ಏ.6 ರಂದು ಪೊಳಲಿ ‘ಅಮ್ಮನೆಡೆಗೆ ನಮ್ಮ ನಡಿಗೆ’ ಪಾದಯಾತ್ರೆ

ಏ.6 ರಂದು ಪೊಳಲಿ ‘ಅಮ್ಮನೆಡೆಗೆ ನಮ್ಮ ನಡಿಗೆ’ ಪಾದಯಾತ್ರೆ


ಬಂಟ್ವಾಳ: ವಿಶ್ವ ಹಿಂದೂ ಪರಿಷದ್,ಬಜರಂಗದಳ ಬಂಟ್ವಾಳ ಪ್ರಖಂಡದ ಆಶ್ರಯದಲ್ಲಿ ಐದನೇ ವರ್ಷದ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ‘ಅಮ್ಮನೆಡೆಗೆ ನಮ್ಮ ನಡಿಗೆ’ ಪಾದಯಾತ್ರೆಯು ಏ.6 ರಂದು ನಡೆಯಲಿದೆ ಎಂದು ವಿ.ಹಿಂ.ಪ. ಬಂಟ್ವಾಳ ಪ್ರಖಂಡದ ಅಧ್ಯಕ್ಷ, ನ್ಯಾಯವಾದಿ ಪ್ರಸಾದ್ ಕುಮಾರ್ ರೈ ತಿಳಿಸಿದ್ದಾರೆ.

ಮಂಗಳವಾರ ಬಂಟ್ವಾಳ ಪ್ರೆಸ್‌ಕ್ಲಬ್‌ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು ಅಂದು ಬೆಳಿಗ್ಗೆ 5.30ಕ್ಕೆ ಏಕಕಾಲದಲ್ಲಿ ಬಿ.ಸಿ.ರೋಡಿನ ಕೈಕಂಬ ಪೊಳಲಿ ದ್ವಾರ ಹಾಗೂ ಪುದು ಗ್ರಾಮದ ಕಡೇಗೋಳಿ ಪೊಳಲಿ ದ್ವಾರದ ಬಳಿಯಿಂದ ಮತ್ತು ಗುರುಪುರ ಕೈಕಂಬ ಪೊಳಲಿ ದ್ವಾರದಿಂದ ಬೆಳಗ್ಗೆ 6.30ಕ್ಕೆ ಪಾದಯಾತ್ರೆ ಆರಂಭಗೊಂಡು ಸುಮಾರು 9 ಗಂಟೆಯ ಹೊತ್ತಿಗೆ ಸಂಪನ್ನಗೊಳ್ಳಲಿದೆ ಎಂದರು.

ಪೊಳಲಿ ಶ್ರೀರಾಜರಾಜೇಶ್ವರಿ ದೇವಾಲಯ ಬಂಟ್ವಾಳ ತಾಲೂಕಿನ ಅತ್ಯಂತ ಪುರಾತನ ಇತಿಹಾಸವುಳ್ಳ ಕ್ಷೇತ್ರವಾಗಿದ್ದು,ಸರಕಾರದ ‘ಎ’ ಮಾನ್ಯತೆ ಹೊಂದಿರುವ ಕ್ಷೇತ್ರವಾಗಿದ್ದು, ವಾರ್ಷಿಕವಾಗಿ 6 ರಿಂದ 8 ಕೋ.ರೂ. ಆದಾಯ ಬರುತ್ತಿದೆ,ಇಲ್ಲಿ ಸಾಮಾಜಿಕ,ಧಾರ್ಮಿಕ ಪರಿವರ್ತನೆಯನ್ನು ಮಾಡಬೇಕಾದ ಅನಿವಾರ್ಯತೆ ಎದುರಾಗಿದ್ದು,ಈ ನಿಟ್ಟಿನಲ್ಲಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದರು.

ವಿವಿಧ ಬೇಡಿಕೆಯ ಮನವಿ ಸಲ್ಲಿಕೆ:

ಪಾದಯಾತ್ರೆ ಸಂಪನ್ನಗೊಂಡ ಬಳಿಕ ದೇವಳದ ಆಡಳಿತ ಸಮಿತಿ ಹಾಗೂ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳ ಅವರ ಮೂಲಕ ವಿವಿಧ ಬೇಡಿಕೆ ಮನವಿ ಸಲ್ಲಿಸಲಾಗುವುದು ಎಂದು ವಿ.ಹಿಂ.ಪ. ಅಧ್ಯಕ್ಷ ಪ್ರಸಾದ್ ಕುಮಾರ್ ರೈ ತಿಳಿಸಿದರು.

ಪ್ರಮುಖವಾಗಿ ದೇವಾಲಯಕ್ಕೆ ಬರುವ ಭಕ್ತರಿಗೆ ಹಿಂದೂ ಸಂಸ್ಕೃತಿಗೆ ಪೂರಕವಾದ ವಸ್ತ್ರಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು, ದೇವಸ್ತರಾನದ ವತಿಯಿಂದ ಸುಸಜ್ಜಿತವಾದ ಗೋಶಾಲೆ ನಿರ್ಮಾಣ ಮತ್ತು ನಿರ್ವಹಣೆ ಮಾಡಬೇಕು, ಹಿಂದೂ ಬಾಲಸಂಸ್ಕಾರ ಕೇಂದ್ರವನ್ನು ತೆರೆದು ಹಿಂದೂ ಧಾರ್ಮಿಕ ಶಿಕ್ಷಣವನ್ನು ನೀಡುವಂತಾಗಬೇಕು, ದೇವಸ್ಥಾನದಲ್ಲಿ ವರ್ಷಕ್ಕೊಮ್ಮೆ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜಿಸಬೇಕು, ದೇವಳದ ಜಾತ್ರೆ, ಉತ್ಸವಾದಿ ಸಂದರ್ಭ ಹಿಂದೂ ಧಾರ್ಮಿಕ ದತ್ತಿ ಕಾಯ್ದೆಯನುಸಾರ ಹಿಂದೂಗಳಿಗೆ ಮಾತ್ರ ವ್ಯಾಪಾರ, ವ್ಯವಹಾರ ಕೇಂದ್ರ ತೆರೆಯಲು ಅವಕಾಶ ಮಾಡಿಕೊಡಬೇಕು ಹೊರತು ಅನ್ಯಮತೀಯರಿಗೆ ಇದಕ್ಕೆ ಅವಕಾಶ ನೀಡಬಾರದು, ಉತ್ಸವದ ಸಮಯಗಳಲ್ಲಿ ರಾತ್ರಿ ಬೋಜನದ ವ್ಯವಸ್ಥೆಯನ್ನು ಮಾಡಬೇಕು ಎಂದು ಮನವಿ ಮೂಲಕ ಒತ್ತಾಯಿಸಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ವಿಹಿಂಪ, ಬಜರಂಗದಳದ ಪದಾಧಿಕಾರಿಗಳಾದ ಕ. ಕೃಷ್ಣಪ್ಪ, ಭರತ್ ಕುಮ್ಡೇಲು, ರಾಜೇಶ್ ಗಂಜಿಮಠ, ಸಂತೋಷ್ ಸರಪಾಡಿ, ಕೇಶವ ದೈಪಲ ಮೊದಲಾದವರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article