ರಾಣಿ ಅಬ್ಬಕ್ಕಳ ಕುರಿತು ಸರಿಯಾದ ದಾಖಲೆ ಇಲ್ಲದಿರುವುದು ದುರಾದೃಷ್ಟಕರ

ರಾಣಿ ಅಬ್ಬಕ್ಕಳ ಕುರಿತು ಸರಿಯಾದ ದಾಖಲೆ ಇಲ್ಲದಿರುವುದು ದುರಾದೃಷ್ಟಕರ


ಬಂಟ್ವಾಳ: ಬಿ.ಸಿ.ರೋಡಿನ ಸಂಚಯಗಿರಿಯಲ್ಲಿರುವ  ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಮತ್ತು ತುಳು ಬದುಕು ವಸ್ತು ಸಂಗ್ರಹಾಲಯ ವತಿಯಿಂದ "ರಾಣಿ ಅಬ್ಬಕ್ಕ ಬಹುಮುಖಿ ಚಿಂತನೆ" ಎಂಬ ವಿಷಯದ ಕುರಿತು ಒಂದು ದಿನ ಪೂರ್ತಿ ವಿಚಾರಗೋಷ್ಠಿ ಹಾಗೂ ,ಸಂವಾದ ಅವಳಿ ಕೇಂದ್ರದಲ್ಲಿ ಶುಕ್ರವಾರ ನಡೆಯಿತು.

ತುಳುನಾಡಿನ ಸಿರಿತುಪ್ಪೆಗೆ ಪೊಲಿ ಹಾಕುವ ಮೂಲಕ ಸಾಂಪ್ರದಾಯಿಕವಾಗಿ ಚಾಲನೆ ನೀಡಲಾಯಿತು. ಬಳಿಕ ದೀಪ ಬೆಳಗಿಸಿ ವಿಚಾರಗೋಷ್ಠಿಯ ಸಭಾ ಕಾರ್ಯಕ್ರಮ ಉದ್ಘಾಟಿಸಿದ  ಮಾಜಿ ಶಾಸಕಿ ಹಾಗೂ ಕರಾವಳಿ ಲೇಖಕಿಯರ ವಾಚಕಿಯರ ಸಂಘದ ಅಧ್ಯಕ್ಷೆ ಶಕುಂತಳಾ ಟಿ. ಶೆಟ್ಟಿ, ಕ್ರೂರ ಪೋರ್ಚುಗೀಸರಿಗೆ ಸಿಂಹ ಸ್ವಪ್ನಳಾಗಿ, ಕರಾವಳಿಯಿಂದ ಅವರನ್ನು ಬಡಿದೋಡಿಸುವ ಅಸಾಧ್ಯ ಹೋರಾಟ ನಡೆಸಿದ ಚೌಟ ಮನೆತನದ ರಾಣಿ ಅಬ್ಬಕ್ಕಳ ಕುರಿತು ಇಡೀ ಭಾರತದಲ್ಲಿ ದಾಖಲೆ ಸರಿಯಾಗಿಲ್ಲದಿರುವುದೇ ದುರಾದೃಷ್ಟಕರ ಎಂದು ಹೇಳಿದರು.

ಮಂಗಳೂರು ವಿಮಾನ ನಿಲ್ದಾಣಕ್ಕೆ ರಾಣಿ ಅಬ್ಬಕ್ಕ ಹೆಸರು ಇಡಬೇಕು ಎಂದು ತಾನು ಶಾಸಕಿಯಾಗಿದ್ದ ಸಂದರ್ಭ ಅಧಿವೇಶನದಲ್ಲಿ ಪ್ರಸ್ತಾಪಿಸಿ ಸರಕಾರದ ಗಮನಸೆಳೆದಿರವುದನ್ನು ಸ್ಮರಿಸಿದ ಅವರು ಹೆಣ್ಣುಮಕ್ಕಳೆಲ್ಲರೂ ಅಬ್ಬಕ್ಕರಾಗಿ ಎಂದು ಸಲಹೆ ನೀಡಿದರು.

ಸ್ವಾತಂತ್ರ್ಯಕ್ಕಾಗಿ ಹೋರಾಡಿದ ರಾಣಿ ಅಬ್ಬಕ್ಕದೇವಿಯ ಕುರಿತಂತೆ ಸಮಗ್ರವಾದ ಮಾಹಿತಿಯನ್ನು ನಾವು ಹೊಂದಿರದೇ ಇರುವುದು ಐತಿಹಾಸಿಕವಾದಂತ ದುರಂತವಾಗಿದೆ.ಪ್ರಸಕ್ತ ಕಾಲಘಟ್ಟದಲ್ಲಿ ಅಬ್ಬಕ್ಕಳ ಕುರಿತಾಗಿ ಇರುವಂತಹ ಗೊಂದಲಗಳ ನಿವಾರಣೆಯೂ ಆಗಬೇಕಾದ ಅಗತ್ಯವಿದೆ ಎಂದು ಅಧ್ಯಕ್ಷತೆ ವಹಿಸಿದ್ದ ಇತಿಹಾಸ ಸಂಶೋಧಕ ಡಾ. ಪುಂಡಿಕಾಯ್ ಗಣಪಯ್ಯ ಭಟ್ ಹೇಳಿದರು.

ಇಟಾಲಿಯನ್ ಪ್ರವಾಸಿ ಪಿಯತ್ತೊ ದೆಲ್ಲಾ ವೆಲ್ಲೆ ಅಬ್ಬಕ್ಕ ಕುರಿತು ಬರೆಯದೇ ಇದ್ದರೆ ಹಾಗೂ ಪೋರ್ಚುಗೀಸ್ ಆಕರಗಳಿಂದ ಅಬ್ಬಕ್ಕ ಕುರಿತು ಹೆಚ್ಚಿನ ಮಾಹಿತಿ ದೊರೆಯದೇ ಇದ್ದರೆ, ನಮಗೆ ಅವಳ ಬಗ್ಗೆ ತಿಳಿಯಲು ಸಾಧ್ಯವಿರಲಿಲ್ಲ. ವಿದೇಶಿ ಆಧಾರಗಳನ್ನು ಅವಲಂಬಿಸಿಯೇ ಅಬ್ಬಕ್ಕನ ಅಧ್ಯಯನ ಮಾಡಬೇಕಾಗುತ್ತದೆ. ಅಬ್ಬಕ್ಕನ ಬಗ್ಗೆ ಸಮಗ್ರ ಮಾಹಿತಿಯನ್ನು ನಾವು ಹೊಂದಿರದೇ ಇರುವುದು ಐತಿಹಾಸಿಕ ದುರಂತ ಎಂದರು.

ದೇಶೀಯ ಆಧಾರಗಳಲ್ಲಿ ಅನೇಕ ಗೊಂದಲ, ಪ್ರಶ್ನೆ ಮೂಡುತ್ತದೆ. ಉಳ್ಳಾಲದಲ್ಲಿ ನೂರು ವರ್ಷಗಳ ಅವಧಿಯಲ್ಲಿ ಇಬ್ಬರು ಅಬ್ಬಕ್ಕ ರಾಣಿಯರು ತುಳುನಾಡಿನ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದರು. ಪೋರ್ಚುಗೀಸರ ವಿರುದ್ಧ ಇವರಿಬ್ಬರೂ ಹೋರಾಟ ಮಾಡಿದ್ದರು. ಇವರು 1550-1640ರ ಕಾಲದವರು ಎಂದು ಹೇಳಲಾಗುತ್ತದೆ, ಆದರೆ ಕಾಲಾವಧಿ ಕುರಿತು ಗೊಂದಲವಿದೆ. ಅಬ್ಬಕ್ಕ ಹುಟ್ಟಿ ಐನೂರನೇ ವರ್ಷ ಎಂಬುದೂ ಅನುಮಾನವಿದೆ. ಗೊಂದಲ ನಿವಾರಣೆ ಆಗಬೇಕಾಗಿದೆ. ಸ್ವಾತಂತ್ರ್ಯ ಹೋರಾಟಗಾರರ ಪಟ್ಟಿಗೆ ರಾಣಿ ಅಬ್ಬಕ್ಕ ಸೇರ್ಪಡೆಯಾಗುವುದಕ್ಕೆ ಯಾರೂ ಅನುಮಾನ ವ್ಯಕ್ತಪಡಿಸುವುದು ಬೇಡ ಎಂದು ಡಾ. ಪುಂಡಿಕಾಯ್ ಗಣಪಯ್ಯ ಭಟ್ ಹೇಳಿದರು.

ಕರ್ನಾಟಕ ರಾಜ್ಯ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ತಾರಾನಾಥ ಗಟ್ಟಿ ಕಾಪಿಕಾಡ್ ಮಾತನಾಡಿ ಅಬ್ಬಕ್ಕ ಎಂದರೆ ಯಾರು ಎಂಬುದನ್ನು ಡಾ.ತುಕಾರಾಮ ಪೂಜಾರಿ ದಂಪತಿ ತೋರಿಸಿಕೊಟ್ಟಿದ್ದಾರೆ. ಮಂಗಳೂರಿನಲ್ಲಿ ಕರಾವಳಿ ಉತ್ಸವ ಮೈದಾನಕ್ಕೆ ಅಬ್ಬಕ್ಕ ರಾಣಿ ಮೈದಾನ ಎಂದು ಹೆಸರಿಡಲು ಮನಪಾ ಮತ್ತು ರಾಜ್ಯ ಸರಕಾರ ಪ್ರಯತ್ನಿಸಬೇಕು ಎಂದರು. 

ಬೆಳಗಿನ ಅವಧಿಯಲ್ಲಿ ಉಳ್ಳಾಲದ ಅಬ್ಬಕ್ಕ ರಾಣಿಯರು ಐತಿಹಾಸಿಕ ನೆಲೆ ಕುರಿತು ಸಂಶೋಧಕಿ ಡಾ. ಮಾಲತಿ ಕೃಷ್ಣಮೂರ್ತಿ ಬೆಳಕು ಚೆಲ್ಲಿದರು. ಕಾದಂಬರಿಗಳಲ್ಲಿ ಅಬ್ಬಕ್ಕ ವಿಚಾರದಲ್ಲಿ ಡಾ.ವಿ.ಕೆ. ಯಾದವ ವಿಚಾರ ಮಂಡಿಸಿದರು. ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಮತ್ತು ತುಳು ಬದುಕು ವಸ್ತು ಸಂಗ್ರಹಾಲಯದ ಸಂಸ್ಥಾಪಕ ಡಾ. ತುಕಾರಾಮ ಪೂಜಾರಿ ಪ್ರಾಸ್ತಾವಿಕವಾಗಿ ಮಾತನಾಡಿ ವಸ್ತುವಿನ ಮುಖಾಂತರ ಚರಿತ್ರೆ ನಿರ್ಮಾಣವಾಗುತ್ತದೆ ಎಂಬುದನ್ನು ಗಮನಿಸಬೇಕು. ಸಮುದಾಯದ ಚರಿತ್ರೆಯನ್ನು ಬಿಚ್ಚಿಡಲು ಜನಸಾಮಾನ್ಯರ ಬದುಕು ಪ್ರೇರಣೆ ಆಗಬೇಕು. ಯುವಪೀಳಿಗೆಗೆ ನಮ್ಮ ನೆಲದ ಸಂಸ್ಕೃತಿ ಅರಿವು ಆಗಬೇಕು ಎಂಬ ದೃಷ್ಟಿಯಿಂದ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಮತ್ತು ತುಳು ಬದುಕು ವಸ್ತು ಸಂಗ್ರಹಾಲಯ ರೂಪುಗೊಂಡಿದೆ ಎಂದರು.

ಜಯಶ್ರೀ ಪ್ರತಿಮ್ ಕುಮಾರ್ ಪ್ರಾರ್ಥಿಸಿದರು. ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಕಾರ್ಯದರ್ಶಿ ಡಾ. ಆಶಾಲತಾ ಸುವರ್ಣ ವಂದಿಸಿದರು. ಸಿಂಧೂರ ಟಿ.ಪಿ. ಕಾರ್ಯಕ್ರಮ ನಿರ್ವಹಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article