
ಕೆಪಿಎಸ್ ಮಾದರಿಯ ಶಾಲೆಗಳ ಅಗತ್ಯತೆ ಇದೆ: ಅಶೋಕ್ ರೈ
ಬಂಟ್ವಾಳ: ಪ್ರಸ್ತುತ ಕಾಲಘಟ್ಟದಲ್ಲಿ ಪ್ರತಿ ಗ್ರಾಮದಲ್ಲೂ ಕೆಪಿಎಸ್ ಮಾದರಿಯ ಶಾಲೆಗಳನ್ನು ಆರಂಭಿಸುವ ಅಗತ್ಯತೆ ಇದೆ, ಪ್ರಸ್ತುತ ಸಾಲಿನಲ್ಲಿ ಶಿಕ್ಷಣಕ್ಕೆ ಬಜೆಟಿನಲ್ಲಿ 2500 ಸಾ.ಕೋ. ಮೀಸಲಿಟ್ಟಿದ್ದು ಮಕ್ಕಳ ಉತ್ತಮ ಶಿಕ್ಷಣಕ್ಕೆ ಸಹಕಾರಿಯಾಗಲಿದೆ ಎಂದು ಪುತ್ತೂರು ಶಾಸಕ ಅಶೋಕ್ ರೈ ಹೇಳಿದ್ದಾರೆ.
ಶನಿವಾರ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದ ಮಿತ್ತೂರು ಸರಕಾರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಂ.ಆರ್.ಪಿ.ಎಲ್ ಹಾಗೂ ಎನ್.ಎಂ.ಪಿ.ಎ ಸಂಸ್ಥೆಯ ಸಿ.ಎಸ್. ಆರ್ ಅನುದಾನದಿಂದ ನಿರ್ಮಾಣವಾದ ತರಗತಿ ಕೊಠಡಿಗಳನ್ನು ಹಾಗೂ ದಾನಿಗಳ ಸಹಕಾರದಿಂದ ನಿರ್ಮಾಣವಾದ ಶಾಲಾ ಸಭಾಭವನದ ಉದ್ಘಾಟಿಸಿ ಅವರು ಮಾತನಾಡಿದರು.
ಸರಕಾರಿ ಶಾಲೆಯಲ್ಲೂ ಗುಣಮಟ್ಟದ ಶಿಕ್ಷಣ ದೊರೆಯುತ್ತಿದೆ. ಸರಕಾರಿ ಶಾಲೆಗಳಿಗೆ ಮಕ್ಕಳನ್ನು ದಾಖಲಿಸಿ. ನಮ್ಮಮಕ್ಕಳಿಗೆ ನಾವೇ ಮಾದರಿಯಾಗಬೇಕು ಎಂದು ಹೇಳಿದ ಅವರು ಶಾಲೆಯ ನೂತನ ಸಭಾಂಗಣ ಸಂಪೂರ್ಣಗೊಳಿಸುವ ನಿಟ್ಟಿನಲ್ಲಿ 3 ಲಕ್ಷ ಅನುದಾನ ನೀಡುವುದಾಗಿ ಭರವಸೆ ನೀಡಿದರಲ್ಲದೆ ಶಾಲೆಯ ಸಂಪರ್ಕ ರಸ್ತೆಯನ್ನೂ ಅಭಿವೃದ್ದಿಪಡಿಸಲು ಕ್ರಮಕೈಗೊಳ್ಳಲಾಗುವುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ, ವಹಿಸಿದ್ದರು.
ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಸಮುದಾಯ ಅಭಿವೃದ್ಧಿ ವಿಭಾಗದಿಂದ ನೀಡಲಾದ ಪೀಠೋಪಕರಣ ಹಾಗೂ ಶಾಲಾ ಹಳೆ ವಿದ್ಯಾರ್ಥಿಗಳಿಂದ ಒದಗಿಸಿದ ಸಿ.ಸಿ ಕ್ಯಾಮೆರಾ ಹಸ್ತಾಂತರಿಸಲಾಯಿತು.
ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥ ಎಂ.ಜಿ ಮಾತನಾಡಿ ಮಕ್ಕಳಲ್ಲಿ ಛಲ ಮತ್ತು ಕನಸು ಇದ್ದರೆ ಗುರಿ ಸಾಧಿಸಲು ಸಾಧ್ಯ, ಕನಸು ಎಂಬುದು ಚೈತನ್ಯ ಶಕ್ತಿ ಎಂದು ಅಭಿಪ್ರಾಯ ಪಟ್ಟರು
ಇಡ್ಕಿದು ಗ್ರಾಮ ಪಂಚಾಯತ್ ಅಧ್ಯಕಷೆ ಮೋಹಿನಿ ಜಯಕರ, ಪಂಚಾಯತ್ ಸದಸ್ಯರುಗಳಾದ ಸುಧೀರ್ ಕುಮಾರ್ ಶೆಟ್ಟಿ, ರಮೇಶ್ ಪೂಜಾರಿ, ಸಂಜೀವ ಪೂಜಾರಿ, ಜಯಂತಿ,ಎಂ.ಆರ್ .ಪಿ. ಎಲ್ ಮೆನೇಜರ್ ಪ್ರದೀಪ್ ಕುಮಾರ್, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗೋಕುಲ್ ದಾಸ್ ಭಕ್ತ, ಕ್ಲಸ್ಟರ್ ಸಮೂಹ ಸಂಪನ್ಮೂಲ ವ್ಯಕ್ತಿ ಜ್ಯೋತಿ, ಇಡ್ಕಿದು ಸೇವಾ ಸಹಕಾರಿ ಸಂಘ ಉರಿಮಜಲು ಅಧ್ಯಕ್ಷ ಸುಧಾಕರ ಶೆಟ್ಟಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೇಲ್ವಿಚಾರಕಿ ಆಶಾ ಪಾರ್ವತಿ, ಶಾಲಾ ಹಿರಿಯ ವಿದ್ಯಾರ್ಥಿ ಫ್ಲೆವಿಯ ಮೈಕಲ್ ಡಿಸೋಜ, ನಾಸಿರ್ ಕೊಲ್ಪೆ, ಅಂಗನವಾಡಿ ಕಾರ್ಯಕರ್ತೆ ಭವಾನಿ ಮೊದಲಾದವರು ಉಪಸ್ಥಿತರಿದ್ದರು.
ಶಾಲಾ ಮಕ್ಕಳು ಪ್ರಾರ್ಥಿಸಿ, ಮುಖ್ಯ ಶಿಕ್ಷಕಿ ಸರೋಜಾ ಎಂ. ಸ್ವಾಗತಿಸಿದರು, ಶಿಕ್ಷಕಿ ಪೂರ್ಣಿಮಾ ವಂದಿಸಿದರು. ಶಿಕ್ಷಕ ಸಂಜೀವ ಕಾರ್ಯಕ್ರಮ ನಿರೂಪಿಸಿದರು.