ವೀರಕಂಬದಲ್ಲಿ ಕಾಟಿಯ ಉಪಟಳ: ತೋಟಗಳು ನಾಶ, ಕೃಷಿಕರಲ್ಲಿ ಆತಂಕ

ವೀರಕಂಬದಲ್ಲಿ ಕಾಟಿಯ ಉಪಟಳ: ತೋಟಗಳು ನಾಶ, ಕೃಷಿಕರಲ್ಲಿ ಆತಂಕ


ಬಂಟ್ವಾಳ: ತಾಲೂಕಿನ ವೀರಕಂಭ ಸಮೀಪದ ಕೆಲ ಗ್ರಾಮಗಳಲ್ಲಿ ಕಾಡುಕೋಣದ ಉಪಟಳ ಅತೀಯಾಗಿದೆ ಎಂದು ಕೃಷಿಕರು ದೂರಿದ್ದಾರೆ.

ಸ್ಥಳೀಯವಾಗಿ ಕಾಟಿ ಎನ್ನುವ ಈ ಕೋಣಗಳು, ತೋಟಕ್ಕೆ ಲಗ್ಗೆ ಇಟ್ಟು ಅಪಾರ ಪ್ರಮಾಣದ ಹಾನಿಯನ್ನು ಉಂಟುಮಾಡುತ್ತಿರುವುದು ಕೃಷಿಕರಲ್ಲಿ ಆತಂಕವನ್ನುಂಟು ಮಾಡಿದೆ. ಕೃಷಿ ಕೂಲಿ ಕಾರ್ಮಿಕರು ಹಾಗೂ ಕೃಷಿಕರು ಇದರಿಂದ ತೋಟಕ್ಕೆ ತೆರಳಲೂ ಭಯಪಡುವಂತಾಗಿದೆ.

ಬಂಟ್ವಾಳ ತಾಲೂಕಿನ ವೀರಕಂಭದಿಂದ ಅನಂತಾಡಿ ಗ್ರಾಮದ ಗಡಿ ಭಾಗದಲ್ಲಿ ರಕ್ಷಿತಾರಣ್ಯ ಪ್ರದೇಶವಿದ್ದು, ಇಲ್ಲಿಂದ ಕಾಡುಕೋಣಗಳು ಕೃಷಿ ತೋಟಗಳಿಗೆ ನುಗ್ಗುತ್ತವೆ ಎನ್ನಲಾಗಿದೆ. ಇದರಿಂದ ತೊಂದರೆಗೆ ಒಳಗಾದ ಕೃಷಿಕ ರಾಮಪ್ರಸಾದ್ ಶೆಟ್ಟಿ ಕೊಂಬಿಲ ಅವರು ಈ ಕುರಿತು ಅರಣ್ಯ ಇಲಾಖೆಯ ಗಮನಕ್ಕೂ ತಂದಿದ್ದಾರೆ.

ಕಳೆದ ಎರಡು ದಿನಗಳ ಹಿಂದೆ ಕೃಷಿ ತೋಟಗಳಿಗೆ ನುಗ್ಗಿ ಅಡಿಕೆ-ಬಾಳೆ ಗಿಡಗಳನ್ನು ನಾಶ ಮಾಡಿರುವುದಾಗಿ ಅವರು ತಿಳಿಸಿದ್ದಾರೆ. ಉಡುಪಿ-ಕಾಸರಗೋಡು 400 ಕೆವಿ ವಿದ್ಯುತ್ ಲೈನ್‌ಗಾಗಿ ಮರಗಳನ್ನು ಕಡಿಯಲಾಗಿದ್ದು, ಈ ಹಾದಿಯ ಮೂಲಕ ಕೋಣಗಳು ತೋಟಕ್ಕೆ ನುಗ್ಗುತ್ತಿವೆ ಎಂದು ದೂರಲಾಗಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article