
ಕಾರ್ಮಿಕರ ನಡುವೆ ಘರ್ಷಣೆ: ಸಾವು
ಕಾಸರಗೋಡು: ನಗರದ ಆನೆ ಬಾಗಿಲಿನ ಕ್ವಾರ್ಟರ್ಸ್ನಲ್ಲಿ ವಲಸೆ ಕಾರ್ಮಿಕರ ಮಧ್ಯೆ ನಡೆದ ಘರ್ಷಣೆಯಲ್ಲಿ ಯುವಕನೊಬ್ಬ ಸಾವಿಗೀಡಾದ ಘಟನೆ ನಡೆದಿದೆ. ಪಶ್ಚಿಮ ಬಂಗಾಲದ ಬರೋಫ್ರಿಯಾ ಜಿಲ್ಫೈಗುರಿ ಭಿಮ್ಮಿಯಾಬಾರ್ ಫರಿಯಾ ನಿವಾಸಿ ಸುಭಾಷ್ ರಾಯ್ ಅವರ ಪುತ್ರ ಸುಶಾಂತ್ ರಾಯ್ (28) ಮೃತಪಟ್ಟರು.
ಕ್ವಾರ್ಟರ್ಸ್ನಲ್ಲಿ ಏಳು ಮಂದಿ ಕಾರ್ಮಿಕರು ಇದ್ದರು. ಕಳೆದ ಮೂರು ತಿಂಗಳ ಹಿಂದೆಯಷ್ಟೇ ಕೆಲಸಕ್ಕಾಗಿ ಕಾಸರಗೋಡಿಗೆ ಬಂದಿದ್ದರು. ಎ. 20ರಂದು ರಾತ್ರಿ ಕ್ವಾರ್ಟರ್ಸ್ನಲ್ಲಿ ಇವರ ಮಧ್ಯೆ ಘರ್ಷಣೆ ನಡೆದಿದ್ದು, ಸುಶಾಂತ್ ರಾಯ್ ಮೃತಪಟ್ಟರು. ಹಲ್ಲೆಯಿಂದ ಸಾವು ಸಂಭವಿಸಿರಬೇಕೆಂದು ಶಂಕಿಸಲಾಗಿದೆ. ಮೃತದೇಹದ ಮೇಲೆ ಯಾವುದೇ ಇರಿತದ ಅಥವಾ ಇತರ ಗಾಯಗಳು ಪತ್ತೆಯಾಗಿಲ್ಲವೆಂದು ಪೊಲೀಸರು ತಿಳಿಸಿದ್ದಾರೆ. ಇದರಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಗೆ ಸಾಗಿಸಲಾಗಿದೆ. ಮರಣೋತ್ತರ ಪರೀಕ್ಷಾ ವರದಿಯ ಬಳಿಕವಷ್ಟೇ ಸಾವಿಗೆ ಕಾರಣ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದೇ ವೇಳೆ ಕ್ವಾರ್ಟರ್ಸ್ನಲ್ಲಿದ್ದ ಆರು ಮಂದಿ ಪರಾರಿಯಾಗಿದ್ದು, ಅವರ ಪೈಕಿ ನಾಲ್ವರನ್ನು ಒಟ್ಟಂಪಾಲದಿಂದ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ವಶಕ್ಕೆ ಪಡೆಯಲಾಗಿದೆ. ಇನ್ನಿಬ್ಬರಿಗಾಗಿ ಶೋಧ ನಡೆಯುತ್ತಿದೆ.