
ಶಾಸಕ ರೈ ಹೇಳಿಕೆಗೆ ಖಂಡನೆ
ಬಂಟ್ವಾಳ: ವಕ್ಪ್ ತಿದ್ದುಪಡಿ ಮಸೂದೆ ಕರ್ನಾಟಕ ರಾಜ್ಯದಲ್ಲಿ ಜಾರಿ ಮಾಡಲಾಗುತ್ತಿಲ್ಲ ಹಾಗೂ ವಿಧಾನಸಭೆಯಲ್ಲಿ ಈ ಬಿಲ್ ಜಾರಿಯಾಗದಂತೆ ಬಿಲ್ ಪಾಸ್ ಮಾಡುವುದಾಗಿ ಬಿಡಲು ಪುತ್ತೂರು ಶಾಸಕರಾದ ಅಶೋಕ್ ಕುಮಾರ್ ರೈ ಅವರು ನೀಡಿರುವ ಹೇಳಿಕೆಯನ್ನು ಬಿಜೆಪಿ ಬಂಟ್ವಾಳ ಮಂಡಲದ ಕಾರ್ಯದರ್ಶಿ ಪ್ರಭಾಕರ ಪ್ರಭು ಖಂಡಿಸಿದ್ದಾರೆ.
ಭಾರತೀಯ ಬಹುಸಂಖ್ಯಾತ ಜನರ ಬಹುನಿರೀಕ್ಷೆಯ ವಕ್ಪ್ ತಿದ್ದುಪಡಿ ಮುಸೂದೆ 2025 ಲೋಕಸಭೆ ಮತ್ತು ರಾಜ್ಯ ಸಭೆಗಳೆರಡರಲ್ಲೂ ಬಹುಮತದೊಂದಿಗೆ ಅಂಗೀಕಾರಗೊಂಡು ರಾಷ್ಟ್ರಪತಿಯವರಿಂದಲು ಅಂಕಿತವಾಗಿ ದೇಶದಲ್ಲಿ ಮಸೂದೆಯಾಗಿ ಜಾರಿಯಾಗಿರುವುದನ್ನು ಭಾರತೀಯ ಬಹುತೇಕ ಜನರು ಮಾತ್ರವಲ್ಲ ಮುಸ್ಲಿಂ ಸಂಘಟನೆಗಳು ಕೂಡ ಸ್ವಾಗತಿಸಿದ್ದಾರೆಂದು ಮಾಧ್ಯಮ ಹಾಗೂ ಪತ್ರಿಕೆಗಳಲ್ಲು ವರದಿಯಾಗಿದೆ ಎಂದು ಪ್ರಭು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ಮಸೂದೆಯನ್ನು ಕರ್ನಾಟಕದಲ್ಲಿ ಜಾರಿ ಮಾಡಲಾಗುವುದಿಲ್ಲ ಹಾಗೂ ಜಾರಿ ಮಾಡದಂತೆ ವಿಧಾನ ಸಭೆಯಲ್ಲಿ ಬಿಲ್ ಪಾಸ್ ಮಾಡುತ್ತೇವೆ ಎಂದು ಹೇಳಿಕೆಗಳನ್ನು ನೀಡುತ್ತಿರುವ ಪುತ್ತೂರು ಶಾಸಕ ಆಶೋಕ್ ಕುಮಾರ್ ರೈ ಅವರು ಕರ್ನಾಟಕದಲ್ಲಿ ಒಂದು ಧರ್ಮಕ್ಕೆ ಸೇರಿದ ವರ್ಗಕ್ಕೆ ಸರಕಾರಿ ಕಾಮಗಾರಿಗಳ ಗುತ್ತಿಗೆಗಳಲ್ಲಿ ಶೇ.4 ರಷ್ಟು ಮೀಸಲಿಡುವ ಕಾಯಿದೆ ವಿಧಾನ ಸಭೆಯಲ್ಲಿ ಮಂಡಿಸಿದಾಗ ಯಾಕೆ ವಿರೋಧ ಮಾಡಲಿಲ್ಲ ಎಂದು ಪ್ರಭು ಹೇಳಿಕೆಯ ಮೂಲಕ ಪ್ರಶ್ನಿಸಿದ್ದಾರೆ.