
ಲೆಕ್ಕಕ್ಕಿಂತ ಅಧಿಕ ಜಲ್ಲಿ ಸಾಗಾಟ ಲಾರಿ ತಡೆದು ಸಾರ್ವಜನಿಕರ ಪ್ರತಿಭಟನೆ: ಪೊಲೀಸರು, ಆರ್ಟಿಒ ವಿರುದ್ಧ ಆಕ್ರೋಶ
ಬಂಟ್ವಾಳ: ನಿಯಮಬಾಹಿರವಾಗಿ ಅಧಿಕ ಜಲ್ಲಿ ಕಲ್ಲು ಹೇರಿಕೊಂಡು ಹಾಗೂ ಅಕ್ರಮ ಮರಳು ಸಾಗಾಟದ ಟಿಪ್ಪರ್ ಅತೀವೇಗ ಮತ್ತು ಅಜಾಗರೂಕತೆಯಿಂದ ಸಂಚರಿಸುತ್ತಿರುವುದನ್ನು ಸಾರ್ವಜನಿಕರು ತಡೆದು ಹಠಾತ್ ಪ್ರತಿಭಟನೆ ನಡೆಸಿದ ಪ್ರಸಂಗ ಶುಕ್ರವಾರ ಸಂಜೆ ಬಂಟ್ವಾಳಕ್ಕೆ ಸಮೀಪದ ನಾವೂರಿನ ಪಾಂಗೋಡಿ ಎಂಬಲ್ಲಿ ನಡೆದಿದೆ.
ಈ ಟಿಪ್ಪರ್ಗಳ ಅತೀವೇಗದ ಚಾಲನೆಯಿಂದ ಸಾರ್ವಜನಿಕರು ಜೀವ ಭಯದಿಂದಲೇ ಇರಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು. ಸುದ್ದಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ಬಂಟ್ವಾಳ ಪೊಲೀಸರು ಹಾಗೂ ಆರ್ಟಿಓ ಅಧಿಕಾರಿಗಳನ್ನು ಕೂಡ ಪ್ರತಿಭಟನಾಕಾರರು ತರಾಟೆಗೆ ತೆಗೆದುಕೊಂಡರು.
ಅಕ್ರಮವಾಗಿ ಟಿಪ್ಪರ್ಗಳು ಮರಳು ಮತ್ತು ಜಲ್ಲಿಯನ್ನು ಲೆಕ್ಕಕ್ಕಿಂತ ಅಧಿಕವಾಗಿ ಹೇರಿಕೊಂಡು ಅತಿವೇಗ ಸಂಚರಿಸಿ ಅಪಾಯಕಾರಿಯಾಗಿ ಸಂಚರಿಸುವ ಬಗ್ಗೆ ಸಾಕಷ್ಟು ದೂರು ನೀಡಿದರೂ ಪೊಲೀಸ್ ಹಾಗೂ ಆರ್ಟಿಒ ಅಧಿಕಾರಿಗಳು ಸ್ಪಂದಿಸದ ಹಿನ್ನಲೆಯಲ್ಲಿ ಸಾರ್ವಜನಿಕರು ಹಠಾತ್ ಪ್ರತಿಭಟನೆ ನಡೆಸಿ ಇಲಾಖೆಯ ಕಣ್ತೆರೆದರಲ್ಲದೆ ತಮ್ಮ ಆಕ್ರೋಶ, ಅಸಮಾಧಾನವನ್ನು ವ್ಯಕ್ತಪಡಿಸಿದರು.
ಕಿರಿದಾದ ರಸ್ತೆಯಲ್ಲಿ ಟಿಪ್ಪರ್ಗಳ ಓವರ್ ಲೋಡ್ ಜಲ್ಲಿ ತುಂಬಿಸಿ ಅತೀವೇಗ ಹಾಗೂ ಅಜಾಗರುಕತೆಯ ಚಾಲನೆಯಿಂದ ಜೀವ ಭಯ ಕಾಡುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದರು.
ಘನಗಾತ್ರದ ಲಾರಿಯೊಂದು ಅಧಿಕ ಜಲ್ಲಿ ತುಂಬಿಸಿ ಸಂಚರಿಸುವ ಭರದಲ್ಲಿ ಅದರ ಟಯರ್ ಪಂಕ್ಚರ್ ಆಗಿ ರಸ್ತೆ ಬದಿಯಲ್ಲಿ ಇದ್ದವರಿಗೆ ಢಿಕ್ಕಿ ಹೊಡೆದು ಅಪಾಯವುಂಟಾಗುವ ಸಾಧ್ಯತೆಯಿತ್ತು. ಇದರಿಂದ ಕೆರಳಿದ ಸಾರ್ವಜನಿಕರು ಜಮಾಯಿಸಿ ಪ್ರತಿಭಟನೆ ನಡೆಸಿ ಅಧಿಕಾರಿಗಳ ಸಮ್ಮುಖದಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಸಾರ್ವಜನಿಕರು ತಡೆ ಹಿಡಿದ ಲಾರಿಯಲ್ಲಿ ಲೆಕ್ಕಕ್ಕಿಂತಲು ಅಧಿಕ ಪ್ರಮಾಣದಲ್ಲಿ ಜಲ್ಲಿ ಲೋಡ್ ಮಾಡಲಾಗಿದ್ದು, ಪರಿಣಾಮ ರಸ್ತೆಯು ಕೆಟ್ಟುಹೋಗುವ ಸಾಧ್ಯತೆಗಳಿದೆಯಲ್ಲದೆ ಈ ಅಕ್ರಮ ಜಲ್ಲಿ ಸಾಗಾಟದ ಲಾರಿಗಳು ಇತರ ವಾಹನಗಳಿಗೆ ಸೈಡ್ ನೀಡದೆ ತೊಂದರೆ ನೀಡುತ್ರಿರುವ ಬಗ್ಗೆಯು ಪ್ರತಿಭಟನಾಕಾರರು ಪೊಲೀಸರ ಗಮನಸೆಳೆದರು.
ಬಳಿಕ ಪೊಲೀಸರು ಕ್ರಮಕೈಗೊಳ್ಳುವ ಭರವಸೆ ನೀಡಿದ ಹಿನ್ನಲೆಯಲ್ಲಿ ಸಾರ್ವಜನಿಕರು ಪ್ರತಿಭಟನೆಯನ್ನು ವಾಪಾಸ್ ಪಡೆದರು.