
ಮರ ಸಿಗಿಸುವ ಯಂತ್ರಕ್ಕೆ ಕೈ ಸಿಲುಕಿ ವಿಪರೀತ ರಕ್ತಸ್ರಾವದಿಂದ ಕಾರ್ಮಿಕನ ಮೃತ್ಯು
ಬಂಟ್ವಾಳ: ಮರ ಸಿಗಿಸುವ ಯಂತ್ರಕ್ಕೆ ಕೈ ಸಿಲುಕಿ ವಿಪರೀತ ರಕ್ತಸ್ರಾವಗೊಂಡ ಪರಿಣಾಮ ಮರದ ಮಿಲ್ ಕಾರ್ಮಿಕನೋರ್ವ ಮೃತಪಟ್ಟ ಘಟನೆ ಬಿ. ಕಸಬಾ ಗ್ರಾಮದ ಅಗ್ರಹಾರ ದರ್ಬೆ ಎಂಬಲ್ಲಿರುವ ಎಆರ್ ವುಡ್ ಇಂಡಸ್ಟ್ರಿಯಲ್ಲಿ ಸೋಮವಾರ ಸಂಭವಿಸಿದೆ.
ಮೃತ ಕಾರ್ಮಿಕನನ್ನು ಮಂಗಳೂರು ಅಳಪೆ ಗ್ರಾಮದ ಪಡೀಲ್-ಸರಸ್ವತಿ ನಗರ ನಿವಾಸಿ ಡೇನಿಯಲ್ ಡಿ’ಸೋಜ ಎಂದು ಗುರುತಿಸಲಾಗಿದೆ. ಹುಟ್ಟಿನಿಂದ ಮೂಗ ಹಾಗೂ ಕಿವುಡರಾಗಿದ್ದ ಇವರು ಕಳೆದ 10 ವರ್ಷಗಳಿಂದ ಬಂಟ್ವಾಳ ತದ ಅಗ್ರಹಾರ ದರ್ಬೆ ಎಂಬಲ್ಲಿರುವ ಎ ಆರ್ ವುಡ್ ಇಂಡಸ್ಟ್ರಿಯಲ್ಲಿ ಮರದ ಕೆಲಸ ಮಾಡಿಕೊಂಡಿದ್ದರು. ಪ್ರತಿ ದಿನ ಇವರು ಮನೆಯಿಂದಲೇ ಕೆಲಸಕ್ಕೆ ಹೋಗಿ ಬರುತ್ತಿದ್ದರು.
ಸೋಮವಾರ ಬೆಳಗ್ಗೆ 6 ಗಂಟೆಗೆ ಮನೆಯಿಂದ ಕೆಲಸಕ್ಕೆ ಹೋಗಿದ್ದು, ಎಂದಿನಂತೆ ಇವರು ಸಹಕಾರ್ಮಿಕರ ಜೊತೆ ಕೆಲಸಮಾಡುತ್ತಿರುವ ವೇಳೆ ಡೇನಿಯಲ್ ಡಿ’ಸೋಜಾ ಅವರು ಮರ ಸಿಗಿಸುವ ಯಂತ್ರದಲ್ಲಿ ಚಿಕ್ಕ ಮರದ ತುಂಡು ಸಿಲುಕಿರುವುದು ಕಂಡು ಅದನ್ನು ತನ್ನ ಕೈಯಿಂದತೆಗೆಯುತ್ತಿರುವಾಗ ಆಕಸ್ಮಿಕವಾಗಿ ಕಾಲುಜಾರಿ ತನ್ನ ಬಲ ಕೈ ಮರ ಸಿಗಿಸುವ ಯಂತ್ರಕ್ಕೆ ಸಿಕ್ಕಿ ತೀವ್ರ ರಕ್ತಸ್ರಾವಕ್ಕೊಳಗಾಗಿದ್ದಾರೆ. ತಕ್ಷಣ ಅವರನ್ನು ತುಂಬೆ ಆಸ್ಪತ್ರೆಗೆ ಸಾಗಿಸಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ ದಾರಿ ಮಧ್ಯೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಹೇಳಲಾಗಿದೆ.
ಈ ಬಗ್ಗೆ ಮೃತರ ಸಹೋದರ ರೊನಾಲ್ಡ್ ಡಿ’ಸೋಜ ಅವರು ನೀಡಿದ ದೂರಿನಂತೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.