
ಚರ್ಚ್ ಧರ್ಮಗುರು ಸರ್ವಾಧಿಕಾರಿ ಧೋರಣೆ: ಹೋರಾಟದ ಎಚ್ಚರಿಕೆ
ಪುತ್ತೂರು: ಪುತ್ತೂರಿನ ಪ್ರತಿಷ್ಠಿತ ಮಾದೇ ದೇವುಸ್ ಚರ್ಚ್ನ ಧರ್ಮಗುರುಗಳು ಅನಗತ್ಯ ವಿಚಾರದಲ್ಲಿ ಮೂಗು ತೂರಿಸುವ ಕೆಲಸ ಮಾಡುತ್ತಿದ್ದು, ಅವರ ದುರಂಹಕಾರ ಹಾಗೂ ಸರ್ವಾಧಿಕಾರಿ ಧೋರಣೆ ವರ್ತನೆ ಮಿತಿ ಮೀರುತ್ತಿದೆ. ಚರ್ಚಿನ ಪೂಜಾ ಸಂದರ್ಭ ವೈಯುಕ್ತಿಕ ನೆಲೆಯಲ್ಲಿ ದೂಷಣೆ ಮಾಡುತ್ತಾರೆ. ಇಲ್ಲಿ ಪ್ರಶ್ನೆ ಮಾಡಲು ಅಥವಾ ಸಂವಾದಕ್ಕೆ ಅವಕಾಶವೇ ಇಲ್ಲ. ಈ ಬಗ್ಗೆ ಬಿಷಪ್ ಅವರಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಈ ವೈಯುಕ್ತಿಕ ದೂಷಣೆ ಇನ್ನೂ ಮುಂದುವರಿದರೆ ಪ್ರತಿಭಟನೆ ಹಾಗೂ ಕಾನೂನು ಹೋರಾಟ ನಡೆಸಲಾಗುವುದು ಎಂದು ಪುತ್ತೂರಿನ ಕ್ರಿಶ್ಚನ್ ಯೂನಿಯನ್ ಎಚ್ಚರಿಕೆ ನೀಡಿದೆ.
ಪುತ್ತೂರಿನ ಪ್ರೆಸ್ಕ್ಲಬ್ನಲ್ಲಿ ಬುಧವಾರ ಪತ್ರಿಕಾಗೋಷ್ಟಿಯಲ್ಲಿ ಕ್ರಿಶ್ಚನ್ ಯೂನಿಯನ್ ಪುತ್ತೂರು ಅಧ್ಯಕ್ಷ ಮೌರೀಸ್ ಮಸ್ಕರೇನ್ಹಸ್ ಅವರು ಅವರು ಮಾತನಾಡಿ, ಧರ್ಮಗುರುಗಳು ಎಸ್ಎಸ್ಎಲ್ಸಿ ಪರೀಕ್ಷಾ ಸಂದರ್ಭದಲ್ಲಿ ಶಾಲಾ ಆವರಣದಲ್ಲಿ ಸಿನಿಮಾ ಚಿತ್ರೀಕರಣಕ್ಕೆ ಅವಕಾಶ ಕೊಟ್ಟಿರುವುದು ಹಣಕ್ಕಾಗಿ. ಆದರೆ ಇದರಲ್ಲಿ ಅವರ ಯೋಚನೆ ವಿಫಲವಾಗಿತ್ತು. ಇದಕ್ಕೆ ನಾವು ಕಾರಣ ಎಂಬ ಹಿನ್ನಲೆಯಲ್ಲಿ ಇವರ ಎರಡನೇ ನಡೆ ಗೇಟ್ ಬಂದ್ ಮಾಡಿರುವುದು. ಈ ಸಂದರ್ಭದಲ್ಲಿ ಅವರಲ್ಲಿ ಮಾತನಾಡುವ ಅವಕಾಶ ಇರಲಿಲ್ಲ. ಅವರ ನಿವಾಸದಲ್ಲಿ ಸುಮಾರು ೨೫ ಮಂದಿ ಹೆಂಗಸರು ಹಾಗೂ ಗಂಡಸರು ಸೇರಿಕೊಂಡು ಮದ್ಯಪಾನದಲ್ಲಿ ನಿರತರಾಗಿದ್ದರು. ಹಾಗಾಗಿ ಗೇಟ್ ಬಂದ್ ಮಾಡಿರುವುದನ್ನು ಪ್ರಶ್ನಿಸಲು ಸಾಧ್ಯವಾಗಲಿಲ್ಲ. ಆದರೆ ಈ ಬಗ್ಗೆ ಬಿಷಪ್ ಅವರಿಗೆ ದೂರು ನೀಡಲಾಗಿತ್ತು ಎಂದ ಅವರು ಕ್ರಿಶ್ಚನರ ಪವಿತ್ರ ಲೆಂಟ್ ದಿನಗಳ ಕೊನೆಯ ವಾರದಲ್ಲಿ ತರಾತುರಿಯಲ್ಲಿ ಗೇಟಿಗೆ ಬೀಗ ಹಾಕುವ ಸಮಯವನ್ನು ಬದಲಿಸುವ ನಿರ್ಧಾರವನ್ನು ಯಾಕೆ ಕೈಗೊಂಡರು. ಭಕ್ತರು ಬಂದು ಪ್ರಾರ್ಥನೆ ಮಾಡಬಾರದೆಂದು ಈ ನಿರ್ಧಾರವೇ. ಸಂಜೆ 7 ಗಂಟೆಗೆ ಶಾಲೆ ಇರುತ್ತದೆಯೇ ಇದೇ ಆವರಣದಲ್ಲಿ ಸರ್ಕಾರದಿಂದ ಅನುದಾನ ಪಡೆದು ಸಮುದಾಯಭವನ ನಿರ್ಮಿಸುವ ಅಗತ್ಯ ಏನಿತ್ತು ಈ ಎಲ್ಲಾ ಪ್ರಶ್ನೆಗಳಿಗೆ ಧರ್ಮಗುರುಗಳು ಉತ್ತರಿಸಬೇಕು ಎಂದು ಆಗ್ರಹಿಸಿದರು.
ಚರ್ಚ್ ಸಮುದಾಯ ಭವನದಲ್ಲಿ ಮದುವೆ ಇನ್ನಿತರ ಶುಭ ಕಾರ್ಯಗಳು ನಡೆಯುತ್ತಿರುತ್ತವೆ. ಈ ಸಂದರ್ಭದಲ್ಲಿ ಅಲ್ಲಿ ಶಾಲಾ ವಠಾರವಾದರೂ ಇಲ್ಲಿ ಮದ್ಯ ಸರಬರಾಜು ನಡೆಯುತ್ತಿದೆ. ಚರ್ಚ್ ಪಾದ್ರಿಯವರು ಮದ್ಯ ಸರಬರಾಜುಮಾಡುವುದಿಲ್ಲ ಎಂದು ಇಲಾಖೆಗೆ ನಿರಾಕ್ಷೇಪಣೆ ಪತ್ರವನ್ನು ನೀಡಿರುತ್ತಾರೆ. ಇಲ್ಲಿ ನಿಯಮಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗುತ್ತಿದೆ. ಮಾಹಿತಿ ಹಕ್ಕಿನಲ್ಲಿ ಮಾಹಿತಿ ಕೇಳುವಂತಿಲ್ಲ. ಪ್ರಶ್ನೆ ಮಾಡಿದರೆ ಹಲ್ಲೆಗೆ ಮುಂದಾಗುತ್ತಾರೆ. ರೋಗಿಗಳಿಗೆ ಸಹಾಯಕೋರಿದರೆ ನಿರಾಕರಣೆ ಮಾಡುತ್ತಾರೆ. ಕುಟುಂಬಗಳ ವಿಚಾರದಲ್ಲಿ ವೈಮನಸ್ಸು ಮೂಡಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಕ್ರಿಶ್ಚನ್ ಯೂನಿಯನ್ ಪುತ್ತೂರು ಉಪಾಧ್ಯಕ್ಷ ಜೋನ್ ಕೆನ್ಯೂಟ್ ಮಸ್ಕರೇನ್ಹಸ್, ಸದಸ್ಯರಾದ ವಿನ್ಸೆಂಟ್ ತಾವ್ರೋ, ಅರುಣ್ ಪಿಂಟೋ, ರೋಶನ್ ಲಸ್ರಾದೋ ಉಪಸ್ಥಿತರಿದ್ದರು.