
ಮ್ಯಾಟ್ ಕಬಡ್ಡಿ ಪಂದ್ಯಾಟ ‘ಅಜಯ್ ಟ್ರೋಫಿ-2025’
ಮಂಗಳೂರು: ಅಜಯ್ ಸ್ಪೋರ್ಟ್ಸ್ ಕ್ಲಬ್ ಕುಳಾಯಿ ವತಿಯಿಂದ ಏ.20ರಂದು ರಕ್ತದಾನ ಶಿಬಿರದ ರಜತಮಹೋತ್ಸವ ಹಾಗೂ 43ನೇ ವಾರ್ಷಿಕೋತ್ಸವದ ಅಂಗವಾಗಿ ಮ್ಯಾಟ್ ಕಬಡ್ಡಿ ಪಂದ್ಯಾಟ ‘ಅಜಯ್ ಟ್ರೋಫಿ-2025’ ಆಯೋಜಿಸಲಾಗಿದೆ.
ಅಜಯ್ ಸ್ಪೋರ್ಟ್ಸ್ ಕ್ಲಬ್ ಕುಳಾಯಿ ಮತ್ತು ರೋಟರಿ ಕ್ಲಬ್ ಬೈಕಂಪಾಡಿ ಜಂಟಿ ಆಶ್ರಯದಲ್ಲಿ ಯೂನಿವರ್ಸಿಟಿ ಮೆಡಿಕಲ್ ಸೆಂಟರ್ ಹಾಗೂ ಜಿಲ್ಲಾ ವೆನ್ಲಾಕ್ ಆಸ್ಪತ್ರೆ ಮಂಗಳೂರು ಸಹಕಾರದೊಂದಿಗೆ 25ನೇ ಬೃಹತ್ ರಕ್ತದಾನ ಶಿಬಿರ ಏ.20ರಂದು ಬೆಳಗ್ಗೆ 9.30ಕ್ಕೆ ಕುಳಾಯಿ ಶ್ರೀ ವೆಂಕಟ್ರಮಣ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ. ಪಣಂಬೂರು ಎಸಿಪಿ ಕೆ. ಶ್ರೀಕಾಂತ್ ಶಿಬಿರ ಉದ್ಘಾಟಿಸುವರು ಎಂದು ಅಜಯ್ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಗಂಗಾಧರ ಬಂಜನ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮಧ್ಯಾಹ್ನ 2.30ಕ್ಕೆ ಕುಳಾಯಿ ಶ್ರೀ ಗೋಪಾಲಕೃಷ್ಣ ಭಜನಾ ಮಂದಿರ ಮುಂಭಾಗದಲ್ಲಿ ಕೀರ್ತಿಶೇಷ ಉಸ್ಮಾನ್ ಕುಕ್ಕಾಡಿ ಅವರ ಸವಿ ನೆನಪಿನಲ್ಲಿ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲಾ ಮಟ್ಟದ ಪುರುಷರ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾಟ ನಡೆಯಲಿದೆ. ಸಂಜೆ 7ಕ್ಕೆ ಸಭಾ ಕಾರ್ಯಕ್ರಮದಲ್ಲಿ ಪರಿಸರದ ಆರ್ಥಿಕ ಸಂಕಷ್ಟದಲ್ಲಿರುವ ಅರ್ಹ ಕುಟುಂಬಗಳಿಗೆ ಹಾಗೂ ವಿದ್ಯಾರ್ಥಿಗಳಿಗೆ ಸಹಾಯನಿಧಿ ವಿತರಣೆ, ಅಂತಾರಾಷ್ಟ್ರೀಯ ಕಬಡ್ಡಿ ಆಟಗಾರರಿಗೆ ಗೌರವಾರ್ಪಣೆ, ರಾಜಕೀಯ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ ಮಹಿಳೆಯೊಬ್ಬರಿಗೆ ಅಭಿನಂದನೆ, 2024ನೇ ಸಾಲಿನ ಮುಖ್ಯಮಂತ್ರಿ ಪದಕ ಪಡೆದ ಸುರತ್ಕಲ್ ಪೊಲೀಸ್ ಠಾಣೆಯ ಅಽಕಾರಿಗಳಿಗೆ ಗೌರವಾರ್ಪಣೆ, ಕುಳಾಯಿ ಹೊಸಬೆಟ್ಟು ಪರಿಸರದ ಹಿರಿಯ ಕಬಡ್ಡಿ ಆಟಗಾರರನ್ನು ಗೌರವಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು.
ಸ್ಪೋರ್ಟ್ಸ್ ಕ್ಲಬ್ ಉಪಾಧ್ಯಕ್ಷ ಗಣೇಶ್ ಆಚಾರ್ಯ, ಗೌರವ ಸಲಹೆಗಾರ ನರಸಿಂಹ ಕೆ., ಸಂಚಾಲಕ ಕೆ. ಭರತ್ ಶೆಟ್ಟಿ, ಜತೆ ಕಾರ್ಯದರ್ಶಿ ಸೋಮನಾಥ್ ದೇವಾಡಿಗ, ರೋಟರಿ ಕ್ಲಬ್ ಬೈಕಂಪಾಡಿ ಅಧ್ಯಕ್ಷ ಹರೀಶ್ ಬಿ. ಶೆಟ್ಟಿ, ದಕ್ಷಿಣ ಕನ್ನಡ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಗೌರವ ಸಲಹೆಗಾರ ಪುರುಷೋತ್ತಮ ಪೂಜಾರಿ ಉಪಸ್ಥಿತರಿದ್ದರು.