ಒಳಚರಂಡಿ ಘಟಕಕ್ಕೆ ಎಳ್ಳುನೀರು..!: ಉದ್ಯಮಿ ಪರ ‘ಬಿಜೆಪಿ-ಕಾಂಗ್ರೇಸ್’ ದುಷ್ಟಕೂಟ-ನಗರ ಕಾಂಗ್ರೇಸ್ ಅಧ್ಯಕ್ಷ ಆರೋಪ

ಒಳಚರಂಡಿ ಘಟಕಕ್ಕೆ ಎಳ್ಳುನೀರು..!: ಉದ್ಯಮಿ ಪರ ‘ಬಿಜೆಪಿ-ಕಾಂಗ್ರೇಸ್’ ದುಷ್ಟಕೂಟ-ನಗರ ಕಾಂಗ್ರೇಸ್ ಅಧ್ಯಕ್ಷ ಆರೋಪ

ಪುತ್ತೂರು: ಪುತ್ತೂರು ನಗರಕ್ಕೆ ಅತ್ಯಂತ ಅವಶ್ಯಕವಾಗಿರುವ ಒಳಚರಂಡಿ ಯೋಜನೆ (ಯುಜಿಡಿ)ಯನ್ನು ಒಬ್ಬ ರಿಯಲ್ ಎಸ್ಟೇಟ್ ಉದ್ಯಮಿಯ ಹಿತ ಕಾಯುವುದಕ್ಕೆ ಬಲಿಕೊಡಲಾಗುತ್ತಿದೆ. ಈ ದೊಡ್ಡ ಯೋಜನೆಯನ್ನು ಬದಿಗೆ ಸರಿಸುವ ಮೂಲಕ ನಗರವನ್ನು ಬಲಿಪಶು ಮಾಡುವ ಸಂಚು ನಡೆಸಲಾಗುತ್ತಿದೆ. ಬಿಜೆಪಿ ಮತ್ತು ಕಾಂಗ್ರೇಸ್ ನ ಕೆಲ ದುಷ್ಟಕೂಟಗಳು ಇದರ ಹಿಂದೆ ಕೆಲಸ ಮಾಡುತ್ತಿವೆ ಎಂದು ನಗರ ಕಾಂಗ್ರೇಸ್ ಅಧ್ಯಕ್ಷ ಎಚ್.ಮಹಮ್ಮದ್ ಆಲಿ ಗಂಭೀರ ಆರೋಪ ಮಾಡಿದ್ದಾರೆ. 

ಅವರು ಶುಕ್ರವಾರ ಪುತ್ತೂರು ಪ್ರೆಸ್ ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ನಗರದ ದೊಡ್ಡ ಸಮಸ್ಯೆ ಅಸರ್ಮಪಕ ತ್ಯಾಜ್ಯ ನೀರಿನ ನಿರ್ವಹಣೆ. ಇದಕ್ಕೆ ಶಾಶ್ವತ ಪರಿಹಾರದ ಹಿನ್ನಲೆಯಲ್ಲಿ ಚಿಕ್ಕಮುಡ್ನೂರು ಗ್ರಾಮದ ನೆಕ್ಕರೆ ಎಂಬಲ್ಲಿ ಒಳಚರಂಡಿ ಘಟಕ ನಿರ್ಮಾಣಕ್ಕೆ 5.50 ಎಕರೆ ಸ್ಥಳವನ್ನು ಕಾಯ್ದಿರಿಸಲಾಗಿದೆ. ಕೆಯುಡಬ್ಲುಎಸ್ ಇಲಾಖೆಯ ಮೂಲಕ ಸರ್ವೆ ಕೂಡಾ ನಡೆಸಲಾಗಿತ್ತು. ಆದರೆ ಹಿಂದಿನ ಜಿಲ್ಲಾಧಿಕಾರಿ ಹಾಗೂ ಪೌರಾಯುಕ್ತರ ನಿರ್ಲಕ್ಷ್ಯದಿಂದ ಮಂಜೂರುಗೊಂಡ ಈ ಯೋಜನೆ ವಿಫಲವಾಯಿತು. ಇದೀಗ ಕೇಂದ್ರ ಸರ್ಕಾರದ ಸ್ವಚ್ಛಭಾರತ್ ಮಿಷನ್ ಯೋಜನೆಯಡಿ ಈ ಯೋಜನೆಗೆ ರೂ.೧೯ ಕೋಟಿ ಬಿಡುಗಡೆಯಾಗಿದೆ. ಆದರೆ ಈ ಜಾಗದ ಪಕ್ಕದಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರು ಲೇಔಟ್ ನಿರ್ಮಾಣಕ್ಕೆ ಮುಂದಾಗಿದ್ದು, ಈ ಘಟಕದ ಸ್ಥಳವನ್ನೂ ಅತಿಕ್ರಮಣ ಮಾಡಿದ್ದಾರೆ. ಇಲ್ಲಿಗೆ ಬರುವ ರಸ್ತೆಯನ್ನೂ ಮುಚ್ಚಿದ್ದಾರೆ. ಈ ಬಗ್ಗೆ ನಗರಸಭೆಯ ಪೌರಾಯುಕ್ತರು ಪೊಲೀಸರಿಗೆ ದೂರನ್ನೂ ನೀಡಿದ್ದಾರೆ. ಆದರೂ ರಸ್ತೆ ತೆರವು ಹಾಗೂ ಅತಿಕ್ರಮಣವನ್ನು ತೆರವು ಮಾಡುವಲ್ಲಿ ನಗರಸಭೆ ಮುಂದಾಗದೆ ಹಿಂದೇಟು ಹಾಕುತ್ತಿದೆ. ಬಿಜೆಪಿ ಮತ್ತು ಕಾಂಗ್ರೇಸಿನ ಕೆಲ ದುಷ್ಟಕೂಟ ಉದ್ಯಮಿಗೆ ಬೆಂಬಲ ನೀಡಿರುವುದೇ ಇದಕ್ಕೆ ಕಾರಣ ಎಂದು ಅವರು ಆರೋಪಿಸಿದರು. 

ರದ್ದು ಪಡಿಸುವ ಹುನ್ನಾರ..!:

ಇಲ್ಲಿ ಒಳಚರಂಡಿ ತ್ಯಾಜ್ಯ ಘಟಕ ಸ್ಥಾಪನೆಯಾದಲ್ಲಿ ತನ್ನ ಲೇಔಟ್ ಬಡಾವಣೆಗೆ ಖರೀದಿದಾರರು ಬರುವುದಿಲ್ಲ ಎಂಬ ಕಾರಣಕ್ಕೆ ಒಳಚರಂಡಿ ಘಟಕವನ್ನು ರದ್ದುಪಡಿಸುವ ಹುನ್ನಾರ ನಡೆಸಲಾಗುತ್ತಿದೆ. ಅಲ್ಲದೆ ಸುಮಾರು 40 ವರ್ಷಗಳಿಂದ ಇಲ್ಲಿರುವ ನಗರಸಭಾ ರಸ್ತೆಯನ್ನು ಮಣ್ಣು ಹಾಕಿ ಮುಚ್ಚಿ ಅಲ್ಲಿ ಅವರಣ ಗೋಡೆ ರಚನೆ ಮಾಡಲಾಗಿದೆ. ಈ ಬಗ್ಗೆ ಸಾರ್ವಜನಿಕರು ದೂರು ನೀಡಿದ್ದರೂ ನಗರಸಭೆಯ ವತಿಯಿಂದ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ. ಇಲ್ಲಿಗೆ ಪರಿಶೀಲನೆಗೆ ತೆರಳಿದ ನಗರಸಭಾ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪದಲ್ಲಿ ಉದ್ಯಮಿ ವಿರುದ್ದ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಕೇಸು ದಾಖಲಾಗಿದೆ. ಆದಾಗ್ಯೂ ಈ ಉದ್ಯಮಿಯು ಸ್ಥಳೀಯ ವ್ಯಕ್ತಿಯೋರ್ವರ ಹೆಸರಿನಲ್ಲಿ ರಾಜ್ಯ ಉಚ್ಚ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿರುತ್ತಾರೆ. ಬಡವಾಣೆ ನಿರ್ಮಾಣಕ್ಕಾಗಿ ಈತ ನಗರ ಯೋಜನಾ ಪ್ರಾಧಿಕಾರಕ್ಕೆ ನೀಡಿರುವ ಅರ್ಜಿಯು ಅನುಮೋದನೆಗಾಗಿ ಪುಡಾ ಕಚೇರಿಯಲ್ಲಿದೆ. ಕಾಂಗ್ರೆಸ್ ಮತ್ತು ಬಿಜೆಪಿಯ ಕೆಲವರು ರಿಯಲ್ ಎಸ್ಟೇಟ್ ಉದ್ಯಮಿಯ ಜತೆಗೆ ಸೇರಿಕೊಂಡು ಪುತ್ತೂರಿನ ಒಳಚರಂಡಿ ಘಟಕವನ್ನೇ ಇಲ್ಲದಂತೆ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಅವರು ಹೇಳಿದರು. 

ಸ್ವಪಕ್ಷೀಯರಿಗೆ ತರಾಟೆ:

ಈ ಉದ್ಯಮಿ ಬಿಜೆಪಿ ಕಾರ್ಯಕರ್ತ. ಹಾಗಾಗಿ ಬಿಜೆಪಿಆಡಳಿತವಿರುವ ನಗರಸಭೆ ಈತನ ವಿರುದ್ಧ ಕ್ರಮಕೈಗೊಳ್ಳಲು ಮುಂದಾಗುತ್ತಿಲ್ಲ. ಕಾನೂನು ಬಾಹಿರವಾಗಿರುವ ಉದ್ಯಮಿಯ ಕೃತ್ಯಕ್ಕೆ ಕಾಂಗ್ರೇಸಿನ ದುಷ್ಟಕೂಟವೂ ಬೆಂಬಲಿಸುತ್ತಿದೆ. ಭ್ರಷ್ಟಾಚಾರದ ವಿರುದ್ದ ನಿಲ್ಲಬೇಕಾಗಿದ್ದ ಕಾಂಗ್ರೇಸಿಗರು ಈತನ ಬೆಂಬಲಕ್ಕೆ ನಿಲ್ಲುವ ಮೂಲಕ ಪಕ್ಷದ ವರ್ಚಸ್ಸಿಗೆ ಧಕ್ಕೆ ತರುವ ಕೆಲಸ ಮಾಡುತ್ತಿದ್ದಾರೆ ಎಂದು ಸ್ವಪಕ್ಷೀಯರನ್ನೂ ಮಹಮ್ಮದ್ ಆಲಿ ತರಾಟೆಗೆ ತೆಗೆದುಕೊಂಡರು.

ನಗರಸಭಾ ಸದಸ್ಯ ಮಹಮ್ಮದ್ ರಿಯಾಝ್, ಕಾಂಗ್ರೆಸ್ ಮುಖಂಡರಾದ ಆಲಿಕುಂಞಿ ಕೊರಿಂಗಿಲ, ಸೈಮನ್ ಗೋನ್ಸಾಲ್ವಿಸ್, ರಾಮಣ್ಣ ನಾಯ್ಕ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article