
ಏ.24 ರಿಂದ 26 ವರೆಗೆ ಕಾನಳ್ಳಿ ಶ್ರೀ ಚೌಡೇಶ್ವರಿ ದೇವಸ್ಥಾನದ 29ನೇ ವಾರ್ಷಿಕೋತ್ಸವ
ಸಿದ್ದಾಪುರ: ಉ.ಕ ಜಿಲ್ಲೆಯ ಸಿದ್ದಾಪುರದಿಂದ 5 ಕಿ.ಮೀ ದೂರದಲ್ಲಿರುವ ಕಾನಳ್ಳಿ ಶ್ರೀ ಚೌಡೇಶ್ವರಿ ದೇವಸ್ಥಾನದ 29ನೇ ವಾರ್ಷಿಕೋತ್ಸವವು ಏ.24 ರಿಂದ ಆರಂಭಗೊಂಡು 26ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
ಏ.24 ರಂದು ಬೆಳಗ್ಗೆ ಶ್ರೀ ದೇವರಲ್ಲಿ ಸಾಮೂಹಿಕ ಪ್ರಾರ್ಥನೆ, ಪುಣ್ಯಾಹ, ಗಣಪತಿ ಪೂಜೆ, ಶ್ರೀ ಚೆನ್ನಮ್ಮ ದೇವಿ (ಜಲದೇವತೆ)ಗೆ ಕಲಾಭಿವೃದ್ಧಿ ಹೋಮ ಹಾಗೂ ವಿಶೇಷ ಪೂಜೆ, ಮಂಗಳಾರತಿ, ತೀರ್ಥ-ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ.
ಸಂಜೆ 7ರಿಂದ ಶ್ರೀ ಸತ್ಯಸಾಯಿ ಸೇವಾ ಸಮಿತಿ-ಸಿದ್ದಾಪುರ ಇವರಿಂದ ಭಜನಾ ಕಾರ್ಯಕ್ರಮ. ರಾತ್ರಿ 9ಕ್ಕೆ ಶ್ರೀ ಮೂಖಭೂತೇಶ್ವರನ ಸನ್ನಿಧಿಯಲ್ಲಿ ಉಗ್ರನರಸಿಂಹ ಹೋಮ ಹಾಗೂ ಮಹಾಭೂತ ಬಲಿ ನಡೆಯಲಿರುವುದು..
ಏ.25 ರಂದು ಶ್ರೀ ಯಕ್ಷಿಣಿ ದೇವಿಗೆ ಕಲಾಭಿವೃದ್ಧಿ ಹೋಮ, "ನಾಗಪ್ರತಿಷ್ಠೆ", ಮಂಗಳಾರತಿ, ತೀರ್ಥ-ಪ್ರಸಾದ ವಿತರಣೆ ಹಾಗೂ ಅನ್ನ ಸಂತರ್ಪಣೆ ನಡೆಯಲಿದೆ.
ಸಂಜೆ 7ಕ್ಕೆ ಶ್ರೀ ರಾಮಾಂಜನೇಯ ಕಲಾ ಮಂಡಳಿ-ಕುಮಟಾ ಇವರಿಂದ ಭಜನಾ ಕಾರ್ಯಕ್ರಮ. ರಾತ್ರಿ 9ಕ್ಕೆ ಶ್ರೀ ಹೂಣಸೂರು ಭೂತೇಶ್ವರನ ಸನ್ನಿಧಿಯಲ್ಲಿ ಉಗ್ರನರಸಿಂಹ ಹೋಮ ಹಾಗೂ ಮಹಾಭೂತಬಲಿ ನಡೆಯಲಿದೆ.
ಏ.26 ರಂದುಮುಂಜಾನೆ ಸ್ಥಾನಶುದ್ಧಿ, ಬಿಂಬಶುದ್ಧಿ, ಕಲಾವೃದ್ಧಿ ,'ಶ್ರೀ ದುರ್ಗಾ ಹೋಮ', ಅಮ್ಮನವರಿಗೆ 'ಪಲ್ಲಕ್ಕಿ ಉತ್ಸವದ ಮೆರವಣಿಗೆ', ಪೂರ್ಣಾಹುತಿ, ಗುರುಪಾದುಕಾ ಪೂಜೆ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಬ್ರಹ್ಮಕಲಶೋತ್ಸವ, ಮಹಾ ಮಂಗಳಾರತಿ, ತೀರ್ಥಪ್ರಸಾದ ವಿತರಣೆ, ಶ್ರೀ ಅನ್ನಪೂರ್ಣೇಶ್ವರಿ ಪೂಜೆ, ಹಾಗೂ ಮಹಾ 'ಅನ್ನ ಸಂತರ್ಪಣೆ' ನಡೆಯಲಿದೆ.
ಈ ಸಂದರ್ಭದಲ್ಲಿ ಶಿರಸಿ ಬಣ್ಣದ ಮಠದ ಶ್ರೀ ಶಿವಲಿಂಗ ಮಹಾ ಸ್ವಾಮೀಜಿಯವರು ಹಾಗೂ ಸೊರಬ ಶ್ರೀ ಸಂಸ್ಥಾನಮಠ -ಜಡೆ ಇದರ ಮಠಾಧೀಶರಾದ ಶ್ರೀ ನಿರಂಜನ ಪ್ರಭು ಮಹಾಂತ ಮಹಾಸ್ವಾಮಿಗಳವರ ಉಪಸ್ಥಿತಿಯಲ್ಲಿ ಧಾರ್ಮಿಕ ಪ್ರವಚನ ನಡೆಯಲಿರುವುದು.
ಸಂಜೆ 7 ರಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ರಾತ್ರಿ 10 ಗಂಟೆಗೆ ಸಾಮಾಜಿಕ ನಾಟಕ ಪ್ರದರ್ಶನ ಗೊಳ್ಳಲಿದೆ ಎಂದು ಶ್ರೀ ಚೌಡೇಶ್ವರಿ ದೇವಸ್ಥಾನದ ಧರ್ಮದರ್ಶಿಗಳಾದ ಭಾಸ್ಕರ್ ಸಿ. ಕಾನಳ್ಳಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.