
ಶಂಭೂರು ನೇಮೋತ್ಸವಕ್ಕೆ ಹೈಕೋಟ್೯ ಆಸ್ತು: ವಿಜೃಂಬಣೆಯಿಂದ ನಡೆದ ಮೊದಲದಿನದ ನೇಮ
ಬಂಟ್ವಾಳ: ವಿವಾದದಿಂದ ಸ್ಥಗಿತಗೊಂಡಿದ್ದ ಬಂಟ್ವಾಳ ತಾಲೂಕಿನ ಶಂಬೂರು ಗ್ರಾಮದ, ಅಡೆಪಿಲ ಅಲಂಗಾರ ಮಾಡ ಕಲ್ಲಮಳಿಗೆ, ದಿಂಡಿಗ್ಕೆರೆ ಜೋಡುಸ್ಥಾನ ವಾರ್ಷಿಕ ನೇಮೋತ್ಸವವು ರಾಜ್ಯ ಹೈಕೋರ್ಟ್ ಆದೇಶದನ್ವಯ ಗುರುವಾರ ಭಕ್ತಸಮೂಹದ ನಡುವೆ ವಿಜೃಂಬಣೆಯಿಂದ ನಡೆಯಿತು.
ಗ್ರಾಮದ ಸಮಿತಿಗಳ ಗೊಂದಲ, ರಾಜಕೀಯ ಹಸ್ಥಕ್ಷೇಪದಿಂದಾಗಿ ಕಾಲಾವಧಿ ನೇಮೋತ್ಸವವು ಸ್ಥಗಿತಗೊಂಡ ಹಿನ್ನಲೆಯಲ್ಲಿ ರಾಜ್ಯ ಹೈಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಸಲಾಗಿತ್ತು.
ಗ್ರಾಮ ಸಮಿತಿ, ಶ್ರೀ ಅರಸು ವೈದ್ಯನಾಥ ಜುಮಾದಿ ಬಂಟ ದೈವಗಳ ಆರಾಧನಾ ಸಮಿತಿಯ ಅಧ್ಯಕ್ಷ ನವೀನ್ ಕೋಟ್ಯಾನ್, ಅಲಂಗರಮಾಡ ಶ್ರೀಕಲ್ಲಮಳಿಗೆ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗಣೇಶ್ ಪ್ರಸಾದ್, ಅಡೆಪಿಲ ಭಂಡಾರದ ಮನೆ ಟ್ರಸ್ಟ್ ಅಧ್ಯಕ್ಷ ಮೀನ ಭಗವಾನ್ ದಾಸ್ ಮತ್ತು ಜೋಡುಸ್ಥಾನ ಮುಖ್ಯಸ್ಥ ಎನ್. ಸೀತಾರಾಮ್ ಅವರುಗಳು ಜಂಟಿಯಾಗಿ ಸಲ್ಲಿಸಿದ ರಿಟ್ ಅರ್ಜಿಯನ್ನು ಪುರಸ್ಕರಿಸಿದ ರಾಜ್ಯ ಹೈಕೋಟ್೯ ಸಂಬಂಧಿಸಿದ ಇಲಾಖೆ ಮತ್ತು ಪೊಲೀಸ್ ಮುಖ್ಯಸ್ಥರಿಗೆ ನಿರ್ದೇಶನ ನೀಡಿದ್ದು, ಯಾವುದೇ ಅಡ್ಡಿಯಾಗದಂತೆ ಉತ್ಸವ ನಡೆಸುವಂತೆ ಆದೇಶಿಸಿತ್ತು.
ನ್ಯಾಯಾಲಯದ ಆದೇಶದನ್ವಯ ಗ್ರಾಮಸ್ಥರು, ಸಮಿತಿ ಪದಾಧಿಕಾರಿಗಳು, ಭಕ್ತ ಸಮೂಹ ಗುರುವಾರ ರಾತ್ರಿ ಮೊದಲ ದಿನದ ಶ್ರೀಧರ್ಮರಸು ದೈವದ ನೇಮವನ್ನು ಅಲಂಗಾರ ಮಾಡ ಶ್ರೀ ಕಲ್ಲಮಳಿಗೆ ಬರ್ಕೆ ವಲಸರಿಯನ್ನು ನಡೆಸಿದರು.
ಜೋಗದ ಬಲಿಯ ನಂತರ ಜನರು ಹರಿಕೆ ಸಲ್ಲಿಸಿದರು. ರಾಜ್ಯ ಧಾರ್ಮಿಕ ಪರಿಷತ್ತಿನ ಸದಸ್ಯ ರವಿಶಂಕರ್ ಶೆಟ್ಟಿ ಬಡಾಜೆ, ಜಿಲ್ಲಾ ಧಾರ್ಮಿಕ ಪರಿಷತ್ತ್ ಸದಸ್ಯ ಜಗನ್ನಾಥ ಚೌಟ, ಆರ್ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್, ತಾ.ಪಂ. ಮಾಜಿ ಉಪಾಧ್ಯಕ್ಷ ಆನಂದ ಎ. ಶಂಭೂರು ನೇಮೋತ್ಸವದಲ್ಲಿ ಹಾಜರಿದ್ದು ಸಾಕ್ಷಿಗಳಾದರು.
ಗ್ರಾಮ ಉತ್ಸವ ಸಮಿತಿಯ ಉಪಾಧ್ಯಕ್ಷ ರಾಜೇಶ್, ನರಿಕೊಂಬು ಗ್ರಾ.ಪಂ. ಅಧ್ಯಕ್ಷರು, ಸಮಿತಿಯ ಕಾರ್ಯದರ್ಶಿ ಸಂತೋಷ್ ಕುಮಾರ್, ಕೋಶಾಧಿಕಾರಿ ಕೀರ್ತನ್ ಪಿ, ಕೇಶವ ಬರ್ಕೆ, ರಾಮಚಂದ್ರ, ಯೋಗೀಶ್ ಸ್ಥಾನದ ಮನೆ, ಅಡೆಪಿಲ ಭಂಡಾರದ ಮನೆಯ ಕಾರ್ಯದರ್ಶಿ ನವೀನ್ ಬಪ್ಪಳಿಗೆ ಮತ್ತಿತರರು ಉಪಸ್ಥಿತರಿದ್ದರು.