
ಬಲ್ಮಠ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಪೊರ್ಲು-2025 ಅನಾವರಣ
ಮಂಗಳೂರು: ಮಂಗಳೂರು ನಗರದ ಬಲ್ಮಠ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ವಿಶ್ವ ವಿದ್ಯಾನಿಲಯ ಮಟ್ಟದ ಸರಕಾರಿ ಪದವಿ ಕಾಲೇಜುಗಳ ಕರಾವಳಿ ಜನಪದ ಉತ್ಸವ ಪದ ನಲಿಕೆದ ಸಿಂಗಾರ 2025 ಎಂಬ ಕಾರ್ಯಕ್ರಮ ಅನಾವರಣಗೊಂಡಿತು.
ಸರಕಾರಿ ಕಾಲೇಜುಗಳಲ್ಲಿ ಗುಣಮಟ್ಟದ ಶಿಕ್ಷಣ ಸಿಗುತ್ತದೆ. ಇದಕ್ಕೆ ಕಾರಣ ಇಲ್ಲಿರುವ ಉತ್ತಮ ಶಿಕ್ಷಕರು ಎಂದು ಕಾಂತಾರಾ ಸಿನಿಮಾ ಖ್ಯಾತಿಯ ಹಾಸ್ಯ ನಟ ದೀಪಕ್ ರೈ ಪಾಣಾಜೆ ಅವರು ಅಭಿಪ್ರಾಯ ಪಟ್ಟರು.
ಅವರು ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಬಲ್ಮಠದಲ್ಲಿ ನಡೆದ ವಿಶ್ವವಿದ್ಯಾನಿಲಯ ಮಟ್ಟದ ಕರಾವಳಿ ಜನಪದ ಕಲೋತ್ಸವವನ್ನು ಉದ್ಘಾಟಿಸಿ ಬಳಿಕ ಸಮಾರಂಭದಲ್ಲಿ ಮಾತನಾಡಿದರು..
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಿಯಾ ತನಿಷ್ಕ್ ಪ್ರಾಂತೀಯ ಮುಖ್ಯಸ್ಥ ಕೆ ಪ್ರಸನ್ನ ಕುಮಾರ್ ರವರು ತುಳುನಾಡಿನ ಸಂಸ್ಕೃತಿಯನ್ನು ಜೀವಂತವಾಗಿರಿಸಲು ಶಾಲಾ ಕಾಲೇಜುಗಳಲ್ಲಿ ಇಂತಹ ಕಾರ್ಯಕ್ರಮಗಳು ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳ ಸಂಘಟನೆಗೆ ಸಹಕಾರ ಹಾಗೂ ಪ್ರೋತ್ಸಾಹ ನೀಡುತ್ತಿರುವಂತಹ ಈ ಕಾಲೇಜಿನ ಪ್ರಾಂಶುಪಾಲರು ಅಭಿನಂದನಾರ್ಹರು ಎಂದರು.
ಕಾರ್ಯಕ್ರಮದ ಮತ್ತೋರ್ವ ಅತಿಥಿ ಮಂಗಳೂರು ಮಿರರ್ ಪತ್ರಿಕೆಯ ಸಂಪಾದಕ ಡಾ. ರಾಜೇಶ್ ಕದ್ರಿ ಅವರು ಮಾತನಾಡಿ ಜನಪದ ಕಲೆಗಳಿಗೆ ಅದರದೇ ಆದ ಸ್ಥಾನಮಾನಗಳಿವೆ. ನಾಡಿನ ಸಂಸ್ಕೃತಿಗೆ ಜನಪದ ಕಲೆಗಳು ಅನನ್ಯ ಕೊಡುಗೆಗಳನ್ನು ನೀಡಿದೆ.
ಯಕ್ಷಗಾನ, ಭೂತಾರಾಧನೆ,ನಾಗರಾಧನೆ, ಕಂಬಳ,ಕೋಳಿ ಅಂಕ ಸೇರಿದಂತೆ ನಾಡಿನ ಪ್ರತಿಯೊಂದು ಭಾಗದಲ್ಲೂ ತಮ್ಮದೇ ಆದಂತಹ ವಿಶಿಷ್ಟ ಪೂರ್ಣ ಕಲೆಗಳಿವೆ. ಜನಪದವನ್ನು ಜನರಿಗೆ ಪರಿಚಯಿಸುವ ನಿಟ್ಟಿನಲ್ಲಿ ಇಂಥ ಕಾರ್ಯಕ್ರಮಗಳು ಬಹಳ ಉತ್ತಮವಾಗಿದೆ. ವಿದ್ಯಾರ್ಥಿಗಳು ದಿನದ ಹೆಚ್ಚು ಸಮಯವನ್ನು ಆನ್ಲೈನ್ ನಲ್ಲಿ ಕಳೆದು ಅಪಾಯಕ್ಕೆ ಸಿಲುಕದೆ ಈ ಮಣ್ಣಿನ ಸಂಸ್ಕೃತಿಯನ್ನು ಜೀವಂತ ವಾಗಿಡುವ ನಿಟ್ಟಿನಲ್ಲಿ ಉತ್ಸುಕರಾಗಬೇಕೆಂದರು.
ಹಿರಿಯ ರಂಗ ನಿರ್ದೇಶಕ ಜಗನ್ ಪವಾರ್ ಜನಪದದ ಉಳಿವಿಗೆ ಈ ಕಾರ್ಯಕ್ರಮವು ಒಂದು ಉತ್ತಮ ವೇದಿಕೆಯಾಗಿದೆ. ಸ್ಪರ್ಧೆಯಲ್ಲಿ ಭಾಗವಹಿಸಿರುವ ಎಲ್ಲಾ ತಂಡಗಳು ವಿಜೇತ ಖಂಡಗಳೆಂದು ಪರಿಗಣಿಸಿಕೊಂಡು, ಸೋಲನ್ನು ಗೆಲುವಾಗಿ ಸ್ವೀಕರಿಸಿ, ಮುಂದಿನ ದಿನಗಳಲ್ಲಿ ಮತ್ತಷ್ಟು ಸಾಧನೆಯನ್ನು ಮಾಡುವ ಮೂಲಕ ಮತ್ತೆ ಎದ್ದು ನಿಲ್ಲಬೇಕು ಯುವ ಪೀಳಿಗೆಯಿಂದ ಮಾತ್ರವೇ ಜನಪದ ಸಂಸ್ಕೃತಿಯು ಉಳಿಯಲು ಸಾಧ್ಯ ಎಂದರು.
ವಿದ್ಯಾರ್ಥಿ ಸ್ನೇಹಿ ಪ್ರಾಂಶುಪಾಲ ಡಾ. ಜಗನ್ನಾಥ್ ಬಾಳ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದರು. ಯುವ ಪೀಳಿಗೆಗೆ ಜನಪದ ಸಂಸ್ಕೃತಿಯ ಅರಿವನ್ನು ಮೂಡಿಸುವ ನಿಟ್ಟಿನಲ್ಲಿ ಸರಕಾರಿ ಪದವಿ ಕಾಲೇಜುಗಳ ವಿದ್ಯಾರ್ಥಿಗಳನ್ನು ಒಂದೆಡೆ ಸೇರಿಸಿ ಈ ಮೂಲಕ ಅವರಲ್ಲಿರುವ ಪ್ರತಿಭೆಯನ್ನು ಗುರುತಿಸುವ ಕೆಲಸವನ್ನು ನಮ್ಮ ಕಾಲೇಜಿನಲ್ಲಿ ನಿರಂತರ ಗೊಳಿಸಲಾಗಿದೆ. ನನ್ನ ನಿವೃತ್ತಿಯ ಬಳಿಕವು 'ಪೊರ್ಲು' ಎಂಬ ಜನಪದ ಸಂಸ್ಕೃತಿ ಇದೇ ರೀತಿಯಲ್ಲಿ ಮುಂದುವರಿಯಲಿ ಎಂದು ತಮ್ಮ ಆಶಯವನ್ನು ವ್ಯಕ್ತಪಡಿಸಿದರು.
ಚುಟುಕು ಸಾಹಿತಿ ಅನಿತಾ ಕೆ.ಯವರು ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಉಪಸ್ಥಿತಿದ್ದರು.
ಜಿಲ್ಲೆಯ ವಿವಿಧ ಪದವಿ ಕಾಲೇಜುಗಳಿಂದ ಬಂದಿದ್ದಂತಹ ಸುಮಾರು 12 ತಂಡಗಳು ಸಾಂಸ್ಕೃತಿಕ ಜನಪದ ವೈವಿಧ್ಯತೆಗಳನ್ನು ವೇದಿಕೆಯಲ್ಲಿ ಪ್ರದರ್ಶಿಸಿದವು.
ದಿನಪೂರ್ತಿ ನಡೆದ ಪೊರ್ಲು ಜನಪದ ಸಂಭ್ರಮದ ಕಾರ್ಯಕ್ರಮಕ್ಕೆ ತೀರ್ಪುಗಾರರಾಗಿ ಆಗಮಿಸಿದ್ದ ಡಾ. ರಾಜೇಶ್ ಕದ್ರಿ, ಜಗನ್ ಪವಾರ್, ಅನಿತಾ ಕೆ ಸೇರಿದಂತೆ ಕರಾವಳಿ ಜನಪದ ಉತ್ಸವದ ಸಂಚಾಲಕಿ ಶ್ರೀಮತಿ ರೇಖಾ .ಕೆ, ಲಲಿತಗಳ ಸಂಘದ ಕಾರ್ಯದರ್ಶಿ ಕುಮಾರಿ ರಶ್ಮೀ, ಕುಮಾರಿ ಲಕ್ಷ, ತುಳು ಚಾವಡಿ ಕಾರ್ಯದರ್ಶಿ ಕುಮಾರಿ ದಿಶಾ ಸೇರಿದಂತೆ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಹಾಗೂ ಕಾರ್ಯಕ್ರಮದ ಪ್ರೋತ್ಸಾಹಕರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಕೊನೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜು, ವಾಮದಪದವು ತಂಡವು ಪ್ರಥಮ,
ಸರಕಾರಿ ಪ್ರಥಮ ದರ್ಜೆ ಕಾಲೇಜು ಕಾರ್ ಸ್ಟ್ರೀಟ್ ದ್ವಿತೀಯ ಹಾಗೂ ಸರಕಾರಿ ಪ್ರಥಮ ದರ್ಜೆ ಕಾಲೇಜು, ಬೆಳ್ತಂಗಡಿ ತೃತೀಯ ಸ್ಥಾನವನ್ನು ಪಡೆಯಿತು.
ಇದಲ್ಲದೆ ಉತ್ತಮ ಸಾಧನೆಯನ್ನು ತೋರಿದ ಪ್ರತಿಭೆಗಳಿಗೆ ವೈಯುಕ್ತಿಕ ವಿಭಾಗದಲ್ಲಿ ಬಹುಮಾನವನ್ನು ನೀಡಿ ಪ್ರೋತ್ಸಾಹಿಸಲಾಯಿತು.
ಕಾಲೇಜು ಲಲಿತ ಕಲಾಸಂಘ ಮತ್ತು ತುಳು ಚಾವಡಿಯ ಸಂಘಟಕರಾಗಿರುವ ಡಾ. ಚಂದ್ರಶೇಖರ್ .ಕೆ ಕಾರ್ಯಕ್ರಮದ ಉದ್ದೇಶ ಮತ್ತು ಸಫಲತೆಯ ಬಗ್ಗೆ ಮನ ಸೆಳೆಯುವಂತೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಧನ್ಯಾಶ್ರೀ ಕಾರ್ಯಕ್ರಮ ನಿರೂಪಿಸಿದರು. ವರ್ಷಿತ ವಂದಿಸಿದರು.