
ಏ.18. ರಿಂದ 20 ರವರೆಗೆ ‘ಬ್ಯಾರಿ ಸೌಹಾರ್ದ ಉತ್ಸವ’
ಮಂಗಳೂರು: ಕರ್ನಾಟಕ ಬ್ಯಾರೀಸ್ ಸೋಶಿಯಲ್ ಎಂಡ್ ಕಲ್ಚರಲ್ ಫಾರಂ ಆಯೋಜಿಸುವ ‘ಸೌಹಾರ್ದ ಬ್ಯಾರಿ ಉತ್ಸವ-2025’ ಸಂಘಟನಾ ಸಮಿತಿ ವತಿಯಿಂದ ಮಂಗಳೂರಿನ ಕರಾವಳಿ ಉತ್ಸವ ಮೈದಾನದಲ್ಲಿ ‘ಬ್ಯಾರಿ ಸೌಹಾರ್ದ ಉತ್ಸವ’ವನ್ನು ಏಪ್ರಿಲ್ 18, 19, 20 ರಂದು ಆಯೋಜಿಸಲಾಗಿದೆ. ಈ ಉತ್ಸವದಲ್ಲಿ ಬ್ಯಾರಿ ಜನಾಂಗದ ವೈಶಿಷ್ಟ್ಯತೆ, ಸಂಸ್ಕೃತಿ, ಸೌಹಾರ್ದತೆ, ಕೊಡುಗೆಗಳು, ಸಾಧನೆಗಳು, ಪರಂಪರೆಗಳನ್ನು ಪ್ರತಿಬಿಂಬಿಸುವ ಜೊತೆಗೆ ಯುವ ಜನಾಂಗಕ್ಕೆ ದಿಕ್ಸೂಚಿಯಾಗುವ ಹಾಗೂ ಬಹು ಭಾಷಾ ಸಂಸ್ಕೃತಿಗಳನ್ನು ಪ್ರಸ್ತುತಪಡಿಸುವ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ ಎಂದು ನಿವೃತ್ತ ಡಿಸಿಪಿ, ಫಾರಂ ಅಧ್ಯಕ್ಷ ಜಿ.ಎ. ಬಾವಾ ಹೇಳಿದ್ದಾರೆ.
ಅವರು ಶುಕ್ರವಾರ ಮಂಗಳೂರು ನಗರದ ಖಾಸಗಿ ಹೋಟೆಲ್ನಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಈ ಕುರಿತು ಮಾಹಿತಿ ನೀಡಿ, ಏ.18 ರಂದು ಸಂಜೆ 4 ಗಂಟೆಗೆ ಉದ್ಘಾಟನೆಗೊಂಡು ಉತ್ಸವವು ಏ.20 ರಂದು 7 ಗಂಟೆಗೆ ಸಮಾರೋಪಗೊಳ್ಳಲಿದೆ. ಈ ಮೂರು ದಿನಗಳಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು, ಆಹಾರ ಮೇಳ ನಡೆಯಲಿದೆ ಎಂದರು.
ಏ.19 ರಂದು ಬೆಳಗ್ಗೆ 10 ಗಂಟೆಯಿಂದ ಕರ್ನಾಟಕ ಸರಕಾರದ ಕೌಶಲ್ಯಾಭಿವೃದ್ಧಿ ಇಲಾಖೆಯ ಸಹಯೋಗದಲ್ಲಿ, ಕರ್ನಾಟಕದ ಪ್ರತಿಷ್ಠಿತ ವಿಶ್ವವಿದ್ಯಾಲಯದ ನೇತೃತ್ವದಲ್ಲಿ ಉದ್ಯೋಗ ಮೇಳ ನಡೆಯಲಿದೆ. ಕರಾವಳಿ ಕರ್ನಾಟಕದಲ್ಲಿ ಪ್ರಥಮ ಬಾರಿಗೆ ಒಂದೇ ಕಡೆ ದೇಶ ವಿದೇಶದ 100 ಕ್ಕಿಂತ ಹೆಚ್ಚು ಪ್ರಖ್ಯಾತ ಕಂಪೆನಿಗಳು ಇಲ್ಲಿ ಸೇರಲಿದ್ದು ಕರಾವಳಿ ಭಾಗದ ಉದ್ಯೋಗ ಆಕಾಂಕ್ಷಿಗಳು ಇದರ ಸದುಪಯೋಗ ಪಡೆಯಬಹುದು. ದುಬೈ, ಸೌದಿ ಅರೇಬಿಯಾ, ಕತಾರ್ ಸೇರಿಂದ ಮಿಡಲ್ ಈಸ್ಟ್ನ ಕಂಪೆನಿಗಳು ಇಲ್ಲಿನ ಯುವಕ-ಯುವತಿಯರಿಗೆ ಉದ್ಯೋಗ ಅವಕಾಶ ಕೊಡಲು ಈ ಮೇಳದಲ್ಲಿ ಭಾಗವಹಿಸಲಿದೆ ಎಂದರು.
ಇದು ಕೇವಲ ಒಂದು ದಿನಕ್ಕೆ ಸೀಮಿತ ಆಗದೇ ಇಲ್ಲಿ ದಾಖಲು ಮಾಡಿದ ಉದ್ಯೋಗ ಆಕಾಂಕ್ಷಿ ಅಭ್ಯರ್ಥಿಗಳನ್ನು ನಾವು ನಿರಂತರ ಸಂಪರ್ಕದಲ್ಲಿ ಇರಿಸಿ ಅವರಿಗೆ ಮಾರ್ಗದರ್ಶನ ಮತ್ತು ಪ್ರೋತ್ಸಾಹ ಮಾಡಲು ಅನುಕೂಲ ಆಗುವಂತೆ ಒಂದು ಜಾಬ್ ಪ್ಲೇಸ್ಮೆಂಟ್ ಕಚೇರಿ ತೆರೆದಿದ್ದು ಅಲ್ಲಿ ನುರಿತ ಟ್ರೈನರ್ಗಳು ಇವರಿಗೆ ಜಾಬ್ ಇಂಟರ್ವ್ಯೂ ತರಬೇತಿ ಮತ್ತು ಕೌಶಲ್ಯ ನೀಡಿ ಮುಂದೆಯೂ ಅವರಿಗೆ ಉದ್ಯೋಗ ಸಿಗುವಂತೆ ಮಾಡಲು ಅನುಕೂಲ ಮಾಡಿ ಕೊಡಲಿದೆ. ಈ ಸೇವೆ ನಿರಂತರ ಸಂಪೂರ್ಣ ಉಚಿತವಾಗಿ ನಡೆಯಲಿದೆ. ಈಗಾಗಲೇ ದುಬೈನಲ್ಲಿ ಬ್ಯಾರಿ ಮೇಳ ನಡೆಸಿದ ಆಯೋಜಕರು ಅಲ್ಲಿನ ನೂರಾರು ಕಂಪೆನಿಗಳ ನೆಟ್ ವರ್ಕ್ ಮಾಡಿದ್ದಾರೆ. ಅವರು ಈ ಮೇಳದಲ್ಲಿ ರಿಜಿಸ್ಟರ್ ಆಗುವ ಅಭ್ಯರ್ಥಿಗಳಿಗೆ ಉದ್ಯೋಗ ಅವಕಾಸಕ್ಕೆ ಸಹಾಯ ಮಾಡಲಿದ್ದಾರೆ.
ಏ.20 ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಶೈಕ್ಷಣಿಕ ಮೇಳ ನಡೆಯಲಿದೆ. ಈಗಾಗಲೇ ಕರಾವಳಿಯಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಬಹಳಷ್ಟು ಸಾಧನೆ ಮಾಡಿದ ಪುತ್ತೂರು ಕಮ್ಯೂನಿಟಿ ಸೆಂಟರ್ನ 100 ಕ್ಕಿಂತ ಹೆಚ್ಚು ಅನುಭವಿ ಕೌನ್ಸಿಲರ್ಗಳು, ಮೆನ್ಟರ್ಸ್ಗಳು ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಒನ್ ಟು ವನ್ ಕೌನ್ಸಿಲಿಂಗ್ ಮಾಡಲಿದ್ದಾರೆ ಎಂದು ತಿಳಿಸಿದರು.
ಬೆಂಗಳೂರಿನ ಪ್ರೆಸಿಡೆನ್ಸಿ ವಿವಿಯ ಸಂಸ್ಥಾಪಕ ಸುಹೈಲ್, ಇಕ್ಬಾಲ್ ಪರ್ಲಿಯಾ, ಜಿಲ್ಲಾ ಕೌಶಲಾಭಿವೃದ್ಧಿ ಅಧಿಕಾರಿ ಪ್ರದೀಪ್ ಡಿಸೋಜಾ, ಉದ್ಯೋಗ ಮೇಳದ ಉಸ್ತುವಾರಿ ಅರುಣ್ ಕೆಪಿಸಿಸಿ ವಕ್ತಾರೆ ಯು.ಟಿ. ಫರ್ಝನಾ ಅಶ್ರಫ್, ಮೀಫ್ ಅಧ್ಯಕ್ಷ ಮೂಸಬ್ಬ, ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ ಜಿಲ್ಲಾಧ್ಯಕ್ಷ ಶಾಹುಲ್ ಹಮೀದ್ ಕೆ.ಕೆ, ಸಂಘಟಕ ಷರೀಫ್ ಅಬ್ಬಾಸ್ ವಳಾಲು ಮತ್ತಿತರರು ಉಪಸ್ಥಿತರಿದ್ದರು.