
ಹೊಸ ರೂಪ ಪಡೆದ ಬ್ರಹ್ಮಶ್ರೀ ನಾರಾಯಣಗುರು ವೃತ್ತ
ಬಂಟ್ವಾಳ: ಹಲವು ರಸ್ತೆಗಳನ್ನು ಸಂಧಿಸುವ ಬಿ.ಸಿ.ರೋಡ್ ನ ಹೃದಯಭಾಗದಲ್ಲಿರುವ ಬ್ರಹ್ಮಶ್ರೀ ನಾರಾಯಣಗುರು ವೃತ್ತ ಹೊಸರೂಪ ಪಡೆದು ಗಮನಸೆಳೆಯುತ್ತಿದೆ. ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಮುತುವರ್ಜಿಯಲ್ಲಿ ನಾರಾಯಣಗುರುಗಳ ಒಂದೇ ಜಾತಿ,ಒಂದೇ ಮತ,ಒಂದೇ ಧರ್ಮ" ಸಂದೇಶ ಸಾರುವ ಫಲಕ ಸಹಿತ ಸುಂದರವಾದ ವಿದ್ಯುತ್ ನ ಬೆಳಕನ್ನು ಹೊಂದಿರುವ ಗಾರ್ಡನ್ ನ ನೀಲನಕಾಶೆ ಈಗಾಗಲೇ ತಯಾರಾಗಿದ್ದು,ಶೀಘ್ರವೇ ವೃತ್ತದಲ್ಲಿ ಇದರ ಅನುಷ್ಠಾನ ಕಾರ್ಯವು ಆರಂಭವಾಗಲಿದೆ. ಬಳಿಕ ಇದರ ನಿರ್ವಹಣೆಯನ್ನು ಕೂಡ ಬಂಟ್ವಾಳತಾಲೂಕು ಬಿಲ್ಲವ ಸಮಾಜಸೇವಾಸಂಘವೇ ಮಾಡಲಿದೆ.
ಇದೀಗ ಬೃಹದಾಕಾರದ ವೃತ್ತ ನಿರ್ಮಾಣಗೊಂಡಿದ್ದು,ಈ ವೃತ್ತ ಬೇರ್ಪಡಿಸಲು ಮೂರು ಕಡೆಗಳಲ್ಲಿ ತ್ರಿಕೋನಾಕೃತಿಯ ಡಿವೈಡರ್ ಅನ್ನು ರಚಿಸಲಾಗಿದೆ. ಮಂಗಳೂರಿನಿಂದ ನೇರ ಸಾಗಿದರೆ ಬೆಂಗಳೂರು, ಹಾಸನ, ಮೈಸೂರು ಕಡೆಗೆ ಸಾಗಬಹುದು.ಎಡಭಾಗಕ್ಕೆ ತಿರುಗಿದರೆ ಧರ್ಮಸ್ಥಳ,ಬಂಟ್ವಾಳ ಪೇಟೆ, ಬಲಭಾಗಕ್ಕೆ ತಿರುಗಿದರೆ ಪಾಣೆಮಂಗಳೂರು, ಸರ್ಕಲ್ ಗೆ ಸುತ್ತುಹಾಕಿ ಬಲಕ್ಕೆ ತಿರುಗಿದರೆ ಬಿ.ಸಿ.ರೋಡ್ ಸಿಗುತ್ತದೆ.
ಇದೇ ರೀತಿಯ ತ್ರಿಕೋನಾಕೃತಿಯ ಡಿವೈಡರ್ ಗೂಡಿನಬಳಿ ಪ್ರದೇಶದಿಂದ ಬರುವ ಮಾರ್ಗದ ಬಳಿ, ಬಿ.ಸಿ.ರೋಡ್ ನಿಂದ ಬಂಟ್ವಾಳಕ್ಕೆ ತಿರುಗುವ ಜಾಗದಲ್ಲಿ ಸಮಸ್ಯೆ ಏನೆಂದರೆ ಬಂಟ್ವಾಳದಿಂದ ಬಿ.ಸಿ.ರೋಡಿಗೆ ತಿರುಗುವ ವೇಳೆ ಬಿ.ಸಿ.ರೋಡ್ ಭಾಗದಿಂದ ಬರುವ ವಾಹನಗಳು ಅಡ್ಡ ಸಿಕ್ಕರೆ, ಸ್ವಲ್ಪ ಮುಂದೆ ಸಾಗುವಾಗ ಬೆಂಗಳೂರು ಕಡೆಯಿಂದ ಬಿ.ಸಿ.ರೋಡ್ ಕಡೆ ಬರುವ ವಾಹನಗಳು ಅಡ್ಡಸಿಗುತ್ತವೆ.ಆಗ ಅಪಘಾತಕ್ಕೆ ಆಹ್ವಾನಿಸಿದಂತಾಗುತ್ತದೆ. ಮಂಗಳವಾರವು ಇದೇ ಸ್ಥಳದಲ್ಲಿ ಕಾರು ಮತ್ತು ಲಾರಿ ಅಪಘಾತಕ್ಕೊಳಗಾಗಿದೆ.ಹಾಗೆಯೇ ಟ್ರಾಫಿಕ್ ಜಾಮ್ ಆಗಾಗ್ಗೆ ಆಗುತ್ತವೆ. ಇದರ ಒಟ್ಟಾರೆ ಲಾಭವೆಂದರೆ ವಾಹನಗಳ ವೇಗಕ್ಕೆ ಬ್ರೇಕ್ ಬಿದ್ದಂತಾಗಿದೆ ಎಂಬ ಅಭಿಪ್ರಾಯ ಕೇಳಿಬಂದಿದೆ.