
ನದಿಗಳ ಪಾವಿತ್ರ್ಯತೆಯನ್ನು ಕಾಪಾಡುವಲ್ಲಿ ಪ್ರತಿಯೊಬ್ಬರೂ ಕೈಜೋಡಿಸಿ: ಡಾ. ಗಣೇಶ್ ಪ್ರಸಾದ್
Thursday, March 13, 2025
ಉಡುಪಿ: ಲಕ್ಷಾಂತರ ಜನರಿಗೆ ನೀರುಣಿಸುವ ನದಿಗಳು ಇಂದು ಮಲಿನವಾಗುತ್ತಿರುವುದು ಅತ್ಯಂತ ಬೇಸರದ ಸಂಗತಿಯಾಗಿದೆ. ಮನುಷ್ಯನ ಸ್ವಾರ್ಥ ಮತ್ತು ನಿರ್ಲಕ್ಷ್ಯತನದಿಂದ ಜಲಮೂಲಗಳು ದಿನನಿತ್ಯ ಮಲಿನಗೊಳುತ್ತಿವೆ. ವೈಜ್ಞಾನಿಕವಾಗಿ ಕಸ ವಿಲೇವಾರಿಯ ವ್ಯವಸ್ಥೆ ಇದ್ದರೂ ವಾಹನ ಸವಾರರು ತ್ಯಾಜ್ಯ ಎಸೆಯುವ ಘಟನೆ ಅದೇ ರೀತಿ ಕೆಲ ಅಂಗಡಿಯವರು ಕೋಳಿ ಇನ್ನಿತರ ತ್ಯಾಜ್ಯವನ್ನು ನದಿಗಳಿಗೆ ಎಸೆದು ನೀರಿನ ಗುಣಮಟ್ಟವನ್ನು ಕಳಪೆಯನ್ನಾಗಿಸುತ್ತಿದ್ದಾರೆ. ಇದರಿಂದ ಇಂಥ ನೀರನ್ನು ಆಶ್ರಯಿಸುವವರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದೆ. ಇದರ ಬಗ್ಗೆ ಸರ್ಕಾರ ಗಂಭೀರವಾಗಿ ಪರಿಗಣಿಸದಿದ್ದರೆ ಮುಂದಿನ ದಿನಗಳಲ್ಲಿ ನದಿಗಳ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಲಿದೆ ಎಂದು ಬಾರಕೂರಿನ ಶ್ರೀಮತಿ ರುಕ್ಮಿಣಿ ಶೆಡ್ತಿ ಸ್ಮಾರಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜಕಾರ್ಯ ವಿಭಾಗದ ಉಪನ್ಯಾಸಕ ಡಾ. ಗಣೇಶ್ ಪ್ರಸಾದ್ ಜಿ. ನಾಯಕ್ ಹೇಳಿದರು.
ಅವರು ಮಾರ್ಚ್ 12 ರಂದು ಶ್ರೀ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ಇಕೋ ಕ್ಲಬ್ ವತಿಯಿಂದ ಆಯೋಜಿಸಲಾದ 'ಗ್ರೀನೋವೇಷನ್ ವೀಕ್ 2.0' ಸರಣಿ ಕಾರ್ಯಕ್ರಮದ ಭಾಗವಾದ ಸ್ಪೆಕ್ ಇಕೋ ಟಾಕ್ ನಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡುತ್ತಿದ್ದರು.
ಏಕಬಳಕೆಯ ಪ್ಲಾಸ್ಟಿಕ್ ಗಳಿಂದ ಕಡಲಾಮೆ ಸೇರಿದಂತೆ ಜಲಚರಗಳಿಗೆ ಅಪಾಯ ಎದುರಾಗಿದೆ. ಹಸಿರು ಪದರ ಕಡಿಮೆಯಾಗುತ್ತಿರುವ ಕಾರಣ ಒಂದೆರಡು ತಿಂಗಳ ಮುಂಚೆಯೇ ಸೆಖೆಗಾಲದ ಅನುಭವವಾಗುತ್ತಿದೆ. ಅತಿಯಾದ ಹಣದ ವ್ಯಾಮೋಹಕ್ಕೆ ಪೂರ್ವಜರಿಂದ ಬಂದಂತಹ ಕೃಷಿಭೂಮಿ ಗಗನಚುಂಬಿ ಕಟ್ಟಡ ನಿರ್ಮಿಸಲು ಮಾರಾಟವಾಗುತ್ತಿದೆ. ಅತಿಯಾದ ಗಳಿಕೆಯ ಮನೋಭಾವ ಕಡಿಮೆಯಾಗಿ ಪರಿಸರ ರಕ್ಷಣೆಯ ತುಡಿತ ಬೆಳೆದರೆ ಮಾತ್ರ ಮುಂದಿನ ಪೀಳಿಗೆಗೆ ಉತ್ತಮವಾದ ಪರಿಸರ ಉಳಿಯಬಹುದು. ವೇಸ್ಟ್ ಟು ವೆಲ್ತ್ (ತ್ಯಾಜ್ಯವನ್ನು ಸಂಪನ್ಮೂಲವನ್ನಾಗಿ ಪರಿವರ್ತಿಸುವ) ಪರಿಕಲ್ಪನೆಗೆ ಇಂಧನ ಒದಗಿಸಲು ಪ್ರತಿಯೊಬ್ಬರೂ ಕ್ರಿಯಾಶೀಲ ಪ್ರಯತ್ನ ಮಾಡಬೇಕು ಎಂದರು.
ಉಪಪ್ರಾಚಾರ್ಯ ವಿನಾಯಕ ಪೈ ಬಿ. ಅಧ್ಯಕ್ಷತೆ ವಹಿಸಿದ್ದರು. ಇಕೋ ಕ್ಲಬ್ ಸಂಯೋಜಕರಾದ ನಾಗರಾಜ ಗಿಳಿಯಾರು, ಉಪನ್ಯಾಸಕರಾದ ದಿನೇಶ್, ಗೌರಿ ಶೆಣೈ, ಪುಷ್ಪಲತಾ, ಚಕ್ರಪಾಣಿ ಅಡಿಗ, ಬೋಧಕ ಬೋಧಕೇತರರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ದ್ವಿತೀಯ ಬಿಕಾಂ ವಿದ್ಯಾರ್ಥಿನಿ ಅವನಿ ಆಚಾರ್ಯ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ ವಂದಿಸಿದರು.