ಕೊರಗರ ಬೇಡಿಕೆ ಈಡೇರಿಕೆಗೆ ಆಗ್ರಹ

ಕೊರಗರ ಬೇಡಿಕೆ ಈಡೇರಿಕೆಗೆ ಆಗ್ರಹ


ಉಡುಪಿ: ಕೊರಗ ಸಮುದಾಯದ ಶಿಕ್ಷಣ ಪಡೆದ ಯುವಜನರಿಗೆ ಸರಕಾರಿ ಉದ್ಯೋಗದಲ್ಲಿ ನೇರ ನೇಮಕಾತಿ ಹಾಗೂ ಕೃಷಿಭೂಮಿ ಹಕ್ಕುಪತ್ರ ಮಂಜೂರಾತಿಗಾಗಿ ಕರ್ನಾಟಕ-ಕೇರಳ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ ಸರಕಾರವನ್ನು ಒತ್ತಾಯಿಸಿದೆ.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಅಧ್ಯಕ್ಷೆ ಸುಶೀಲಾ ನಾಡ, ಸಂಘಟನೆಯ ಸತತ 30 ವರ್ಷಗಳ ಪ್ರಯತ್ನದಿಂದಾಗಿ ಎಸ್‌ಎಸ್‌ಎಲ್‌ಸಿ, ಪಿಯುಸಿ, ಸ್ನಾತಕೋತ್ತರ, ಡಾಕ್ಟರೇಟ್, ವೈದ್ಯಕೀಯ, ಕಾನೂನು ಪದವಿ, ತಾಂತ್ರಿಕ ಕೋರ್ಸ್, ನರ್ಸಿಂಗ್, ಡಿಎಡ್, ಬಿಎಡ್ ಸೇರಿದಂತೆ ಇನ್ನಿತರ ವೃತ್ತಿಪರ ಶಿಕ್ಷಣವನ್ನು ಸಮುದಾಯದ ಯುವಜನರು ಪಡೆಯಲು ಸಾಧ್ಯವಾಯಿತು. ಆದರೆ, ಶಿಕ್ಷಣ ಪಡೆದ ಯುವಜನರಿಗೆ ಅವರ ವಿದ್ಯಾರ್ಹತೆಗೆ ತಕ್ಕ ಉದ್ಯೋಗ ಪಡೆಯಲು ಇಂದಿಗೂ ಸಾಧ್ಯವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

2023ರಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ರಾಜ್ಯಕ್ಕೆ ಭೇಟಿ ನೀಡಿದಾಗ ಕೊರಗ ಸಂಘಟನೆ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಯುವಜನರಿಗೆ 100 ಶೇ. ಉದ್ಯೋಗ ಭದ್ರತೆಗೆ ಸಂಬಂಧಿಸಿ ಕಾಲಬದ್ಧ ಕ್ರಿಯಾ ಯೋಜನೆ ರೂಪಿಸಿ ಕಾರ್ಯರೂಪಕ್ಕೆ ತರುವಂತೆ ಸೂಚಿಸಿದ್ದರು.

ಕೊರಗ ಸಮುದಾಯ ಅತ್ಯಂತ ಹಿಂದುಳಿದ ಅಸಹಾಯಕ ದುರ್ಬಲ ಬುಡಕಟ್ಟು ಪಂಗಡವಾಗಿದ್ದು, ಮಣಿವನ್ನನ್ ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿಯಾಗಿದ್ದ ಸಂದರ್ಭದಲ್ಲಿ ವಿದ್ಯಾವಂತ ಯುವಜನರ ಸರ್ವೇ ಕಾರ್ಯ ನಡೆಸಲಾಗಿತ್ತು. ಆದರೆ, ಹಠಾತ್ತನೆ ಬುಡಕಟ್ಟು ಕಲ್ಯಾಣ ಇಲಾಖೆಯ ಜವಾಬ್ದಾರಿಯಿಂದ ಅವರನ್ನು ವಿಮುಕ್ತಿಗೊಳಿಸಲಾಯಿತು. ಅನಂತರ ಸಂಬಂಧಿಸಿದ ಇಲಾಖೆ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ. ಅದರಿಂದ ಯುವಜನರು ಉದ್ಯೋಗವಿಲ್ಲದೆ ವಾನಸಿಕ ಒತ್ತಡದಿಂದ ಆತ್ಮವಿಶ್ವಾಸ ಕಳೆದುಕೊಂಡು ಬದುಕುವಂತಾಗಿದೆ. ಅಲ್ಲದೆ, ಪದವಿ ಪಡೆದ ಯುವಜನರನ್ನು ಕೂಡಾ ಕೇವಲ ಗ್ರಾ.ಪಂ., ಪ.ಪಂ., ಪುರಸಭೆ, ನಗರಸಭೆಗಳಲ್ಲಿ ಸ್ವಚ್ಛತೆ ಕೆಲಸಗಳಿಗೆ ವಾತ್ರವೇ ಬಳಸಿಕೊಳ್ಳಲಾಗುತ್ತಿದೆ ಎಂದು ಖೇದ ವ್ಯಕ್ತಪಡಿಸಿದರು.

ಆದಿವಾಸಿ ಕೊರಗ ಸಮುದಾಯದ ಜನರು ತಯಾರಿಸಿದ ಉತ್ಪನ್ನಗಳಿಗೆ ಮಾರುಕಟ್ಟೆ ವ್ಯವಸ್ಥೆ ಒದಗಿಸಬೇಕು. ಕುಲಕಸುಬಿನ ಉತ್ಪನ್ನಗಳನ್ನು ಬ್ರ್ಯಾಂಡ್ ಉತ್ಪನ್ನವಾಗಿಸಬೇಕು. ಈಗಾಗಲೇ ದ.ಕ. ಮತ್ತು ಉಡುಪಿ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ನೀಡಿದ 800 ಭೂ ರಹಿತ ಅರ್ಜಿದಾರರಿಗೆ ಕನಿಷ್ಠ  1 ಎಕ್ರೆ ಕೃಷಿ ಭೂಮಿಯ ಹಕ್ಕುಪತ್ರ ಒದಗಿಸುವಂತೆ ಸೂಕ್ತ ಕ್ರಮ ಕೈಗೊಳ್ಳಬೇಕು. ಉಡುಪಿ ಮತ್ತು ದ.ಕ. ಜಿಲ್ಲೆಯ ಆದಿವಾಸಿ ಬುಡಕಟ್ಟು ಕೊರಗ ಜನಾಂಗ ಜನಗಣತಿಯಿಂದ ಜನಗಣತಿಗೆ ಜನಸಂಖ್ಯೆ ಇಳಿಮುಖವಾಗುತ್ತಿರುವುದು, ಹದಗೆಟ್ಟ ಆರೋಗ್ಯ, ರಕ್ತ ಹೀನತೆ ಮತ್ತು ಆಹಾರದ ಪರಿಸ್ಥಿತಿಗಳು, ಸಾಮಾಜಿಕ ಸಮಸ್ಯೆಗಳು ಕೂಡಾ ಅದಕ್ಕೆ ಕಾರಣವಾಗಿದೆ. ಕೇವಲ 20 ವರ್ಷಗಳಲ್ಲಿ ನಮ್ಮ ಜನಸಂಖ್ಯೆ ಶೇ. 30ರಷ್ಟು ಕಡಿಮೆಯಾಗಿದೆ. ಈ ಬಗ್ಗೆ  ಸಮಗ್ರ ಆರೋಗ್ಯ ಅಧ್ಯಯನ ಮತ್ತು ಸಂಶೋಧನೆ ನಡೆಸಬೇಕು. ಅದಕ್ಕಾಗಿ ವಾರ್ಷಿಕ 2 ಕೋ.ರೂ. ಅನುದಾನ ಒದಗಿಸಬೇಕು ಎಂದರು.

ಸಂಘಟನೆಯ ಮುಖಂಡರಾದ ಕೆ. ಪುತ್ರನ್, ದಿವಾಕರ್, ಚಂದ್ರ ಕೊಕ್ಕರ್ಣೆ, ಬೊಗ್ರ ಕೊರಗ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article