
ನಿಗದಿತ ಸಮಯಕ್ಕಾಗದ ಕಡತವಿಲೇವಾರಿ: ಡಿ.ಸಿ.ಗೆ ದೂರು
ಬಂಟ್ವಾಳ: ಬಿ.ಸಿ.ರೋಡಿನ ಹೃದಯಭಾಗದಲ್ಲಿರುವ ಆಡಳಿತಸೌಧ ಎಂಬ ಕಟ್ಟಡಕ್ಕೆ ಬರುವ ಸಾರ್ವಜನಿಕರ ಕೆಲಸ ಕಾರ್ಯಗಳು, ಕಡತವಿಲೇವಾರಿ ನಿಗದಿತ ಸಮಯಗಳಲ್ಲಿ ನಡೆಯದೆ ವರ್ಷನುಗಟ್ಟಲೇ ಅಲೆದಾಡಬೇಕಾದ ಪರಿಸ್ಥಿತಿ ಉಂಟಾಗಿದ್ದು, ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಬಂಟ್ವಾಳ ತಾಲೂಕು ಕಚೇರಿಯಲ್ಲಿನ ಸಾರ್ವಜನಿಕರ ಬಾಕಿ ಕಡತಗಳನ್ನು ಶೀಘ್ರ ವಿಲೇವಾರಿಗೆ ಕ್ರಮಕೈಗೊಳ್ಳುವಂತೆ ಸಾರ್ವಜನಿಕವಲಯದಿಂದ ಆಗ್ರಹ ಕೇಳಿಬಂದಿದೆ.
ಬಂಟ್ವಾಳ ತಾಲೂಕು ಕಚೇರಿಯಲ್ಲಿ ಬ್ರೋಕರ್ಗಳ ಹಾವಳಿ ಮಿತಿಮೀರಿದ್ದು, ಸಾರ್ವಜನಿಕರ ಕೆಲಸ, ಕಾರ್ಯಗಳು ಸಮಯಕ್ಕೆ ಸರಿಯಾಗಿ ಪರಿಹಾರ ಆಗದೇ ತಿಂಗಳು, ವರ್ಷಗಟ್ಟಲೇ ಕಾಯಬೇಕಾಗುತ್ತಿದೆ ಎಂದು ನೊಂದ ಜನಸಾಮಾನ್ಯರು ತಮ್ಮ ಆಳಲನ್ನು ಸಾರ್ವಜನಿಕ ಸ್ಥಳಗಳಲ್ಲಿ ತೋಡಿಕೊಳ್ಳುತ್ತಿರುವುದು ಕಂಡು ಬಂದಿದೆ.
ದರ್ಖಾಸು ಜಮೀನು ಸೇರಿದಂತೆ ಪ್ಲೋಟಿಂಗ್ ಆಗದ ಜಮೀನಿಗೆ ಸಂಬಂಧಿಸಿದಂತೆ ಸಾರ್ವಜನಿಕರು 1-5ಗೆ ಅರ್ಜಿ ಕೊಟ್ಟು 5-6 ವರ್ಷಗಳೂ ಕಳೆದರೂ ಕಡತಗಳಿಗೆ ಇನ್ನು ಮುಕ್ತಿ ಸಿಗುತ್ತಿಲ್ಲ ಎಂದು ಆರೋಪಿಸಲಾಗಿದೆ.
1-5 ಪ್ಲೋಟಿಂಗ್ ಸಂಬಂಧಿಸಿದಂತೆ ಕಡತಗಳು ಬಂಟ್ವಾಳ ತಾಲೂಕು ತಹಸೀಲ್ದಾರರಿಂದ ಮಂಗಳೂರು ಸಹಾಯಕ ಆಯುಕ್ತರ ಕಚೇರಿಗೆ 10-20 ಬಾರಿ ಅಲೆದಾಡುತ್ತಿದ್ದು, ಅಧಿಕಾರಿಗಳು ಮಾತ್ರ ಕಡತಗಳಿಗೆ ಮುಕ್ತಿ ನೀಡದಿರುವುದು ಸಾರ್ವಜನಿಕ ವಲಯದಲ್ಲಿ ಅಧಿಕಾರಿಗಳ ಕಾರ್ಯವೈಖರಿಗೆ ಆಕ್ರೋಶ ವ್ಯಕ್ತವಾಗಿದೆ. ಕಡತ ಪರಿಪೂರ್ಣತೆಗೆ ಬೇಕಾದ ದಾಖಲೆಗಳನ್ನು ಕಂದಾಯ ಇಲಾಖಾಧಿಕಾರಿಗಳು ಜೋಡಿಸಬೇಕಾಗಿದ್ದು, ಈ ವಿಚಾರದಲ್ಲಿ ಇಲ್ಲಿನ ಅಧಿಕಾರಿಗಳು ಅರ್ಜಿದಾರರನ್ನು ಸತಾಯಿಸುತ್ತಿದ್ದಾರೆಂದು ದೂರಲಾಗಿದೆ. ಕೆಲವು ಅರ್ಜಿದಾರರು ಪ್ಲೋಟಿಂಗ್ ಸಮಸ್ಯೆಯ ಕುರಿತಂತೆ ತಹಶೀಲ್ದಾರರನ್ನು ಖುದ್ದು ಭೇಟಿಯಾಗಿ ಸಮಸ್ಯೆ ಹೇಳಿಕೊಂಡರೂ ಅವರಿಂದ ಸಕರಾತ್ಮಕ ಸ್ಪಂದನೆ ಸಿಗುತ್ತಿಲ್ಲ ಎಂದು ಅಲೆದು ಸುಸ್ತಾದ ನೊಂದ ಅರ್ಜಿದಾರರು ಆರೋಪಿಸಿದ್ದಾರೆ.
ಈ ಬಗ್ಗೆ ಕೆಲ ಅರ್ಜಿದಾರರು ಮಂಗಳೂರು ಸಹಾಯಕ ಆಯುಕ್ತರ ಗಮನಕ್ಕೆ ತಂದರೂ ಕೂಡ ಕಡತಕ್ಕೆ ಇನ್ನೂ ಕೂಡ ಪರಿಪೂರ್ಣತೆ ಸಿಗುತ್ತಿಲ್ಲ ಎಂದು ದೂರಲಾಗಿದೆ.
ಬಂಟ್ವಾಳ ತಾಲೂಕಿನಲ್ಲಿ 1-5 ಪ್ಲೋಟಿಂಗ್, ನಿರಪೇಕ್ಷಣಾ ಪತ್ರ ನೀಡಿಕೆ, ಭೂ ಪರಿವರ್ತನೆ ಸಮಸ್ಯೆ, ಪಡಿತರ ಚೀಟಿಗೆ ಹೆಸರು ಸೇರ್ಪಡೆ, ಸರ್ವರ್ ಸಮಸ್ಯೆಯಿಂದಾಗಿ ಜನಸಾಮಾನ್ಯರ ಕೆಲಸ ಕಾರ್ಯಗಳು ನಿಗದಿತ ಸಮಯಕ್ಕೆ ಆಗುತ್ತಿಲ್ಲ ಎಂದು ಸಾರ್ವಜನಿಕ ವಲಯದಿಂದ ದೂರುಗಳು ಕೇಳಿಬಂದಿದೆ.
ಈ ಹಿನ್ನಲೆಯಲ್ಲಿ ಮಾಜಿ ತಾ.ಪಂ. ಸದಸ್ಯ ಪ್ರಭಾಕರ ಪ್ರಭು ಅವರು ಬಂಟ್ವಾಳ ತಾಲೂಕು ಕಚೇರಿಗೆ ಭೇಟಿ ನೀಡಿ ಸಾರ್ವಜನಿಕರ ಬಾಕಿ ಉಳಿದಿರುವ ದಿನನಿತ್ಯದ ಕೆಲಸ ಕಾರ್ಯಗಳ ಕಡತಗಳನ್ನು ವಿಲೇವಾರಿಗೆ ಕ್ರಮಕೈಗೊಳ್ಳಲು ಜಿಲ್ಲಾಧಿಕಾರಿಯವರನ್ನು ಪತ್ರದ ಮೂಲಕ ಒತ್ತಾಯಿಸಿದ್ದಾರೆ.
ಬಂಟ್ವಾಳ ತಾಲೂಕಿನಲ್ಲಿ ಪ್ರಗತಿಯಲ್ಲಿರುವ ಸೇತುವೆ, ರಸ್ತೆ ಕಾಮಗಾರಿಗಳನ್ನು ಪರಿಶೀಲನೆ ಮಾಡುವ ಜಿಲ್ಲಾಧಿಕಾರಿಗಳು ಜನಸಾಮಾನ್ಯರ ಅತೀ ಅಗತ್ಯದ ಕೆಲಸ, ಕಾರ್ಯಗಳ ಕಡತಗಳನ್ನು ಅಷ್ಟೇ ತ್ವರಿತವಾಗಿ ವಿಲೇವಾರಿ ಮಾಡುವ ನಿಟ್ಟಿನಲ್ಲಿ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸುವಂತೆ ಅವರು ಪತ್ರದಲ್ಲಿ ಒತ್ತಾಯಿಸಿದ್ದಾರೆ.