ಕ್ಷೇತ್ರವು ವಿಶಿಷ್ಟ ರೀತಿಯಲ್ಲಿ ಪುನರ್ ನಿರ್ಮಾಣಗೊಂಡು ಕಂಗೊಳಿಸುತ್ತಿದೆ ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ನುಡಿದರು.
ಶ್ರೀಕ್ಷೇತ್ರ ಪುತ್ತಿಗೆ ಮಹತೋಭಾರ ಶ್ರೀ ಸೋಮನಾಥೇಶ್ವರ ದೇವಸ್ಥಾನ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಪ್ರಯುಕ್ತ ಗುರುವಾರ ರಾತ್ರಿ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿದರು. ತುಳುನಾಡಿನ ವಿವಿಧ ಕಡೆಗಳಲ್ಲಿ ಒಳ್ಳೆಯ ರೀತಿಯಲ್ಲಿ ಕ್ಷೇತ್ರಗಳ ಅಭಿವೃದ್ಧಿಯಾಗುತ್ತಿದೆ. ಭಕ್ತರು ಅಂತರಂಗ ಹಾಗೂ ಬಹಿರಂಗ ಶುದ್ಧಿಯೊಂದಿಗೆ ದೇವಾಲಗಳಲ್ಲಿ ಪ್ರಾರ್ಥನೆ ಮಾಡಬೇಕು. ಸಂಕಲ್ಪದಿಂದ ಸಾಧನೆ ಸಾಧ್ಯ. ದೇವಾಲಯಕ್ಕೆ ಭೂದಾನ ಮಾಡುವ ಮೂಲಕ ಶಾಸ್ವತ ಸೇವೆಯನ್ನು ಇಲ್ಲಿ ಮಾಡುತ್ತಿರುವುದು ಶ್ಲಾಘನೀಯ ಎಂದರು.
ವಾಸ್ತು ತಜ್ಞ ಅವಧಾನಿ ಗುಂಡಿಬೈಲು ಸುಬ್ರಹ್ಮಣ್ಯ ಭಟ್ ಧಾರ್ಮಿಕ ಉಪನ್ಯಾಸ ನೀಡಿದರು. ಭಗಂವತನ ವಿರಾಟ್ ಸ್ವರೂಪ ಶಿವಲಿಂಗ. ನಮಗೆ ಸಂತೃಪ್ತಿ ಸಿಗಬೇಕಾದರೆ ಶಾಂತ ಸ್ವರೂಪ ಶಿವನನ್ನು ಪೂಜಿಸಬೇಕು ಎಂದವರು ಜನರೇ ಸೇರಿ ಪುನರ್ ನಿರ್ಮಿಸಿದ ದೇವಳ ಪುತ್ತಿಗೆ. ಅತ್ಯುತ್ತಮ ರೀತಿಯಲ್ಲಿ ಜೀರ್ಣೋದ್ಧಾರಗೊಂಡಿರುವ ಈ ಕ್ಷೇತ್ರದ ಜತನದಿಂದ ಕಾಪಾಡಿಕೊಳ್ಳುವ ಕೆಲಸವರು ಇಲ್ಲಿನ ಭಕ್ತರದ್ದು. ಪ್ರಮುಖವಾಗಿ ಮುಂದೆ ಇಲ್ಲಿನ ಕರೆಯ ಹಾಗೂ ಪೂರ್ವದ ಗೋಪುರ ಜೀರ್ಣೋದ್ಧಾರಗೊಳ್ಳಬೇಕು. ಹಿಂದೆ ಇಲ್ಲಿ ಬೇರೆ ಕಡೆಗಿಂತ ಹಿರಿದಾದ ಭೂಮಂಡಲ ರಥವಿತ್ತು. ಮುಂದೆ ಮತ್ತೆ ಅದು ನಿರ್ಮಾಣಗೊಂಡು ಕ್ಷೇತ್ರದ ಅಂಗಣದಲ್ಲಿ ಸುತ್ತಾಡಬೇಕು ಎಂದರು.
ಶಾಸಕ ಉಮಾನಾಥ ಕೋಟ್ಯಾನ್ ಮುಖ್ಯ ಅತಿಥಿಯಾಗಿ ಮಾತನಾಡಿ, 2 ಕೋಟಿ ರೂ. ವೆಚ್ಚದಲ್ಲಿ ದೇವಲದ ಎದುರು ಸೇತುವೆ ನಿರ್ಮಾಣಗೊಂಡಿದೆ. ಸಂಪಿಗೆಯಿಂದ ಪುತ್ತಿಗೆ ದೇವಾಲಯದ ಮುಂಭಾಗವಾಗಿ ಒಂಟಿಕಟ್ಟೆ ರಸ್ತೆಯನ್ನು ಮುಂದೆ ಅಗಲಗೊಳಿಸಲಿ ಪ್ರಯತ್ನಿಸಲಾಗುವುದು ಎಂದ ಅವರು, ಕಳೆದ ಮೂರು ವರ್ಷಗಳಲ್ಲಿ 18 ಮಾಗಣೆ 77 ಗ್ರಾಮಗಳಿಂದ ಒಂದು ಲಕ್ಷದಷ್ಟು ಜನ ಕರೆ ಸೇವಕರು ತನು ಸೇವೆಯನ್ನು ಅರ್ಪಿಸಿದ್ದಾರೆ ಎಂದರು.
ದೇವಳ ಬಳಿ ಇರುವ 60 ಸೆಂಟ್ಸ್ ಜಾಗವನ್ನು ಮಡ್ಮಣ್ಣಾಯ ಟ್ರಸ್ಟ್ ವತಿಯಿಂದ ನೀಡುವ ಭೂದಾನದ ಮಾಡಲಾಗಿದ್ದು, ಅದರ ಪತ್ರವನ್ನು ಉದ್ಯಮಿ ರಾಮದಾಸ್ ಮಡ್ಮಣ್ಣಾಯ ಕುಂಗೂರು ಅವರು ದೇವಳ ಆನುವಂಶಿಕ ಮೊಕ್ತೇಸರ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಕುಲದೀಪ ಎಂ. ಅವರಿಗೆ ಹಸ್ತಾಂತರಿಸಿದರು.
ಜೀರ್ಣೋದ್ಧಾರದ ದಾನಿಗಳನ್ನು ಗೌರವಿಸಲಾಯಿತು.
ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ಶಾಸಕ, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಡಾ.ಎಂ ಮೋಹನ ಆಳ್ವ , ಶ್ರೀಕ್ಷೇತ್ರದ ಧರ್ಮಸ್ಥಳದ ಡಿ.ಸುರೇಂದ್ರ ಕುಮಾರ್, ಅದಾನಿ ಗ್ರೂಪ್ಸ್ನ ಕಿಶೋರ್ ಆಳ್ವ, ಪಾಂಡುರಂಗ ಕಾಮತ್ ಪ್ರಶಾಂತ ವಾಟಿಕ, ಉದ್ಯಮಿಗಳಾದ ಶಶಿಧರ್ ಶೆಟ್ಟಿ ಬರೋಡ, ಕೆ.ಶ್ರೀಪತಿ ಭಟ್, ಸುಧಾಕರ ಶೆಟ್ಟಿ, ನ್ಯಾಶನಲ್ ಇನ್ವೆಶ್ಟಿಗೇಶನ್ ಏಜೆನ್ಸಿಯ ಕಾನೂನು ಸಲಹೆಗಾರ, ವಕೀಲ, ಪ್ರಕಾಶ್ ಶೆಟ್ಟಿ, ದಯಾನಂದ ಶೆಟ್ಟಿ ಕಟ್ಟಣಿಗೆ ಪುತ್ತಿಗೆ, ಶಾರದ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಎಂ.ಪಿ ಪುರಾಣಿಕ್, ಕಸಾಪ ದ.ಕ ಜಿಲ್ಲೆ ಮಾಜಿ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಉಪಸ್ಥಿತರಿದ್ದರು.
ಆಳ್ವಾಸ್ ಉಪನ್ಯಾಸಕ ವೇಣುಗೋಪಾಲ ಶೆಟ್ಟಿ ನಿರೂಪಿಸಿದರು.