
ನಾಳೆಯಿಂದ ಸಿಇಟಿ: 22525 ವಿದ್ಯಾರ್ಥಿಗಳು
ಮಂಗಳೂರು: ವೃತ್ತಿಪರ ಶಿಕ್ಷಣ ಪ್ರವೇಶ ಪಡೆಯಲು ಸಾಮಾನ್ಯ ಪ್ರವೇಶ ಪರೀಕ್ಷೆ ಬುಧವಾರ ಪ್ರಾರಂಭವಾಗಲಿದ್ದು, ದ.ಕ ಜಿಲ್ಲೆಯಲ್ಲಿ 22525 ಅಭ್ಯರ್ಥಿಗಳು ಸಿಇಟಿಗೆ ನೋಂದಣಿ ಮಾಡಿದ್ದಾರೆ.
ಜಿಲ್ಲೆಯಲ್ಲಿ 43 ಪರೀಕ್ಷಾ ಕೇಂದ್ರಗಳಿವೆ. ಮಂಗಳೂರು-27, ಮೂಡಬಿದ್ರೆ-8, ಪುತ್ತೂರು-4, ಹಾಗೂ ಬೆಳ್ತಂಗಡಿ ತಾಲೂಕಿನಲ್ಲಿ 4 ಕೇಂದ್ರಗಳಿವೆ.
ಏ.16ರಂದು ಬೆಳಿಗ್ಗೆ-ಭೌತಶಾಸ್ತ್ರ, ಮಧ್ಯಾಹ್ನ-ರಸಾಯನಶಾಸ್ತ್ರ, ಏಪ್ರಿಲ್ 17 ರಂದು ಬೆಳಿಗ್ಗೆ-ಗಣಿತ ಹಾಗೂ ಮಧ್ಯಾಹ್ನ ಜೀವಶಾಸ್ತ್ರ ವಿಷಯಗಳ ಪರೀಕ್ಷೆ ನಡೆಯಲಿದೆ. ಪರೀಕ್ಷೆ ಕೊಠಡಿಗಳಲ್ಲಿ ಕ್ಯಾಮೆರಾ ಅಳವಡಿಸಲಾಗಿದ್ದು, ಜಿಲ್ಲಾ ಪಂಚಾಯತ್ನಲ್ಲಿ ವೆಬ್ ಕಾಸ್ಟಿಂಗ್ ವ್ಯವಸ್ಥೆ ಏರ್ಪಡಿಸಲಾಗಿದೆ.
ಕನ್ನಡ ಪರೀಕ್ಷೆ..
ಸಿಇಟಿ ಪರೀಕ್ಷೆಗೆ ನೋಂದಣಿ ಮಾಡಿರುವ ಹೊರನಾಡ ಕನ್ನಡಿಗರಿಗೆ ಮಂಗಳವಾರ ಕನ್ನಡ ಭಾಷೆ ಪರೀಕ್ಷೆ ಮಂಗಳೂರಿನಲ್ಲಿ ನಡೆಯಿತು. ಒಟ್ಟು 655 ವಿದ್ಯಾರ್ಥಿಗಳಲ್ಲಿ 549 ಮಂದಿ ಹಾಜರಾಗಿದ್ದು, 106 ಮಂದಿ ಗೈರು ಹಾಜರಾಗಿದ್ದಾರೆ.
ನಿಷೇಧಾಜ್ಞೆ ಜಾರಿ..
ಏ.16 ಮತ್ತು 17 ರಂದು ಸಿಇಟಿ ವೃತ್ತಿಪರ ಕೋರ್ಸ್ ಪರೀಕ್ಷೆಗಳು ನಗರದ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯ 35 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದ್ದು, ಪರೀಕ್ಷಾ ಕೇಂದ್ರದಲ್ಲಿ ಕಾನೂನು ಬಾಹಿರ ಚಟುವಟಿಕೆ, ಅಹಿತಕರ ಘಟನೆಗಳು ನಡೆಯದಂತೆ ಪರೀಕ್ಷೆಗಳನ್ನು ಶಾಂತ ವಾತಾವರಣದಲ್ಲಿ ನಡೆಸಲು ಪರೀಕ್ಷಾ ಕೇಂದ್ರದ 200 ಮೀಟರ್ ವ್ಯಾಪ್ತಿ ಪ್ರದೇಶದ ಸುತ್ತಲೂ ನಿಷೇಧಿತ ಪ್ರದೇಶವೆಂದು ಘೋಷಿಸಿ ನಿಷೇಧಾಜ್ಞೆ ಜಾರಿಗೊಳಿಸಿ ಉಪ ಪೋಲಿಸ್ ಆಯುಕ್ತ ಸಿದ್ದಾರ್ಥ್ ಗೋಯಲ್ ಆದೇಶಿಸಿದ್ದಾರೆ.
ಮುಕ್ತ ಶಾಲೆ ಪರೀಕ್ಷೆ..:
ಕರ್ನಾಟಕ ಮುಕ್ತ ಶಾಲೆ (ಕೆ.ಒ.ಎಸ್.) ಪರೀಕ್ಷೆಗಳು ಏ.೨೫ ರವರೆಗೆ ನಗರದ ಕೊಡಿಯಾಲ್ಬೈಲ್ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಲ್ಲಿ(ಡಯಟ್) ನಡೆಯಲಿದೆ. ಪರೀಕ್ಷಾ ಕೇಂದ್ರಗಳಲ್ಲಿ ಯಾವುದೇ ಕಾನೂನು ಬಾಹಿರ ಚಟುವಟಿಕೆ, ಅಹಿತಕರ ಘಟನೆಗಳು ನಡೆಯದಂತೆ ಮತ್ತು ಪರೀಕ್ಷೆಗಳನ್ನು ಸುಸೂತ್ರವಾಗಿ ಹಾಗೂ ದೋಷರಹಿತವಾಗಿ ನಡೆಸುವ ನಿಟ್ಟಿನಲ್ಲಿ ಪರೀಕ್ಷಾ ಕೇಂದ್ರಗಳ 200 ಮೀಟರ್ ವ್ಯಾಪ್ತಿ ಪ್ರದೇಶದ ಸುತ್ತಲೂ ನಿಷೇಧಿತ ಪ್ರದೇಶವೆಂದು ಘೋಷಿಸಿ ನಿಷೇಧಾಜ್ಞೆ ಜಾರಿಗೊಳಿಸಿ ಉಪ ಪೋಲಿಸ್ ಆಯುಕ್ತ ಸಿದ್ದಾರ್ಥ್ ಗೋಯಲ್ ಆದೇಶಿಸಿದ್ದಾರೆ.