
ಕಿಯೋನಿಕ್ಸ್ ಸಾಫ್ಟ್ವೇರ್ ಪಾರ್ಕ್ ಯೋಜನೆಗೆ ವೇಗ ನೀಡಲು ಡಾ.ಭರತ್ ಶೆಟ್ಟಿ ವೈ ಮನವಿ
Wednesday, March 5, 2025
ಸುರತ್ಕಲ್: ಮಂಗಳೂರಿನ ಹೃದಯ ಭಾಗದಲ್ಲಿ ಕಿಯೋನಿಕ್ಸ್ ಸಂಬಂಧಿಸಿದ ನಾಲ್ಕು ಎಕರೆ ಭೂಮಿಯಿದ್ದು ಸಾಫ್ಟ್ವೇರ್ ಪಾರ್ಕ್ ನಿರ್ಮಾಣಕ್ಕೆ ಕಳೆದ ಹಲವು ವರ್ಷಗಳಿಂದ ಸತತ ಪ್ರಯತ್ನ ನಡೆಸಲಾಗಿದೆ.
ಸರಕಾರ ಇದೀಗ ವೇಗ ನೀಡಿದಲ್ಲಿ ಸ್ಥಳೀಯ ಐಟಿ, ಬಿಟಿ ಪದವೀಧರರಿಗೆ ಸ್ಥಳೀಯವಾಗಿ ಉದ್ಯೋಗ ದೊರಕಲು ಅವಕಾಶವಾಗುತ್ತದೆ ಎಂದು ಶಾಸಕ ಡಾ. ಭರತ್ ಶೆಟ್ಟಿ ವೈ ಅವರು ಮಾಹಿತಿ ತಂತ್ರಜ್ನಾನ ಸಚಿವ ಪ್ರಿಯಾಂಕಾ ಖರ್ಗೆ ಹಾಗೂ ಕಿಯೋನಿಸ್ಕ್ ಅಧ್ಯಕ್ಷ ಶರತ್ ಬಚ್ಚೇಗೌಡ ಅವರಿಗೆ ಮನವಿ ಸಲ್ಲಿಸಿದರು.
2022ರಲ್ಲಿ ಆಗಿನ ಸಚಿವ ಡಾ. ಆಶ್ವಥ ನಾರಾಯಣ ಅವರು ಮಂಗಳೂರಿನಲ್ಲಿ ನಡೆದ ಮಂಗಳೂರು ಟೆಕ್ನಾವಾಂಜಾ ಉದ್ಯಮ ಸಮ್ಮೇಳನದಲ್ಲಿ ಭಾಗವಹಿಸಿದ್ದ ಸಂದರ್ಭ ಐಟಿ ಪಾರ್ಕ್ ಅಭಿವೃದ್ಧಿಗೆ ಮೊದಲ ಹಂತದ ಯತ್ನ ನಡೆಸಿದ್ದರು.
ಇದೀಗ ಸರಕಾರ ಕಿಯೋನಿಕ್ಸ್ ಭೂಮಿಯಲ್ಲಿ ಸಾಪ್ಟ್ವೇರ್ ಪಾರ್ಕ್, ಕೌಶಲ್ಯ ಅಭಿವೃದ್ಧಿ ಕೇಂದ್ರ ನಿರ್ಮಾಣಕ್ಕೆ ವೇಗ ನೀಡಿದಲ್ಲಿ ಉದ್ಯೋಗವಕಾಶ ಹೆಚ್ಚುತ್ತದೆ.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕರಾವಳಿ ನಿರ್ಜೀವವಾಗಿದೆ ಎಂದಿದ್ದಾರೆ. ಮೂಲಸೌಕರ್ಯ ನಿರೀಕ್ಷಿತ ಮಟ್ಟದಲ್ಲಿ ಬೆಳವಣಿಯಾಗದಿರುವುದು ಒಂದು ಕಾರಣ.
ಕರಾವಳಿ ಪ್ರವಾಸೋಧ್ಯಮ, ಉದ್ಯಮ ಅಭಿವೃದ್ಧಿಗೆ ಮಂಗಳೂರು ಬೆಂಗಳೂರು ನಡುವೆ ಎಕ್ಸ್ಪ್ರೆಸ್ ಕಾರಿಡಾರ್, ಸುರಂಗ ಮಾರ್ಗ ಸಹಿತ ಸೌಲಭ್ಯಕ್ಕೆ ಒತ್ತು ನೀಡಿದಲ್ಲಿ ಐಟಿ ಬಿಟಿ ಜತೆಗೆ, ಬಂದರು, ರೈಲ್ವೆ, ವಿಮಾನಯಾನದ ಮೂಲಕ ಉದ್ಯಮ ಚೇತರಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಮನವಿಯಲ್ಲಿ ತಿಳಿಸಿದರು.