
ಶೋಷಿತ ಸಮುದಾಯದ ವಿಮೋಚಕ ಬಾಬಾ ಸಾಹೇಬ್ ಅಂಬೇಡ್ಕರ್: ಕಾಂತಪ್ಪ ಅಲಂಗಾರ್
ಬೆಳ್ತಂಗಡಿ: ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಒಬ್ಬ ಮಹಾನ್ ವಿಶ್ವ ಜ್ಞಾನಿ. ಅವರು ಒಬ್ಬ ವ್ಯಕ್ತಿ ಅಲ್ಲ. ಒಬ್ಬ ಮಹಾನ್ ಶಕ್ತಿ. ಬಾಬಾ ಸಾಹೇಬರು ಒಬ್ಬ ದೂರ ದೃಷ್ಟಿವುಳ್ಳ ರಾಜಕೀಯ ಮುತ್ಸದ್ದಿ. ಸಮಾಜದ ಎಲ್ಲಾ ವರ್ಗದವರ ಮಾನವ ಹಕ್ಕುಗಳಿಗೋಸ್ಕರ ಹೋರಾಡಿದ ಮಹಾನ್ ಹೋರಾಟಗಾರ. ಆಧುನಿಕ ಭಾರತದಲ್ಲಿ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ನಿರ್ಮಿಸಿದ ಮಹಾನ್ ಸಂವಿಧಾನ ತಜ್ಞ. ದಲಿತರಿಗೆ, ಕಾರ್ಮಿಕರಿಗೆ, ರೈತರಿಗೆ, ಮಹಿಳೆಯರಿಗೆ ಗೌರವಾನ್ವಿತ ಬದುಕು ಕಟ್ಟಿಕೊಟ್ಟ ಮಹಾನ್ ಮಾನವತಾವಾದಿ ಹಾಗೂ ಶೋಷಿತ ಸಮುದಾಯಗಳಿಗೆ ವಿಮೋಚನೆಯ ದಾರಿ ತೋರಿಸಿದ ಮಾರ್ಗದಾತ ಇದ್ದರೆ ಅದು ಬಾಬಾ ಸಾಹೇಬ್ ಅಂಬೇಡ್ಕರ್ ಎಂದು ಬಿ.ಎಸ್.ಪಿ.ಯ ರಾಜ್ಯ ಪ್ರಧಾನ ಕಾರ್ಯದರ್ಶಿ ಕಾಂತಪ್ಪ ಅಲಂಗಾರ್ ಹೇಳಿದರು.
ಬಿ.ಎಸ್.ಪಿ.ಯ ದ.ಕ. ಜಿಲ್ಲಾ ಘಟಕದ ವತಿಯಿಂದ ಸೋಮವಾರ ಬೆಳ್ತಂಗಡಿಯ ಕೊಕ್ಕಡ ಅಂಬೇಡ್ಕರ್ ಭವನದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ 134ನೇ ಜನ್ಮ ದಿನಾಚರಣೆ ಹಾಗೂ ಬಿ.ಎಸ್.ಪಿ.ಯ ಸಂಸ್ಥಾಪನಾ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜನ್ಮ ದಿನಾಚರಣೆ ಏಪ್ರಿಲ್ 14ರ ದಿನಾದಂದೆ ಮಾನ್ಯವಾರ್ ಕಾನ್ಸಿರಾo ಅವರು 1984ರ ಏಪ್ರಿಲ್ 14ರಂದು ಬಹುಜನ ಸಮಾಜ ಪಾರ್ಟಿ ಸ್ಥಾಪನೆ ಮಾಡಿದ್ದರು.
ಬಿ.ಎಸ್.ಪಿ.ಯು ದೇಶದ ಮತ್ತು ಸಮಾಜದ ಸರ್ವರ ಹಿತಾಸಕ್ತಿಗಾಗಿ ಸಾಮಾಜಿಕ ಮತ್ತು ಆರ್ಥಿಕ ಸಮಾನತೆಯನ್ನು ಸ್ಥಾಪಿಸಬಯಸುತ್ತದೆ. ಸಂವಿಧಾನ ಮತ್ತು ಅದನ್ನು ಜಾರಿಗೊಳಿಸುವುದು ಬಿ.ಎಸ್.ಪಿ.ಯ ಪ್ರನಾಳಿಕೆಯಾಗಿದೆ. ಬಿ.ಎಸ್.ಪಿ ಕೇವಲ ಒಂದು ಪಕ್ಷ ಅಲ್ಲ, ಅದು ಒಂದು ಸಾಮಾಜಿಕ ಚಳುವಳಿಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಬಿ.ಎಸ್.ಪಿ. ಜಿಲ್ಲಾ ಅಧ್ಯಕ್ಷ ಗೋಪಾಲ ಮುತ್ತೂರು ಮಾತನಾಡಿ, ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ಮನ್ಯಾವರ್ ಕಾನ್ಸಿರಾಂ ಅವರ ತತ್ವ- ಸಿದ್ಧಾಂತವನ್ನು ಅರಿತು ಆ ಮೂಲಕ ಬಹುಜನ ಸಮಾಜ ಪಕ್ಷವನ್ನು ಬಲಿಷ್ಠವಾಗಿ ಸಂಘಟಿಸಬೇಕಾಗಿದೆ ಎಂದು ಹೇಳಿದರು.
ಬಿ.ಎಸ್.ಪಿ.ಯ ಮುಖಂಡರಾದ ನಾರಾಯಣ ಬೋಧ, ಕಿರಣ್ ಕುಮಾರ್ ಹಾಗೂ ಬಿ.ವಿ.ಎಫ್. ಮುಖಂಡರಾದ ನಿತೀನ್ ಮುತ್ತೂರು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ವಿಚಾರದಾರೆಯ ಬಗ್ಗೆ ಮಾತನಾಡಿದರು. ಜಿಲ್ಲಾ ಉಪಾಧ್ಯಕ್ಷ ಶಿವಪ್ಪ ಗಾರ್ಡಡಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಬಿ.ಎಸ್.ಪಿ.ಯ ಉಪಾಧ್ಯಕ್ಷ ಎನ್. ಪೋಡಿಯ ಸ್ವಾಗತಿಸಿ, ಕಾರ್ಯಕ್ರಮವನ್ನು ಬಿ.ವಿ.ಎಫ್.ನ ಮುಖಂಡ ಲೋಕೇಶ್ ನಿರಾಡಿ ಕಾರ್ಯಕ್ರಮವನ್ನು ನಿರ್ವಹಿಸಿದರು. ಬಿ.ಎಸ್.ಪಿ. ತಾಲೂಕು ಅಧ್ಯಕ್ಷ ಶ್ರೀನಿವಾಸ್ ಪಿ.ಎಸ್. ವಂದಿಸಿದರು.