
‘ವಕ್ಫ್ ಕಾಯ್ದೆ’ ಶಾಸಕರ ಹೇಳಿಕೆ ಖಂಡನೀಯ: ಜಿಲ್ಲಾ ಬಿಜೆಪಿ
ಪುತ್ತೂರು: ರಾಷ್ಟ್ರಪತಿಯವರಿಂದಲೂ ಅಂಕಿತಗೊಂಡು ಪೂರ್ಣ ಪ್ರಮಾಣದ ಕಾಯ್ದೆಯಾಗಿ ರೂಪುಗೊಂಡು ಜಾರಿಯಾಗುತ್ತಿರುವ ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಕಾಂಗ್ರೇಸ್ ಹಿಂಬಾಗಿಲಿನಿಂದ ನೀಡುತ್ತಿರುವ ಕುಮ್ಮಕ್ಕಿನಿಂದ ಅಲ್ಲಲ್ಲಿ ಪ್ರತಿಭಟನೆ ನಡೆಸಿ ನ್ಯಾಯಾಲಯದ ಮೇಲೆ ಪ್ರಭಾವ ಬೀರುವ ಹುನ್ನಾರ ನಡೆಸುತ್ತಿದೆ. ಪುತ್ತೂರಿನ ಶಾಸಕರು ಮುಸಲ್ಮಾನರನ್ನು ಓಲೈಸುವ ದೃಷ್ಟಿಯಿಂದ ಈ ಕಾಯ್ದೆಯನ್ನು ರಾಜ್ಯದಲ್ಲಿ ಜಾರಿಗೊಳಿಸಲು ಬಿಡುವುದಿಲ್ಲ ಎಂಬ ಹೇಳಿಕೆ ನೀಡಿರುವುದು ಖಂಡನೀಯ ಎಂದು ದ.ಕ.ಜಿಲ್ಲಾ ಬಿಜೆಪಿ ವಕ್ತಾರ ಅರುಣ್ ಜಿ. ಶೇಟ್ ತಿಳಿಸಿದ್ದಾರೆ.
ಸಂಸತ್ತಿನ ಜಂಟಿ ಸಮಿತಿಯಲ್ಲಿ, ಸದನದಲ್ಲಿ ಸುದೀರ್ಘ ಚರ್ಚೆಯಾಗಿ ಬಹುಮತದಿಂದ ಪಾಸಾಗಿರುವ ಕಾಯ್ದೆ ಇದಾಗಿದೆ. ಮುಸಲ್ಮಾನರ ತುಷ್ಠೀಕರಣದ ಮೂಲಕ ಓಟ್ ಬ್ಯಾಂಕ್ ನ್ನಾಗಿ ಮಾಡಿ ಮುಗ್ಗ ಬಡ ಮುಸ್ಲಿಮರ ತಲೆ ಕೆಡಿಸಲು ಹೊರಟಿದ್ದಾರೆ. ಅವರಿಗೆ ಬಡ ಮುಸ್ಲಿಮರ ಏಳಿಗೆ ಬೇಕಾಗಿಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತಿದೆ. ಕೇಸರಿ ಶಾಲನ್ನು ಹೆಗಲ ಮೇಲೆ ಹಾಕಿಕೊಂಡು ತಾನು ಹಿಂದೂವಾದಿ ಎಂದು ಬೀಗುತ್ತಿರುವ ಪುತ್ತೂರಿನ ಶಾಸಕರ ನಕಲಿ ಮುಖವಾಡ ಕಳಚಿ ಬಿದ್ದಿದೆ. ದೇವಸ್ಥಾನಗಳ ಅಭಿವೃದ್ಧಿಗೆ ನಮ್ಮ ತಕರಾರಿಲ್ಲ. ಆದರೆ ವಕ್ಫ್ ಹಳೆಯ ಕಾಯ್ದೆ ಅದೆಷ್ಟೋ ಹಿಂದೂಗಳ ಮನೆ, ಹೊಲ, ದೇವಸ್ಥಾನ ಸ್ಥಳಗಳ ಮೇಲೆ ಕ್ಲೇಮ್ ಮಾಡಲು ಹೊರಟಿತ್ತು. ಅದೆಷ್ಟೋ ಹಿಂದೂ ದೇವಸ್ಥಾನಗಳು ಇದರಿಂದ ಪ್ರಭಾವಕ್ಕೆ ಒಳಗಾಗಿದ್ದವು ಎಂಬುದು ಪುತ್ತೂರಿನ ಶಾಸಕರಿಗೆ ತಿಳಿದಿದೆಯೇ, ಚುನಾವಣೆ ಸಂದರ್ಭದಲ್ಲಿ ಹಿಂದೂಗಳ ಹಿತ ಕಾಯಲು ನಾನು ಸದಾ ಸಿದ್ಧ ಎಂದು ಹೇಳಿರುವ ಶಾಸಕರು ತುಷ್ಠಿಕರಣಕ್ಕಾಗಿ ಹಿಂದೂಗಳಿಗೆ ಮಾರಕವಾಗಿ ಪರಿಣಮಿಸಿದ್ದ ಹಳೆ ವಕ್ಫ್ ಕಾನೂನನ್ನು ಸಮರ್ಥಿಸಿ ಮಾತನಾಡುತ್ತಾರೆ ಎಂದರೆ ಅವರ ಗೋಮುಖ ವ್ಯಾಘ್ರತನ ಕಾಣಿಸುತ್ತಿದೆ. ದೇವಸ್ಥಾನ ಹಾಗೂ ಬ್ರಹ್ಮಕಲಶಗಳಿಗೆ ಹೋಗಿ ಬಂದರೆ ಮಾತ್ರ ಹಿಂದುತ್ವ ಅಲ್ಲ ಎಂದು ಹೇಳಿದರು.
ಹಿಂದೂಗಳ ಶ್ರದ್ಧಾ ಕೇಂದ್ರ, ಗೋವಿನ ಹತ್ಯೆ ನಡೆದಾಗ, ಹಿಂದೂ ಕಾರ್ಯಕರ್ತರ ಮೇಲೆ ಮಾರಣಾಂತಿಕ ಹಲ್ಲೆ ನಡೆದಾಗ, ಹಿಂದೂ ಕಾರ್ಯಕರ್ತರನ್ನು ನಿಮ್ಮದೇ ಕಾಂಗ್ರೆಸ್ ಸರ್ಕಾರ ಗಡಿಪಾರು ಮಾಡಿದಾಗ ಎಲ್ಲಿ ಅಡಗಿ ಕುಳಿತಿದ್ರಿ ಶಾಸಕರೇ ಎಂದು ಅವರು ಪ್ರಶ್ನಿಸಿದರು. ಇದೀಗ ವಕ್ಫ್ ಕಾಯ್ದೆಯ ವಿರುದ್ಧದ ಪ್ರತಿಭಟನೆ ನೆಪದಲ್ಲಿ ಪೂರ್ವ ನಿಯೋಜಿತ ಹಿಂದೂ ಧಾರ್ಮಿಕ ಕಾರ್ಯಕ್ರಮಗಳಿಗೆ, ನೇಮೋತ್ಸವಗಳಿಗೆ ಶುಭ ಕೋರಿ ಹಾಕಲಾಗಿರುವ ಬ್ಯಾನರ್, ಬಂಟಿಂಗ್ಸ್ ಗಳನ್ನು ನಿಮ್ಮ ಸರ್ಕಾರವೇ ತೆಗೆಯುತ್ತಿದ್ದರೆ ನೀವು ಯಾಕೆ ತುಟಿ ಪಿಟಿಕ್ ಅನ್ನುತ್ತಿಲ್ಲ , ವಕ್ಫ್ ಆಸ್ತಿಯ ಸುಮಾರು ಹತ್ತು ಲಕ್ಷ ಕೋಟಿಗೂ ಅಧಿಕ. ಆದಾಯ ಮಾತ್ರ ೧೬೩ ಕೋಟಿ ಅಂದಾಗ ಇದರಿಂದ ಬಡ ಮುಸಲ್ಮಾನರಿಗೇ ವಂಚನೆ ಆಗಿದೆ ಎಂಬ ಗುಮಾನಿ ನಿಮಗೆ ಅನಿಸಿಲ್ಲವೇ, ಅದರಿಂದ ನಿಮಗೆ ಪಾಲು ಬಂದಿದೆಯೇ ಎಂದು ಪ್ರಶ್ನಿಸಿದ ಅವರು ಸುಳ್ಳು ವದಂತಿಗಳನ್ನು ಹರಡುವ ಮೂಲಕ ಅವರನ್ನು ಎತ್ತಿಕಟ್ಟಿ ಪ್ರಕ್ಷುಬ್ಧ ವಾತಾವರಣ ಸೃಷ್ಟಿಸುವ ಹುನ್ನಾರ ನಡೆಸುತ್ತಿರುವುದು ಕೈ ಮುಖಂಡ ಹೇಳಿಕೆಯಿಂದ ವೇದ್ಯವಾಗುತ್ತದೆ. ನಿಮ್ಮ ಈ ಕಾರ್ಯಕ್ಕೆ ಹೈಕೋರ್ಟ್ ಕೂಡಾ ಛೀಮಾರಿ ಹಾಕಿದೆ. ಆದ್ದರಿಂದ ಜಿಲ್ಲೆಯ ಶಾಂತಿಯನ್ನು ಕಾಪಾಡುವ ನಿಟ್ಟಿನಲ್ಲಿ ಜಿಲ್ಲಾಡಳಿತ ಸೂಕ್ತ ನಿರ್ಬಂಧ ವಿಧಿಸಬೇಕು ಎಂದು ಅವರು ಆಗ್ರಹಿಸಿದರು.
ಪುತ್ತೂರು ಬಿಜೆಪಿ ಮಾಧ್ಯಮ ವಕ್ತಾದ ಮಹೇಶ್ ರೈ ಉಪಸ್ಥಿತರಿದ್ದರು.