
ಬಪ್ಪನಾಡಿನಲ್ಲಿ ತೇರು ಬಿದ್ದ ವಿಚಾರ: ದೈವಗಳು ಆಕ್ರೋಶ, ತಿದ್ದಿಕೊಳ್ಳದಿದ್ರೆ ಮತ್ತಷ್ಟು ಅಪಾಯ, ಎಚ್ಚರಿಕೆ!
ಮಂಗಳೂರು: ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿ ತಾಲೂಕಿನ ಪುರಾಣ ಪ್ರಸಿದ್ಧ ಬಪ್ಪನಾಡು ದುರ್ಗಾಪರಮೇಶ್ವರಿ ದೇವಿಯ ಬ್ರಹ್ಮರಥೋತ್ಸವ ನಡೆಯಿತು. ಈ ವೇಳೆ ತೇರು ಎಳೆಯುತ್ತಿದ್ದ ಸಂದರ್ಭದಲ್ಲಿ ದೇವರನ್ನು ಹೊತ್ತು ಸಾಗುತ್ತಿದ್ದ ಬ್ರಹ್ಮರಥ ಏಕಾಏಕಿ ಜನರಿದ್ದ ಕಡೆ ಮುಗುಚಿ ಬಿದಿತ್ತು. ತೇರಿನ ಒಳಗೆ ಕುಳಿತಿದ್ದ ಅರ್ಚಕರು ಸೇರಿದಂತೆ ಸಾವಿರಾರು ಭಕ್ತರು ಪವಾಡ ಸದೃಶ ಎಂಬಂತೆ ಪಾರಾಗಿದ್ದರು. ಆದರೆ ಇದೀಗ ಈ ಘಟನೆ ಮಾತ್ರ ತುಳುನಾಡಿನ ಕಾರ್ಣಿಕ ದೈವದ ರೋಷಾವೇಷಕ್ಕೆ ಕಾರಣವಾಗಿದೆ. ಎಲ್ಲರನ್ನೂ ಕಾಪಾಡಿದ್ದು ನಾನೇ, ತಿದ್ದಿಕೊಳ್ಳದಿದ್ದರೆ ಇನ್ನಷ್ಟು ಅಪಾಯ ಎದುರಾಗಲಿದೆ ಎಂದು ದೈವ ಎಚ್ಚರಿಕೆ ನೀಡಿದೆ.
ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಳದ ರಥೋತ್ಸವದ ವೇಳೆ ತೇರು ಮುರಿದು ಬಿದ್ದ ಅವಘಡದ ಬಗ್ಗೆ ಸದ್ಯ ಜಾರಂದಾಯ ಮತ್ತು ಬಂಟ ದೈವಗಳಿಂದ ತಂತ್ರಿಗಳ ಎದುರಲ್ಲೇ ಆಕ್ರೋಶ ಹೊರಹಾಕಿವೆ. ಜಾತ್ರೋತ್ಸವದ ಬಳಿಕ ನಡೆದ ನೇಮೋತ್ಸವದ ವೇಳೆ ದೈವ ಆಕ್ರೋಶ ಹೊರಹಾಕಿದ್ದು, ಬಂಟ ದೈವದ ರೋಷಾವೇಶ ಕಂಡು ಭಕ್ತರು ಬೆಚ್ಚಿ ಬಿದಿದ್ದಾರೆ.
ಒಂದು ಜೀವಕ್ಕೂ ಗಾಯ ಆಗೋದಕ್ಕೆ ಬಿಟ್ಟಿಲ್ಲವೆಂದ ದೈವ:
ಒಂದು ಜೀವಕ್ಕೂ ಗಾಯ ಆಗೋದಕ್ಕೆ ಬಿಟ್ಟಿಲ್ಲ ನಾನು. ಎಷ್ಟು ಜೀವಕ್ಕೆ ಹಾನಿ ಆಗುತ್ತಿತ್ತು? ಮುಂದಕ್ಕೆ ಎಲ್ಲವನ್ನೂ ಸರಿ ಮಾಡುತ್ತೇನೆ. ತುಂಬಾ ವಿಷಯಗಳು ಇದೆ. ನನಗಿರುವ ಅಧಿಕಾರ ಬೇರೆ ಯಾವ ದೈವಕ್ಕೂ ಇಲ್ಲ. ಪ್ರಶ್ನಾಚಿಂತನೆ ಹಾಕಲೇಬೇಕಾಗಿದೆ. ಆ ಸಂದರ್ಭದಲ್ಲಿ ನಿಮ್ಮ ನಾಲಗೆಯ ಮೂಲಕ ನಾನು ಮಾತನಾಡುತ್ತೇನೆ ಎಂದು ದೈವ ನುಡಿದಿದೆ.