
ಮಂಗಳೂರು ಕ್ಲಾಕ್ ಟವರ್ನಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ: ವಖ್ಫ್ ತಿದ್ದುಪಡಿ ಮಸೂದೆಗೆ ತೀವ್ರ ವಿರೋಧ
ಮಂಗಳೂರು: ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಶನ್ ಆಫ್ ಇಂಡಿಯಾ (ಎಸ್ಐಓ) ದಕ್ಷಿಣ ಕನ್ನಡ ಜಿಲ್ಲೆ ಘಟಕದ ವತಿಯಿಂದ ಇಂದು ಬೆಳಗ್ಗೆ ಮಂಗಳೂರಿನ ಕ್ಲಾಕ್ ಟವರ್ ಬಳಿ ಇತ್ತೀಚೆಗೆ ಸಂಸತ್ತಿನಿಂದ ಪಾರಿತಗೊಂಡ ವಖ್ಫ್ ತಿದ್ದುಪಡಿ ಮಸೂದೆಯ ವಿರುದ್ಧ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯಲ್ಲಿ ವಿವಿಧ ಸಾಮಾಜಿಕ ಮುಖಂಡರು ಹಾಗೂ ಸಂಘಟನೆಯ ಮುಖಂಡರು ಪಾಲ್ಗೊಂಡು, ಈ ವಿಧೇಯಕವು ಸಂವಿಧಾನ ಪರ ಮೌಲ್ಯಗಳಿಗೆ ವಿರುದ್ಧವಾಗಿದ್ದು, ಅಲ್ಪಸಂಖ್ಯಾತರನ್ನು ಗುರಿಯಾಗಿಸುವುದೆಂದು ಆರೋಪಿಸಿದರು.
ಎಸ್ಐಓ ಕರ್ನಾಟಕ ರಾಜ್ಯ ಕಾರ್ಯದರ್ಶಿ ಅಸಿಫ್ ಡಿ.ಕೆ. ಮಾತನಾಡಿ, ‘ಇದು ಕೇವಲ ಕಾನೂನು ಪ್ರಶ್ನೆಯಲ್ಲ. ಇದು ಮುಸ್ಲಿಮರ ಆಸ್ತಿಗಳ ಮೇಲೆ ಕಣ್ಣಿಟ್ಟು ನಮ್ಮ ಅಸ್ತಿತ್ವದ ಮೇಲೆ ದಾಳಿ ಮಾಡುವ ಪ್ರಯತ್ನ. ವಖ್ಫ್ ಬೋರ್ಡ್ನಲ್ಲಿ ಮುಸ್ಲಿಮೇತರರಿಗೆ ಏನು ಕೆಲಸ? ಮುಸ್ಲಿಮರ ಸಾಂವಿಧಾನಿಕ ಹಕ್ಕನ್ನು ಪಡೆದುಕೊಳ್ಳುವುದಕ್ಕೆ ಎಲ್ಲಾ ಸಂಘಟನೆಗಳನ್ನು ಒಟ್ಟು ಸೇರಿಸಿ ಎಸ್ಐಓ ಪ್ರತಿಭಟನೆಯನ್ನು ಮುಂದುವರಿಸಲಿದೆ’ ಎಂದು ಹೇಳಿದರು.
ಎಸ್ಡಿಪಿಐ ಜಿಲ್ಲಾ ಅಧ್ಯಕ್ಷ ಅನ್ವರ್ ಸಾದತ್ ಮಾತನಾಡಿ, ‘ಈ ಹಿಂದೆ ವಖ್ಫ್ ಕಾನೂನಿಗೆ ತಂದ ತಿದ್ದುಪಡಿಗಳಿಗೆ ಮುಸ್ಲಿಮರು ವಿರೋಧ ವ್ಯಕ್ತಪಡಿಸಿರಲಿಲ್ಲ. ಆದರೆ ಇದೀಗ ಮುಸ್ಲಿಮರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಪ್ರಯತ್ನ ನಡೆಯುತ್ತಿದೆ. ಮಡಿಲ ಮಾಧ್ಯಮಗಳು ಅದಕ್ಕೆ ಬೆಂಬಲ ನೀಡುತ್ತಿದೆ. ಇದು ಮುಸ್ಲಿಂ ಸಮುದಾಯದ ಹಿತಾಸಕ್ತಿಗೆ ವಿರುದ್ಧವಾಗಿದೆ’ ಎಂದರು.
ಮಾಜಿ ಮೇಯರ್ ಅಶ್ರಫ್ ಮಾತನಾಡಿ, ‘ಅಲ್ಪಸಂಖ್ಯಾತರನ್ನು ಗುರಿಯಾಗಿಸುವ ಈ ರೀತಿಯ ಕ್ರಮಗಳು ನಮ್ಮ ಸಂವಿಧಾನಾತ್ಮಕ ಮೌಲ್ಯಗಳಿಗೆ ವಿರುದ್ದವಾಗಿದೆ. ನಾವು ಇದನ್ನು ಒಪ್ಪುವುದಿಲ್ಲ. ಸುಪ್ರೀಂ ಕೋರ್ಟ್ನಲ್ಲಿ ಈಗಾಗಲೇ ಈ ಮಸೂದೆ ವಿರುದ್ಧ ಅರ್ಜಿ ಸಲ್ಲಿಸಲಾಗಿದೆ. ನ್ಯಾಯಕ್ಕಾಗಿ ಹೋರಾಟ ಮುಂದುವರಿಸುತ್ತೇವೆ. ಮಂಗಳೂರಿನಲ್ಲಿ ಇನ್ನೂ ದೊಡ್ಡ ಮಟ್ಟದ ಹೋರಾಟ ಮಾಡುತ್ತೇವೆ’ ಎಂದು ಎಚ್ಚರಿಕೆ ನೀಡಿದರು.
ಯುನಿವೆಫ್ ಕರ್ನಾಟಕದ ಅಧ್ಯಕ್ಷ ರಫಿಉದ್ದೀನ್ ಕುದ್ರೋಳಿ ಅವರು, ‘ನಮ್ಮ ಹೋರಾಟ ಹಿಂದೂ-ಮುಸ್ಲಿಂ ಹೋರಾಟವಲ್ಲ. ನಮ್ಮ ಹೋರಾಟ ಹಿಂದೂಗಳ ವಿರುದ್ಧವಲ್ಲ. ನಮ್ಮ ಹೋರಾಟ ಸಂವಿಧಾನ ನೀಡಿರುವಂತಹ ಹಕ್ಕುಗಳನ್ನು ಪಡೆದುಕೊಳ್ಳುವುದಕ್ಕಾಗಿದೆ. ಈ ಮಸೂದೆ ಮುಸ್ಲಿಮರ ಹಿತಕ್ಕೆ ವಿರುದ್ಧವಾಗಿದೆ. ಇದು ಮುಸ್ಲಿಮರ ಜಮೀನು ಕಬಲಿಸುವ ಯತ್ನವಾಗಿದೆ’ ಎಂದು ಹೇಳಿದರು.
ಇಕ್ರಾ ಅರಬಿಕ್ ಇನ್ಸ್ಟಿಟ್ಯೂಟ್ನ ಪ್ರಾಂಶುಪಾಲ ಫರ್ಹಾನ್ ನದ್ವಿ ಮಾತನಾಡಿ, ‘ನಮ್ಮ ಪೂರ್ವಜರು ಅಲ್ಲಾಹನನ್ನು ಸಂತೃಪ್ತಪಡೆಸಲು, ಮುಸ್ಲಿಮರ ಸಬಲೀಕರಣಕ್ಕಾಗಿ ದಾನ ಮಾಡಿದ ಜಮೀನಾಗಿದೆ ವಖ್ಫ್. ಅಲ್ಲದೆ ಯಾರಿಂದಲೋ ಕಬಲಿಸಿದ ಜಮೀನಲ್ಲ ವಖ್ಫ್. ಯಾರಿಂದಲೋ ಕಬಲಿಸಿದ ಜಮೀನು ವಖ್ಫ್ ಆಗಲು ಸಾಧ್ಯವೂ ಇಲ್ಲ. ಧರ್ದ ಗೋಡೆಯನ್ನು ಬದಿಯಲಿಟ್ಟು ಎಲ್ಲಾ ಭಾರತೀಯರು ನಮ್ಮ ಜೊತೆ ಕೈ ಜೋಡಿಸಬೇಕೆಂದು ನಾವು ಕೇಳುತ್ತೇವೆ. ಇಂದು ಮುಸ್ಲಿಮರು ಗುರಿಯಾಗಿದ್ದರೆ, ನಾಳೆ ಎಲ್ಲಾ ಶೋಷಿತ ದಮನಿತ ವರ್ಗಗಳು ಹೆಜ್ಜೆ ಹೆಜ್ಜೆಯಾಗಿ ಗುರಿಯಾಗುತ್ತವೆ’ ಎಂದರು.
ಸಾಲಿಡಾರಿಟಿ ಯೂಥ್ ಮೂಮೆಂಟ್ನ ಜಿಲ್ಲಾ ಅಧ್ಯಕ್ಷ ಅಸ್ಲಂ ಉಪ್ಪಿನಂಗಡಿ ಮಾತನಾಡಿ, ‘ಈ ವಿಧೇಯಕವು ದೇಶದ ನಿಜವಾದ ಸಮಸ್ಯೆಗಳಿಂದ ಜನರ ಗಮನವನ್ನು ತಿರುಗಿಸಲು ಸರ್ಕಾರದ ಯತ್ನವಾಗಿದೆ. ಅಲ್ಪಸಂಖ್ಯಾತರ ವಿರುದ್ಧ ಸರಕಾರ ಕ್ರಮ ಕೈಗೊಳ್ಳುವುದಾದರೆ ನಾವು ನಮ್ಮ ಹೋರಾಟವನ್ನು ಮುಂದುವರೆಸುತ್ತೇವೆ. ವಿದ್ಯಾರ್ಥಿಗಳು ಮತ್ತು ಯುವಕರು ಬೀದಿಗಿಳಿದರೆ ವಿಜಯವು ಖಂಡಿತ ವಾಗಿದೆ. ನಾವು ಶಾಂತಿಯುತ ಹಾಗೂ ಪ್ರಜಾಪ್ರಭುತ್ವದ ಮಾರ್ಗದಲ್ಲಿ ಈ ಹೋರಾಟವನ್ನು ಮುಂದುವರಿಸುತ್ತೇವೆ’ ಎಂದು ಹೇಳಿದರು.
ಜಮಾಅತೆ ಇಸ್ಲಾಮಿ ಹಿಂದ್ ಮಂಗಳೂರು ನಗರಾಧ್ಯಕ್ಷ ಕೆ.ಎಂ. ಅಶ್ರಫ್ ಮಾತನಾಡಿ, ‘ಬಹುಸಂಸ್ಕೃತಿ ಹೊಂದಿರುವ ದೇಶಗಳಲ್ಲಿ ಕಂಡುಬರುವ ಪ್ರಗತಿ ಏಕಸಂಸ್ಕೃತಿ ದೇಶಗಳಲ್ಲಿಲ್ಲ. ಇಂದಿನ ಸರಕಾರದಲ್ಲಿರುವ ಪಕ್ಷ ಮತ್ತು ಅದರ ಮಾತೃ ಸಂಘಟನೆ ಭಾರತದ ಬಹುಸಂಸ್ಕೃತಿಗೆ ವಿರುದ್ಧವಾಗಿದೆ. ಒಂದು ಸಮುದಾಯವನ್ನು ವೈರಿಗಳಂತೆ ಮಾಡಿ ಅವರನ್ನು ಗುರಿಯಾಗಿಸಿ ಸರಕಾರ ಕಾನೂನು ತರುತ್ತಿವೆ. ಮುಸ್ಲಿಮರಿಗೆ ತಮ್ಮ ಧರ್ಮದನುಸಾರ ನಡೆದುಕೊಳ್ಳುವ ಅಧಿಕಾರವನ್ನು ಸಂವಿಧಾನ ನೀಡಿದೆ. ಈ ವಖ್ಫ್ ಮಸೂದೆಯು ಆ ಅಧಿಕಾರಗಳಿಗೆ ವಿರುದ್ಧವಾಗಿದೆ’ ಎಂದು ಹೇಳಿದರು.