
ಏ.13ರಂದು ‘ಕುಲಾಲ ಪರ್ಬ’
ಮಂಗಳೂರು: ಕುಲಾಲ ಪ್ರತಿಷ್ಠಾನ ಮಂಗಳೂರು ವತಿಯಿಂದ ‘ಕುಲಾಲ ಪರ್ಬ’ ಕಾರ್ಯಕ್ರಮ ಎ.13 ರಂದು ಮಧ್ಯಾಹ್ನ 2 ಗಂಟೆಯಿಂದ ಉರ್ವಸ್ಟೋರ್ ಬಳಿಯ ಅಂಬೇಡ್ಕರ್ ಭವನದಲ್ಲಿ ನಡೆಯಲಿದೆ ಎಂದು ಆಡಳಿತ ಟ್ರಸ್ಟಿಬಿ. ಸುರೇಶ್ ಕುಲಾಲ್ ಹೇಳಿದರು.
ಪತ್ರಿಕಾಭವನದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಧ್ಯಾಹ್ನ 2 ಗಂಟೆಗೆ ಶ್ರೀ ಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಗಳು ಉದ್ಘಾಟಿಸಲಿದ್ದಾರೆ. ಕುಲಾಲ ಪ್ರತಿಷ್ಠಾನದ ಅಧ್ಯಕ್ಷ ಸುರೇಶ್ ಕುಲಾಲ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿಸಿದರು.
ಟ್ರಸಿ ಬಿ. ಪ್ರೇಮಾನಂದ ಕುಲಾಲ್ ಮಾತನಾಡಿ, ಮಧ್ಯಾಹ್ನ 2.30 ರಿಂದ ನೃತ್ಯ ಸಂಗೀತ ಸಮ್ಮಾನ ನಡೆಯಲಿದೆ. ಕುಲಾಲ ಸಮುದಾಯದ 25 ಸಾಧಕರಿಗೆ ‘ಕುಲಾಲ ಸಾಧಕ’ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಸಂಜೆ 6.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ರೇಕಿ ಗುರು ವಿಜಯ ಸುವರ್ಣ ಮಾದುಕೋಡಿ ಉಪಸ್ಥಿತಿ ಇರಲಿದೆ. ಸುನಿಲ್ ಸಾಲ್ಯಾನ್ ಮತ್ತು ದೇವಕಿ ಸಾಲ್ಯಾನ್ ಅವರಿಗೆ ಗೌರವ ಅಭಿನಂದನೆ ನಡೆಯಲಿದೆ ಎಂದರು.
ದ.ಕ. ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ ಅಧ್ಯಕ್ಷ ಮಯೂರ್ ಉಳ್ಳಾಲ್ ಮಾತನಾಡಿ, 25 ಮಂದಿ ಕುಲಾಲ ಸಮಾಜದ ಬಾಂಧವರಿಗೆ ಆರ್ಥಿಕ ಸಹಾಯ ನೆರವೇರಲಿದೆ. ರಾತ್ರಿ 8 ರಿಂದ 8.30 ರವರೆಗೆ ನಾಗೇಶ್ ಕುಳಾಯಿ ಸಾರಥ್ಯದಲ್ಲಿ ‘ಮಣ್ಣಾ ಬಾಜನ’ ಕಿರು ನಾಟಕ ಪ್ರದರ್ಶನಗೊಳ್ಳಲಿದೆ. 8.30 ರಿಂದ ೯ರವರೆಗೆ ಸೀತಾರಾಮ ಕುಲಾಲ್ ಮತ್ತು ತಂಡದಿಂದ ‘ತಾಲೀಮು ಪ್ರದರ್ಶನ’ ಇರಲಿದೆ ಎಂದು ವಿವರಿಸಿದರು.
ಟ್ರಸ್ಟಿಗಳಾದ ಬಿ. ನಾಗೇಶ್ ಕುಲಾಲ್, ಬಿ. ದಿನೇಶ್ ಕುಲಾಲ್ ಉಪಸ್ಥಿತರಿದ್ದರು.