
ಉಳ್ಳಾಲ ಅಂಡರ್ ಪಾಸ್ ನಿರ್ಮಾಣ ಯೋಜನೆಯನ್ನು ಅನುಮೋದಿಸುವ ಕೆಲಸ ನನ್ನದು: ಸಂಸದ ಬ್ರಿಜೇಶ್ ಚೌಟ
ಉಳ್ಳಾಲ: ಸೋಮೇಶ್ವರ ರೈಲ್ವೇ ಗೇಟ್ ಸಮಸ್ಯೆಯನ್ನು ನಾನು ಗಂಭೀರವಾಗಿ ಪರಿಗಣಿಸಿದ್ದೇನೆ. ಇಲ್ಲಿ ರೈಲ್ವೇ ಅಂಡರ್ ಪಾಸ್ ನಿರ್ಮಿಸಲು ಬೇಕಾದ ಜಾಗವನ್ನು ಸೋಮೇಶ್ವರ ಪುರಸಭೆಯು ಒದಗಿಸಿ ಕೊಟ್ಟು, ಪುರಸಭೆ ಇಂಜಿನಿಯರ್ ರೈಲ್ವೇ ಅಂಡರ್ ಪಾಸ್ ನಿರ್ಮಾಣದ ಬಗೆಗಿನ ರೂಪು ರೇಷ್ಮೆಯನ್ನು ಸಿದ್ಧ ಪಡಿಸಿ ನೀಡಿದಲ್ಲಿ, ಅಂಡರ್ ಪಾಸ್ ನಿರ್ಮಾಣ ಯೋಜನೆಯನ್ನು ಅನುಮೋದಿಸುವ ಕೆಲಸ ನನ್ನದೆಂದು ಸಂಸದ ಬ್ರಿಜೇಶ್ ಚೌಟ ಹೇಳಿದರು.
ಸೋಮೇಶ್ವರ ಪುರಸಭೆಗೆ ಭೇಟಿ ನೀಡಿದ ಅವರು ಪುರಸಭಾ ಸದಸ್ಯರು ಮತ್ತು ಸಾರ್ವಜನಿಕರ ಅಹವಾಲು ಸ್ವೀಕರಿಸಿದರು.
ಈ ವೇಳೆ ಸೋಮೇಶ್ವರ ಪುರಸಭಾ ಉಪಾಧ್ಯಕ್ಷ ರವಿಶಂಕರ್ ಸೋಮೇಶ್ವರ ಮಾತನಾಡಿ, ಪುರಸಭೆ ಕಚೇರಿ ಮತ್ತು ಸೋಮನಾಥ ಕ್ಷೇತ್ರ ಸಂಪರ್ಕಕ್ಕೆ ಸೋಮೇಶ್ವರದ ರೈಲ್ವೇ ಗೇಟ್ ಕೊಂಡಿಯಾಗಿದೆ. ಇಲ್ಲಿ ದಿವಸಕ್ಕೆ ಸುಮಾರು 60 ರಷ್ಟು ರೈಲು ಓಡುವುದರಿಂದ ಪದೇ ಪದೇ ಗೇಟ್ ಹಾಕುತ್ತಿರುವ ಪರಿಣಾಮ ಜನರು ದಿನ ನಿತ್ಯ ಸಮಸ್ಯೆ ಎದುರಿಸುತ್ತಿದ್ದು ಈ ವಿದ್ಯಮಾನವು ಪ್ರದೇಶದ ಸರ್ವಾಂಗೀಣ ಅಭಿವೃದ್ಧಿಗೆ ಮಾರಕವಾಗಿ ಪರಿಣಮಿಸಿದೆ. ಶೀಘ್ರ ಇಲ್ಲಿಗೆ ರೈಲ್ವೇ ಅಂಡರ್ ಪಾಸನ್ನು ಅನುಷ್ಟಾನಗೊಳಿಸಬೇಕೆಂದು ಸಂಸದರಲ್ಲಿ ಮನವಿ ಮಾಡಿದರು.
ಪುರಸಭಾ ಸದಸ್ಯರಾದ ಸಲಾಮ್ ಉಚ್ಚಿಲ್ ಮಾತನಾಡಿ ರಾ.ಹೆ.66 ರ ಉಚ್ಚಿಲದ ರಿಲಾಯನ್ಸ್ ಪೆಟ್ರೋಲ್ ಬಂಕ್ ಬಲಿ ಒಂದು ಕಡೆ ಸರ್ವಿಸ್ ರಸ್ತೆ ಮಾಡಿದ್ದಾರೆ. ಇನ್ನೊಂದು ಕಡೆ ಸರ್ವಿಸ್ ರಸ್ತೆ ಮಾಡದ ಪರಿಣಾಮ ಈ ಪ್ರದೇಶದಲ್ಲಿ ಸಾಕಷ್ಟು ಅಪಘಾತಗಳು ನಡೆಯುತ್ತಿದೆ. ಉಚ್ಚಿಲ ಪ್ರದೇಶದಲ್ಲಿ ಕಡಲ್ಕೊರೆತದಿಂದಾಗಿ ರಸ್ತೆ ಸಂಪರ್ಕವೇ ಕಡಿತಗೊಂಡಿದೆ ಎಂದು ದೂರಿದರು.
ಪುರಸಭಾ ಸದಸ್ಯರ ದೂರಿಗೆ ಪ್ರತಿಕ್ರಿಯಿಸಿ ಮಾತನಾಡಿದ ಸಂಸದ ಬೃಜೇಶ್ ಚೌಟ ಅವರು ಕೇಂದ್ರದಲ್ಲಿ ಬಿಜೆಪಿ ಸರಕಾರ ಬಂದ ಮೇಲೆ ರೈಲ್ವೇಗೆ ಸಂಬಂಧಿಸಿದಂತೆ ಎಲ್ಲೆಲ್ಲಿಗೆ ಅಂಡರ್ ಪಾಸ್, ಫ್ಲೈ ಓವರ್ ಅಗತ್ಯತೆ ಇತ್ತೋ ಅಲ್ಲಿ ಯೋಜನೆಗಳನ್ನು ಅನುಷ್ಟಾನಗೊಳಿಸಲಾಗಿದೆ. ತೊಕ್ಕೊಟ್ಟು ಒಳಪೇಟೆಯಲ್ಲಿ ಜನರು ರೈಲ್ವೇ ಹಳಿ ದಾಟಲು ಪಾದಚಾರಿ ಮೇಲ್ಸೇತುವೆ ಮಂಜೂರಾಗಿದ್ದು ಶೀಘ್ರವೇ ಕಾಮಗಾರಿ ಅನುಷ್ಟಾನಗೊಳ್ಳಲಿದೆ ಎಂದು ಹೇಳಿದರು.
ಸೋಮೇಶ್ವರ ಪುರಸಭಾ ಅಧ್ಯಕ್ಷರಾದ ಕಮಲ, ಮುಖ್ಯಾಧಿಕಾರಿ ಮತ್ತಡಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಪುರುಷೋತ್ತಮ ಗಟ್ಟಿ, ವಿಪಕ್ಷ ನಾಯಕ ಪುರುಷೋತ್ತಮ ಶೆಟ್ಟಿ,ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಕ್ಷೇತ್ರಾಧ್ಯಕ್ಷ ಜಗದೀಶ್ ಆಳ್ವ ಕುವೆತ್ತಬೈಲು ಮತ್ತಿತರರು ಉಪಸ್ಥಿತರಿದ್ದರು.