
ಎ. 27ಕ್ಕೆ ಶಿರಿಯಾರದಲ್ಲಿ ಶಿರಿಯಾರ ಮಂಜು ನಾಯ್ಕ್ ಜನ್ಮ ಶತಮಾನೋತ್ಸವ
ಕುಂದಾಪುರ: ಯಕ್ಷಗಾನ ಕಲಾವಿದ ಶ್ರೀ ಶಿರಿಯಾರ ಮಂಜು ನಾಯ್ಕ್ ಜನ್ಮ ಶತ ವರ್ಷ ಸಮಿತಿ ಆಶ್ರಯದಲ್ಲಿ ಶಿರಿಯಾರ ಮಂಜು ನಾಯ್ಕ್ ಜನ್ಮ ಶತಮಾನೋತ್ಸವ ಕಾರ್ಯಕ್ರಮ ಎ. 27 ರಂದು ಕೋಟ ಸಮೀಪದ ಶಿರಿಯಾರ ಗಣೇಶ್ ಪ್ರಸಾದ್ ಕಾಂಚನ್ ಅವರ ಮನೆಯ ಮುಂಭಾಗದಲ್ಲಿ ಜರಗಲಿದೆ ಎಂದು ಸಮಿತಿಯ ಅಧ್ಯಕ್ಷ ಜಯರಾಮ ಬಂಗೇರ ತಿಳಿಸಿದ್ದಾರೆ.
ಬ್ರಹ್ಮಾವರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ಸಮಾರಂಭದ ಮಾಹಿತಿ ನೀಡಿದರು.
ಈ ಪ್ರಯುಕ್ತ ಅಂದು ಅಪರಾಹ್ನ 2.3೦ಕ್ಕೆ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದ್ದು, ಯಕ್ಷಗಾನ ವಿಮರ್ಶಕ ಎಸ್.ವಿ. ಉದಯ ಕುಮಾರ್ ಶೆಟ್ಟಿಯವರು ಪುಷ್ಪನಮನ ಸಲ್ಲಿಸಲಿದ್ದಾರೆ.
ಅಪರಾಹ್ನ 3ಗಂಟೆಗೆ ಯಕ್ಷಗಾನ ಗೋಷ್ಠಿ ನಡೆಯಲಿದೆ. ವಿದ್ವಾಂಸರಾದ ಎಂ.ಎಲ್. ಸಾಮಗ, ರಾಘವ ನಂಬಿಯಾರ್, ಎಸ್.ವಿ. ಉದಯ ಕುಮಾರ್ ಶೆಟ್ಟಿ ಇದರಲ್ಲಿ ಭಾಗವಹಿಸಲಿದ್ದಾರೆ.
ಅನಂತರ ಖ್ಯಾತ ಕಲಾವಿದರ ಕೂಡುವಿಕೆಯಲ್ಲಿ ಗಾನ ವೈವಿಧ್ಯ ನಡೆಯಲಿದೆ.
ಸಂಜೆ 5.3೦ಕ್ಕೆ ನಾಡೋಜ ಡಾ. ಜಿ. ಶಂಕರ್, ಆನಂದ ಸಿ.ಕುಂದರ್, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಕಿರಣ್ ಕುಮಾರ್ ಕೊಡ್ಗಿ, ಕೃಷ್ಣಮೂರ್ತಿ ಮಂಜರು, ಜಯಪ್ರಕಾಶ್ ಹೆಗ್ಡೆ, ಹಾಲಾಡಿ ಶ್ರೀನಿವಾಸ ಶೆಟ್ಟಿ, ಕಿಶನ್ ಹೆಗ್ಡೆ ಕೊಳ್ಕೆಬೈಲು ಮೊದಲಾದವರ ಉಪಸ್ಥಿತಿಯಲ್ಲಿ ಶಿರಿಯಾರ ಅವರ ಸಹವರ್ತಿ ಕಲಾವಿದರಿಗೆ ಸಮ್ಮಾನ, ಅನಂತರ ಶಿರಿಯಾರ ಮಂಜು ನಾಯ್ಕ್ರ ಹಿತೈಷಿಗಳಾದ ಡಾ. ಜಿ. ಶಂಕರ್, ಆನಂದ ಸಿ. ಕುಂದರ್, ಪಳ್ಳಿ ಕಿಶನ್ ಹೆಗ್ಡೆ, ಕಂದಾವರ ರಘುರಾಮ ಶೆಟ್ಟಿ, ಎಸ್.ವಿ. ಉದಯ ಕುಮಾರ್ ಶೆಟ್ಟಿಯವರಿಗೆ ಕತೃಜ್ಞತೆ ಸಮರ್ಪಣೆ ನಡೆಯಲಿದೆ ಎಂದು ತಿಳಿಸಿದರು.
ಶತ ವರ್ಷ ಸಂಭ್ರಮ ಸಮಿತಿ ಕಾರ್ಯದರ್ಶಿ ರಮೇಶ್ಮಂಜು, ಸುರೇಶ್ ಶಿರಿಯಾರ, ಖಜಾಂಚಿ ಗಣೇಶ್ ಪ್ರಸಾದ್ ಕಾಂಚನ್ ಮೊದಲಾದವರಿದ್ದರು.