
ಇ-ಬ್ಯಾಂಕ್ ಖಾತರಿ ಪರಿಚಯಿಸಿದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್
Wednesday, April 2, 2025
ಮಂಗಳೂರು: ದೇಶದ ಪ್ರಮುಖ ಗ್ರಾಮೀಣ ಬ್ಯಾಂಕುಗಳ ಸಾಲಿನಲ್ಲಿರುವ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕು ತನ್ನ ಗ್ರಾಹಕರಿಗೆ ಡಿಜಿಟಲ್ ಮತ್ತು ಆನ್ಲೈನ್ ಬ್ಯಾಂಕಿಂಗ್ ಸೇವೆಗಳನ್ನು ಪರಿಚಯಿಸುವಲ್ಲಿ ಮಂಚೂಣಿಯಲ್ಲಿದ್ದು, ಇದೀಗ ಬ್ಯಾಂಕು ಸರ್ಕಾರದ ಮಾಹಿತಿ ಉಪಯುಕ್ತತೆ ಪೂರೈಕೆದಾರ ಸಂಸ್ಥೆ ರಾಷ್ಟ್ರೀಯ ಆಡಳಿತ ಸೇವೆಗಳ ನಿಗಮ (ಎನ್ಇಎಸ್ಎಲ್) ಜೊತೆಗೆ ಸೇರಿ ಇ-ಬ್ಯಾಂಕ್ ಗ್ಯಾರಂಟಿ (ಇ-ಬಿಜಿ) ಸೇವೆಯನ್ನು ಅಧಿಕೃತವಾಗಿ ಆರಂಭಿಸಿದೆ.
ಬ್ಯಾಂಕ್ ಅಧ್ಯಕ್ಷ ಶ್ರೀಕಾಂತ ಎಂ. ಭಂಡಿವಾಡ ಇಂದು ಈ ಯೋಜನೆಗೆ ಚಾಲನೆ ನೀಡಿದರು. ಬಳಿಕ ಅವರು ಮಾತನಾಡಿ, ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕು ಇ-ಬ್ಯಾಂಕ್ ಗ್ಯಾರಂಟಿ (ಇ-ಬಿಜಿ) ಸೇವೆಯನ್ನು ಪ್ರಾರಂಭಿಸಿದ ದೆಶದ ಮೊದಲ ಗ್ರಾಮಿಣ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಹೇಳಿದರು.
ಇ-ಬ್ಯಾಂಕ್ ಗ್ಯಾರಂಟಿಯಿಂದ ಇನ್ನು ಮುಂದೆ ಇ-ಸಹಿ ಹಾಗೂ ಇ-ಸ್ಟ್ಯಾಂಪ್ಗಳ ಬಳಕೆಯಾಗಲಿದೆ. ಇದರಿಂದ ಇ-ಬ್ಯಾಂಕ್ ಗ್ಯಾರಂಟಿ ಸೌಲಭ್ಯ ಪ್ರಕ್ರಿಯೆ ಇನ್ನಷ್ಟು ಸರಳವಾಗಲಿದ್ದು, ಈ ಸೌಲಭ್ಯದ ಮೂಲಕ ಗ್ಯಾರಂಟಿ ನಿಡುವ ಪ್ರಕ್ರಿಯೆ ಕೆಲವೇ ನಿಮಿಗಳಲ್ಲಿ ಮುಗಿಯಲಿದೆ ಮತ್ತು ಇ-ಬ್ಯಾಂಕ್ ಗ್ಯಾರಂಟಿ ಬಿಡುಗಡೆ ಮಾಡಿದ ತಕ್ಷಣವೇ ಫಲಾನುಭವಿಗಳು ಎನ್ಇಎಸ್ಎಲ್ ಪೋರ್ಟಲ್ನಲ್ಲಿ ಅದನ್ನು ನೋಡಬಹುದಾಗಿದೆ. ಈ ವ್ಯವಸ್ಥೆಯ ಅನುಷ್ಠಾನದಿಂದ ಅರೆ ಪಟ್ಟಣ ಮತ್ತು ಗ್ರಾಮೀಣ ಭಾಗದ ಗ್ರಾಹಕರಿಗೆ ಹೆಚ್ಚಿನ ಅನುಕೂಲವಾಗಲಿದೆಯಲ್ಲದೆ ಬ್ಯಾಂಕ್ ಖಾತರಿ ವಿಷಯದಲ್ಲಿ ಪಾರದರ್ಶಕತೆ ಹೆಚ್ಚಲಿದೆ ಎಂದು ಭಂಡಿವಾಡ ವಿವರಿಸಿದರು.
2024-25ರ ಆರ್ಥಿಕ ವರ್ಷ ಮುಗಿದಿದ್ದು ಬ್ಯಾಂಕು ಪ್ರಮುಖ ಪ್ಯಾರಾಮೀಟರಗಳಲ್ಲಿ ಉತ್ತಮ ಸಾಧನೆ ತೋರುವ ಭರವಸೆಯನ್ನು ವ್ಯಕ್ತಪಡಿಸಿದರು. ಬ್ಯಾಂಕು 2041 ಕೋಟಿ ರೂ. ಠೇವಣಿ ಮತ್ತು 17573 ಕೋಟಿ ರೂ. ಮಂಗಡ ಮಟ್ಟವನ್ನು ತಲುಪುವ ಮೂಲಕ ಶೇ.7.32 ಪ್ರಗತಿದರದ್ಲಲಿ 38514 ಕೋಟಿ ವಹಿವಾಟು ದಾಖಲಿಸಿದೆ ಎಂದರು.
ಈ ಸಂದರ್ಭದಲ್ಲಿ ಬ್ಯಾಂಕಿನ ಮಹಾ ಪ್ರಬಂಧಕರು ಮತ್ತು ಇನ್ನಿತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.