
ಮೇ.18ರಂದು ಕುಡ್ಲೋತ್ಸವ
ಮಂಗಳೂರು: ಕುಡ್ಲೋತ್ಸವ ವತಿಯಿಂದ ರಿಕ್ಷಾ ಚಾಲಕರ ಸಂಘದ ಸಹಭಾಗಿತ್ವದಲ್ಲಿ ಒಂದು ದಿನದ ರಿಕ್ಷಾ ಚಾಲಕರ ಕ್ರಿಕೆಟ್ ಪಂದ್ಯಾಟ ‘ಕುಡ್ಲೋತ್ಸವ’ ಮೇ.18 ರಂದು ನಡೆಯಲಿದೆ.
ಪಂದ್ಯಾಟಕ್ಕೆ ಈಗಾಗಲೇ ಸಿದ್ದತೆಗಳು ನಡೆಯುತ್ತಿದ್ದು, ಸುಮಾರು 720 ರಿಕ್ಷಾ ಚಾಲಕರು ಭಾಗವಹಿಸುವ ನಿರೀಕ್ಷೆ ಇದೆ. 8 ಫ್ರಾಂಚೈಸ್ನಡಿ 48 ತಂಡಗಳು ಭಾಗವಹಿಸಲಿವೆ. ಪ್ರತೀ ತಂಡದಲ್ಲಿ 15 ಮಂದಿ ಕ್ರೀಡಾಪಟುಗಳು ಇರಲಿದ್ದಾರೆ. ಈ ಪಂದ್ಯಾಟವು ಬೆಳಗ್ಗೆ 6 ಗಂಟೆಗೆ ಆರಂಭಗೊಳ್ಳಲಿದ್ದು, ನಗರದ ಕದ್ರಿ ಮೈದಾನ, ಎಮ್ಮೆಕೆರೆ ಮೈದಾನ, ಕಾವೂರು ಶಾಂತಿನಗರ, ಬೋಂದೆಲ್ ಮೈದಾನ, ಪದುವ ಮೈದಾನ, ಜೆಪ್ಪು ಭಾರತ್ ಮೈದಾನದಲ್ಲಿ ನಡೆಯಲಿದೆ ಎಂದು ‘ಕುಡ್ಲೋತ್ಸವ’ ಸಂಘಟಕ ಆನಂದ್ ಲೋಬೊ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಂಜೆ 6 ಗಂಟೆಗೆ ನಗರದ ನೆಹರೂ ಮೈದಾನದಲ್ಲಿ ನಡೆಯುವ ಸಮಾರೋಪ ಸಮಾರಂಭ ನಡೆಯಲಿದೆ. ಖ್ಯಾತ ಕ್ರಿಕೆಟಿಗ ಸೈಯದ್ ಕಿರ್ಮಾನಿ ಅವರ ಆತ್ಮಚರಿತ್ರೆ ‘ಸ್ಟಂಪ್ಡ್’ ಪುಸ್ತಕ ಬಿಡುಗಡೆಗೊಳ್ಳಲಿದೆ. ಈ ವೇಳೆ ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರರಾದ ಕಪಿಲ್ದೇವ್, ಬಿ.ಎಸ್. ಚಂದ್ರಶೇಖರ್ ಸಹಿತ ಜಿಲ್ಲೆಯ ವಿವಿಧ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
ಈ ವೇಳೆ ಬಹುಮಾನ ವಿತರಣಾ ಸಮಾರಂಭ ನಡೆಯಲಿದ್ದು, ವಿಜೇತ ತಂಡಕ್ಕೆ 15,000 ರೂ., ರನ್ನರ್ಅಪ್ ತಂಡಕ್ಕೆ 10,000 ರೂ. ಮತ್ತು ಪ್ರತೀ ಮೈದಾನದಲ್ಲಿ ಮ್ಯಾನ್ ಆಫ್ ದಿ ಮ್ಯಾಚ್ 2,000 ರೂ. ಬಹುಮಾನ ಇರಲಿದೆ ಎಂದರು.
ಪ್ರಮುಖರಾದ ದಯಾಕರ್, ಮೋಹನ್ಕೃಷ್ಣ, ಅಶ್ವಿನ್, ದಯಾನಂದ ಕುಕ್ಕಾಜೆ, ನಾಸಿರ್ ಉಪಸ್ಥಿತರಿದ್ದರು.