ನಗರದಲ್ಲಿ ಮೆರಿಟೈಮ್ ವಿ.ವಿ.: ಕೇಂದ್ರಕ್ಕೆ ವರದಿ

ನಗರದಲ್ಲಿ ಮೆರಿಟೈಮ್ ವಿ.ವಿ.: ಕೇಂದ್ರಕ್ಕೆ ವರದಿ


ಮಂಗಳೂರು: ಮುಂಬರುವ ದಿನಗಳಲ್ಲಿ ಮಂಗಳೂರಿನಲ್ಲಿ ಕೇಂದ್ರೀಯ ಮೆರಿಟೈಮ್ ಯುನಿವರ್ಸಿಟಿ ಸ್ಥಾಪನೆಗೆ ಸಂಬಂಧಿಸಿ ಯೋಜನಾ ವರದಿಯನ್ನು ಈಗಾಗಲೇ ಸಿದ್ದಪಡಿಸಲಾಗಿದೆ. ಶೀಘ್ರದಲ್ಲಿ ಈ ವರದಿಯನ್ನು ಕೇಂದ್ರ ಶಿಪ್ಪಿಂಗ್ ಸಚಿವಾಲಯಕ್ಕೆ ಸಲ್ಲಿಸಲಾಗುವುದು ಎಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ಹೇಳಿದರು.

ನವಮಂಗಳೂರು ಬಂದರು ಪ್ರಾಧಿಕಾರ (ಎನ್‌ಎಂಪಿಎ) ವತಿಯಿಂದ ಮಂಗಳೂರಿನಲ್ಲಿ ಶುಕ್ರವಾರ ಆಯೋಜಿಸಲಾದ “ಮೆರಿಟೈಮ್ ಅಡ್ವರ್ಸಿಟೀಸ್’ ಎಂಬ ವಿಷಯದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಕೇಂದ್ರೀಯ ಮೆರಿಟೈಮ್ ಯುನಿವರ್ಸಿಟಿ ಸ್ಥಾಪನಗೆ ಮಂಗಳೂರಿಗಿಂತ ಬೇರೆ ಪ್ರಸಕ್ತ ಜಾಗ ಇಲ್ಲ. ವೀರರಾಣಿ ಅಬ್ಬಕ್ಕ ಹೆಸರಿನಲ್ಲಿ ವಿವಿ ಸ್ಥಾಪನೆಯ ವರದಿಯನ್ನು ಶೀಘ್ರ ಸಚಿವಾಲಯಕ್ಕೆ ಸಲ್ಲಿಸಲಾಗುವುದು ಎಂದರು.

ಆರ್ಥಿಕತೆಯನ್ನು ಹೆಚ್ಚಿಸಲು ಮಂಗಳೂರಿನಲ್ಲಿ ಹಡಗು ನಿರ್ಮಾಣ ಮತ್ತು ಹಡಗು ದುರಸ್ತಿ ಕೈಗಾರಿಕೆಗಳ ಸಾಧ್ಯತೆಯನ್ನು ಪರಿಶೀಲಿಸುವ ಅಗತ್ಯವಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಭಾರತದಲ್ಲಿ ಬಂದರು ನೇತೃತ್ವದ ಅಭಿವೃದ್ಧಿಯ ಬಗ್ಗೆ ಒತ್ತು ನೀಡುತ್ತಿದ್ದಾರೆ. ಇತ್ತೀಚಿನ ಕೇಂದ್ರ ಬಜೆಟ್ ಭಾರತದ ಸಾಗರ ವಲಯವನ್ನು ಬೆಂಬಲಿಸಲು ಹಡಗು ನಿರ್ಮಾಣ ಕ್ಲಸ್ಟರ್ ಮತ್ತು ಸಾಗರ ಅಭಿವೃದ್ಧಿ ನಿಧಿಯನ್ನು ಘೋಷಿಸಲಾಗಿದೆ. ಮಂಗಳೂರಿನಲ್ಲಿ ಈ ಸಾಧ್ಯತೆಗಳಿವೆ. ವಿಕಸಿತ ಭಾರತದ ಕನಸನ್ನು ನನಸಾಗಿಸುವಲ್ಲಿ ಬಂದರು ಮತ್ತು ಕಡಲ ಕೈಗಾರಿಕೆಗಳು ದೊಡ್ಡ ಪಾತ್ರ ವಹಿಸುತ್ತವೆ ಎಂದು  ಹೇಳಿದರು.

ಶಿರಾಡಿ ಘಾಟ್ ಮೂಲಕ ಮಂಗಳೂರು-ಬೆಂಗಳೂರು ಮಾರ್ಗದಲ್ಲಿ ರಾಷ್ಟ್ರೀಯ ಹೆದ್ದಾರಿ ಮತ್ತು ರೈಲು ಮಾರ್ಗದ ಅಭಿವೃದ್ಧಿಗಾಗಿ ಜಂಟಿಯಾಗಿ ವಿವರವಾದ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸುವಂತೆ ಈಗಾಗಲೇ ಎಲ್ಲಾ ಸಿದ್ದತೆಗಳನ್ನು ಇಲಾಖಾ ವತಿಯಿಂದ ನಡೆಸಲಾಗುತ್ತಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಎನ್‌ಎಂಪಿಎ ಅಧ್ಯಕ್ಷ ವೆಂಕಟರಮಣ ಅಕ್ಕರಾಜು  ‘ಸರಿಯಾದ ಫಿಟ್‌ನೆಸ್ ಪ್ರಮಾಣೀಕರಣವಿಲ್ಲದ ಹಲವಾರು ಹಡಗುಗಳು ವರ್ಷವಿಡೀ ಸಂಚರಿಸುತ್ತವೆ ಮತ್ತು ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಲ್ಲಿ ಸಮಸ್ಯೆಗಳನ್ನು ಎದುರಿಸುತ್ತವೆ. ಅಂತಹ ಹಡಗುಗಳು ಭಾರತೀಯ ಬಂದರುಗಳನ್ನು ಪ್ರವೇಶಿಸಿದಾಗ, ಅವು ನಮ್ಮ ವ್ಯವಸ್ಥೆಗೆ ತೊಂದರೆ ಉಂಟು ಮಾಡುತ್ತವೆ. ಅಂತಹ ಹಡಗುಗಳು ಮುಳುಗಿದಾಗ ಪರಿಸರ ಸಹಿತ ವಿವಿಧ ರೀತಿಯ ನಷ್ಟಕ್ಕೆ ಕಾರಣವಾಗುತ್ತದೆ. ಹೀಗಾಗಿ ಅಕ್ರಮ ಹಡಗುಗಳ ಬಗ್ಗೆ ವಿಶೇಷ ಗಮನವಿರಿಸಬೇಕಾಗಿದೆ. ಯಾವುದೇ ನೌಕೆಗಳು ಸಂಕಷ್ಟದ ಪರಿಸ್ಥಿತಿಯನ್ನು ಗುರುತಿಸಿದಾಗ, ಆ ಹಡಗು ಅಂತರರಾಷ್ಟ್ರೀಯ ವಿಮೆಯನ್ನು ಹೊಂದಿದೆಯೇ ಮತ್ತು ಉತ್ತಮ ಸ್ಥಿತಿಯಲ್ಲಿದೆಯೇ? ಎಂದು ಸರಿಯಾಗಿ ಪರಿಶೀಲಿಸಬೇಕು’ ಎಂದರು.

ಎನ್‌ಎಂಪಿಎ ಉಪಾಧ್ಯಕ್ಷೆ ಎಸ್.ಶಾಂತಿ, ಡಿ.ಜಿ.ಶಿಪ್ಪಿಂಗ್ನ ಪ್ರಮುಖರಾದ ಕ್ಯಾ. ಎಲ್.ಕೆ.ಪಾಂಡ, ಕ್ಯಾ. ಎಸ್.ಐ. ಅಬುಲ್ ಕಲಾಂ ಅಜಾದ್, ಚೀಫ್ ವಿಜಿಲೆನ್ಸ್ ಆಫೀಸರ್ ಪದ್ಮನಾಭ ಆಚಾರ್ ಕೆ. ಉಪಸ್ಥಿತರಿದ್ದರು. ಉಪ ಸಂರಕ್ಷಣಾಧಿಕಾರಿ ಕ್ಯಾ. ಮನೋಜ್ ಜೋಶಿ ಸ್ವಾಗತಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article