ಕೋಟೆಕಾರ್ ಬೀದಿಬದಿ ವ್ಯಾಪಾರಸ್ಥರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಸಿಐಟಿಯು ಒತ್ತಾಯ

ಕೋಟೆಕಾರ್ ಬೀದಿಬದಿ ವ್ಯಾಪಾರಸ್ಥರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಸಿಐಟಿಯು ಒತ್ತಾಯ


ಮಂಗಳೂರು: ಕೋಟೆಕಾರು ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿರುವ ನೂರಾರು ಸಂಖ್ಯೆಯ ಬೀದಿಬದಿ ವ್ಯಾಪಾರಸ್ಥರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿಕೊಡಬೇಕೆಂದು ಸಿಐಟಿಯು ಸಂಯೋಜಿತ ದ.ಕ. ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘವು ಕೋಟೆಕಾರ್ ಪಟ್ಟಣ ಪಂಚಾಯತ್ ಆಡಳಿತವನ್ನು ಒತ್ತಾಯಿಸಿದೆ.


ಈ ಬಗ್ಗೆ ಇಂದು ಸಂಘದ ಉನ್ನತ ಮಟ್ಟದ ನಿಯೋಗವೊಂದು ಪಂಚಾಯತ್‌ನ ಮುಖ್ಯಾಧಿಕಾರಿಗಳನ್ನು ಭೇಟಿಯಾಗಿ ಮನವಿಯನ್ನು ಸಲ್ಲಿಸಲಾಯಿತು.


ಕೋಟೆಕಾರ್ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ನೂರಾರು ಸಂಖ್ಯೆಯ ಬೀದಿಬದಿ ವ್ಯಾಪಾರಸ್ಥರು ತಮ್ಮಪಾಡಿಗೆ ಬದುಕು ಕಟ್ಟಿಕೊಂಡು ದಿನಕಳೆಯುತ್ತಿದ್ದಾರೆ. ಅದರಲ್ಲಿ ಕೋಟೆಕಾರ್ ಬೀರಿ ಜಂಕ್ಷನ್ ಬಳಿ ಕಳೆದ ಹಲವಾರು ವರ್ಷಗಳಿಂದ ದೈನಂದಿನ ಬದುಕಿಗಾಗಿ ಬಡ ಬೀದಿಬದಿ ವ್ಯಾಪಾರಸ್ಥರು ವ್ಯಾಪಾರ ಮಾಡಿಕೊಂಡು ಬರುತ್ತಿದ್ದು, ಅವರಿಗೆ ಕೋಟೆಕಾರ್ ಪಟ್ಟಣ ಪಂಚಾಯತ್ ವತಿಯಿಂದ ಬೀದಿಬದಿ ವ್ಯಾಪಾರಸ್ಥರ ಸಂರಕ್ಷಣೆ ಮತ್ತು ನಿಯಂತ್ರಣ ಕಾಯಿದೆ 2014 ಮತ್ತು ಕರ್ನಾಟಕ ಬೀದಿ ವ್ಯಾಪಾರ ಅಧಿನಿಯಮದಂತೆ ಐಡಿ ಕಾರ್ಡ್ ಮತ್ತು ಪ್ರಮಾಣ ಪತ್ರ ನೀಡಲಾಗಿರುತ್ತದೆ.ಆದರೆ ಅವರು ವ್ಯಾಪಾರ ಮಾಡುವ ಪಕ್ಕದಲ್ಲೇ ನೂತನ ಕಟ್ಟಡವೊಂದು ಉದ್ಘಾಟನೆಗೊಂಡಿದ್ದು, ಇದರಿಂದಾಗಿ ಬಡ ವ್ಯಾಪಾರಸ್ಥರಿಗೆ ವ್ಯಾಪಾರ ಮಾಡದಂತೆ ತಡೆ ಒಡ್ಡಲಾಗಿದೆ. ನೂತನ ಕಟ್ಟಡದ ನೆಲಮಾಳಿಗೆಯಲ್ಲಿ ಬಾಡಿಗೆ ಆಧಾರಿತ ವ್ಯಾಪಾರ ಮಾಡಲೂ ಕೂಡ ಅಸಾಧ್ಯವಾಗಿದೆ ಎಂದು ಸಂಘವು ತಿಳಿಸಿದೆ.


ಈ ಹಿನ್ನೆಲೆಯಲ್ಲಿ ಬಡ ಬೀದಿಬದಿ ವ್ಯಾಪಾರಸ್ಥರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಸ್ಥಳೀಯ ಪಟ್ಟಣ ಪಂಚಾಯತ್ ಸೂಕ್ತ ವ್ಯವಸ್ಥೆ ಮಾಡಿಕೊಡಬೇಕು, ಕೋಟೆಕಾರ್ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿರುವ ಎಲ್ಲಾ ಬೀದಿಬದಿ ವ್ಯಾಪಾರಸ್ಥರ ಸರ್ವೇ ನಡೆಸಿ ಪಟ್ಟಿ ರೆಡಿ ಮಾಡಬೇಕು, ಅವರೆಲ್ಲರಿಗೂ ಸರಕಾರದ ಗುರುತು ಚೀಟಿ, ಸಾಲ ಸೌಲಭ್ಯ ಸೇರಿದಂತೆ ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಕೊಡಬೇಕೆಂದು ಸಂಘವು ಪಟ್ಟಣ ಪಂಚಾಯತ್ ಆಡಳಿತವನ್ನು ಆಗ್ರಹಿಸಿದೆ.

ನಿಯೋಗದಲ್ಲಿ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಸುನಿಲ್ ಕುಮಾರ್ ಬಜಾಲ್, ಸಂಘದ ತಲಪಾಡಿ ವಲಯ ಕಾರ್ಯದರ್ಶಿ ವಿನಾಯಕ ಶೆಣೈ, ಸಂಘದ ತಲಪಾಡಿ ವಲಯ ಮುಖಂಡರಾದ ಕಲಂದರ್, ಸಲೀಂ, ನವಾಜ್, ಮಹಮ್ಮದ್ ಹಸನ್, ರವಿರಾಜ್, ಬಶೀರ್, ಇಬ್ರಾಹಿಂ, ಹುಸೈನಾರ್, ಸುಬ್ರಹ್ಮಣ್ಯ, ಶಂಭು, ಇಸಾಕ್, ಶಾಂತಿ ಮತ್ತಿತರರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article