ಡೀಸೆಲ್ ದರ, ಟೋಲ್ ದರಗಳ ಏರಿಕೆಗಳ ಜನಸಾಮಾನ್ಯರ ಮೇಲೆ ಹೊರೆ: ಕೈ ಬಿಡಲು ಸಿಪಿಐ(ಎಂ) ಆಗ್ರಹ

ಡೀಸೆಲ್ ದರ, ಟೋಲ್ ದರಗಳ ಏರಿಕೆಗಳ ಜನಸಾಮಾನ್ಯರ ಮೇಲೆ ಹೊರೆ: ಕೈ ಬಿಡಲು ಸಿಪಿಐ(ಎಂ) ಆಗ್ರಹ

ಮಂಗಳೂರು: ರಾಜ್ಯದ ಜನರು ಯುಗಾದಿ ಹಬ್ಬದದ ಮುನ್ನವೇ ಹಾಲಿನ ಬೆಲೆ, ವಿದ್ಯುತ್ ದರ ಮತ್ತು ಕಸ ಸಂಗ್ರಹಣೆ ದರ ಏರಿಕೆಯ ಕಹಿಗಳನ್ನು ಅನುಭವಿಸುತ್ತಿರುವಾಗಲೇ ಏಪ್ರೀಲ್ 1 ರಾತ್ರಿಯಿಂದ ಅನ್ವಯವಾಗುವಂತೆ ರಾಜ್ಯದ ಕಾಂಗ್ರೆಸ್ ಸರ್ಕಾರ ಡೀಸೆಲ್ ದರ ಪ್ರತಿ ಲೀಟರ್‌ಗೆ 2 ರೂ.ನಷ್ಟು ಏರಿಕೆಯಾಗಿ ಮಾಡಿರುವುದು ಹಾಗೂ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಶೇ.4 ರಿಂದ 5 ರಷ್ಟು ಟೋಲ್ ದರಗಳನ್ನು ಏರಿಕೆ ಮಾಡಿರುವುದು ಅತ್ಯಂತ ಜನವಿರೋಧಿ ಕ್ರಮಗಳಾಗಿವೆ. ಈ ಎರಡು ದರ ಏರಿಕೆಗಳನ್ನು ಕೂಡಲೇ ಕೈ ಬಿಡಬೇಕೆಂದು ಭಾರತ ಕಮ್ಯುನಿಸ್ಟ್ ಪಕ್ಷ(ಮಾರ್ಕ್ಸ್ ವಾದಿ) ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಪ್ರಕಟಣೆಯಲ್ಲಿ ಆಗ್ರಹಿಸಿದೆ.

ರಾಜ್ಯ ಸರ್ಕಾರವು ಡೀಸೆಲ್ ಮೇಲಿನ ಮಾರಾಟ ತೆರಿಗೆಯನ್ನು ಶೇ೧೮.೪೪ರಿಂದ ಶೇ.21.77ಕ್ಕೆ ಏರಿಕೆ ಮಾಡಿ, ಅದೇಶಿಸಿದೆ. ಬೆಂಗಳೂರಿನಲ್ಲಿ 89.02 ಇದ್ದ ಡೀಸೆಲ್ ಬೆಲೆ 91.02 ಆಗಲಿದೆ. ಉಳಿದ ಜಿಲ್ಲೆಗಳಲ್ಲಿ ಈಗಿರುವ ದರಕ್ಕೆ ಅನುಗುಣವಾಗಿ ಶೇಕಡಾ 2.73ರಷ್ಟು ಹೆಚ್ಚಳವಾಗಲಿದೆ. ನೆರೆ ರಾಜ್ಯಗಳಿಗೆ ಹೋಲಿಸಿದರೆ ಈಗ ತೆರಿಗೆ ದರ ಏರಿಕೆಯ ನಂತರ ಮಾರಾಟ ಬೆಲೆ ಹೆಚ್ಚಳವಾದರೂ, ನೆರೆಯ ರಾಜ್ಯಗಳಿಗಿಂತ ಕರ್ನಾಟಕ ದಲ್ಲಿಯೇ ಡೀಸೆಲ್ ಬೆಲೆ ಕಡಿಮ ಇರಲಿದೆ’ ಎಂದು ಸರ್ಕಾರದ ಆರ್ಥಿಕ ಇಲಾಖೆ ಬೆಲೆ ಏರಿಕೆಯನ್ನು ಸಮರ್ಥಿಸಿಕೊಂಡಿರುವುದು ಅರ್ಥಹೀನ ಎಂಬುದು ಸಿಪಿಐ(ಎಂ) ಅಭಿಪ್ರಾಯವಾಗಿದೆ.

ಗ್ಯಾರಂಟಿ ಯೋಜನೆಗೆ ಹಣನೀಡುವ ನೆಪದಲ್ಲಿ ರಾಜ್ಯದ ಕಾಂಗ್ರೆಸ್ ಸರ್ಕಾರವು ಜನ ಸಾಮಾನ್ಯರ ಬದುಕಿ ಮೇಲೆ ಬೆಲೆ ಏರಿಕೆಯ ಗದಾ ಪ್ರಹಾರವನ್ನೇ ಹರಿಯಬಿಟ್ಟಿದೆ. ಶಾಸಕರ ಸಂಬಳ ಭತ್ಯೆಗಳನ್ನು ಯಾವ ನಾಚಿಕೆ ಇಲ್ಲದೆ ಹೆಚ್ಚಿಸಿಕೊಂಡ ಕಾಂಗ್ರೆಸ್ ಬಿಜೆಪಿ ಹಾಗೂ ಜನತಾದಳ ಶಾಸಕರು ಜನಸಾಮಾನ್ಯರ ಬದುಕಿಗೆಮಾತ್ರ ಯಾವುದೇ ರಿಯಾಯಿತಿ ನೀಡದಿರುವುದು ಖಂಡನಾರ್ಹವಾಗಿದೆ.

ರಜೆ ದಿನಗಳಲ್ಲಿ ಟೋಲ್ ದರ ಹೆಚ್ಚಳದಿಂದ ಜನರ ಬದುಕು ಮತ್ತಷ್ಟು ದುಸ್ಥರ:

ದೇಶದಾದ್ಯಂತ ರಾಷ್ಟ್ರೀಯ ಹೆದ್ದಾರಿ ಮತ್ತು ಎಕ್ಸ್‌ಪ್ರೆಸ್‌ವೇಗಳಲ್ಲಿ ಟೋಲ್ ದರವನ್ನು ಶೇ.4ರಿಂದ ಶೇ 5ರಷ್ಟು ಹೆಚ್ಚಳ ಮಾಡಿದ್ದು, ಮಂಗಳವಾರದಿಂದಲೇ ಜಾರಿಯಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್‌ಎಚ್‌ಎಐ) ನೀತಿಯು ಜನಸಾಮಾನ್ಯರ ಬದುಕನ್ನು ಮತ್ತಷ್ಟು ದುಸ್ಥರಗೊಳಿಸಿದೆ ಎಂಬುದು ಸಿಪಿಐ(ಎಂ) ಅಭಿಪ್ರಾಯವಾಗಿದೆ.

ದೇಶದ ಕೋಟ್ಯಂತರ ಜನರ ರಜಾಕಾಲದ ಈ ದಿನಗಳಲ್ಲಿ ಪ್ರವಾಸ, ಮದುವೆ ಹಬ್ಬ ಇತ್ಯಾದಿಗಳಲ್ಲಿ ಕುಟುಂಬದ ಸದಸ್ಯರು ಬಂಧುಬಳಗಗಳ ಜತೆ ದೂರ ದೂರ ಪ್ರದೇಶಗಳಿಗೆ ವಾಹನಗಳಲ್ಲಿ ಸಂಚರಿಸುವ ಅನಿವಾರ್ಯತೆಯಲ್ಲಿ ಇದ್ದಾರೆ. ಇಂತಹ ಅವಕಾಶವನ್ನೇ ಬಳಸಿ ಕೇಂದ್ರ ಸರ್ಕಾರ ಜನರ ಬದುಕಿನ ಮೇಲೆ ಮತ್ತಷ್ಟು ಹೊರೆ ಹೊರಿಸಲು ಹೊರಟಿರುವುದು ಅನ್ಯಾಯದ ಪರಮಾವಧಿಯಾಗಿದೆ.

ಈಗಾಗಲೇ ನಿರಂತರವಾಗಿ ಏರುತ್ತಿರುವ ಬೆಲೆಗಳಿಂದಾಗಿ ಮತ್ತು ಮೋದಿ ಸರ್ಕಾರದ ಶ್ರೀಮಂತ ಪರ ನೀತಿಗಳಿಂದಾಗಿ ಈಗಾಗಲೇ ಜನಸಾಮಾನ್ಯರ ಬದುಕು ಸಂಕಷ್ಟಕ್ಕೆ ಸಿಲುಕಿದೆ.

ಜನರ ಬದುಕಿನ ಪ್ರಶ್ನೆ ಬಂದಾಗಲೆಲ್ಲ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಸದಾ ಒಂದೇ ನಾಣ್ಯದ ಎರಡು ಮುಖಗಳು ಎನ್ನುವ ಮಾತುಗಳು ಈ ಡೀಸೆಲ್ ಹಾಗೂ ಟೋಲ್ ದರ ಏರಿಕೆ ವಿಷಯದಲ್ಲಿ ಸಾಭೀತಾಗಿವೆ. ಒಟ್ಟಾರೆ ಎರಡು ಸರ್ಕಾರಗಳ ಈ ನೀತಿಗಳು ಕಾರ್ಪೊರೇಟ್ ವಲಯದವನ್ನು ತುಷ್ಟೀಕರಣಗೊಳಿಸುವ ಹಂಬಲ ಹೊಂದಿವೆ.

ಇಂತಹ ನೀತಿಗಳ ವಿರುದ್ದ ಸಿಪಿಐ(ಎಂ) ತನ್ನ ಹೋರಾಟವನ್ನು ತೀವ್ರಗೊಳಿಸಲು ನಿರ್ಧರಿಸಿದೆ. ಎಂದು ಸಿಪಿಐಎಂ ದ.ಕ. ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಸುನೀಲ್ ಕುಮಾರ್ ಬಜಾಲ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article