
ಮಳೆ ಸ್ವಾಗತಿಸಲು ಸಿದ್ಧವಾಗದ ರಾಜಕಾಲುವೆಗಳು..: ಒಂದು ಮಳೆ ಬಂದರೂ ಅಸ್ತವ್ಯಸ್ತವಾಗಲಿರುವ ಮಂಗಳೂರಿನ ಜನಜೀವನ
ಮಂಗಳೂರು: ಮಹಾನಗರ ಪಾಲಿಕೆಯು ಇನ್ನೂ ಎಚ್ಚೆತ್ತುಕೊಳ್ಳದ ಕಾರಣ ನಗರದ ರಾಜಾಕಾಲುವೆಗಳು ಮಳೆಯನ್ನು ಸ್ವಾಗತಿಸಲು ಸಿದ್ಧವಾಗಿಲ್ಲ. ನೀರು ಹರಿಯಬೇಕಾಗಿರುವ ಕಾಲುವೆಗಳಲ್ಲಿ ಈಗ ಕಸಕಡ್ಡಿಗಳೇ ತುಂಬಿವೆ. ಪರಿಣಾಮವಾಗಿ ಒಂದು ಮಳೆ ಬಂದರೂ ನಗರದ ಜನಜೀವನ ಅಸ್ತವ್ಯಸ್ತಗೊಳ್ಳುವ ಭೀತಿ ಎದುರಾಗಿದೆ.
ಪ್ರತಿಬಾರಿಯೂ ಇದೇ ಕಥೆ. ಕಳೆದ ವರ್ಷ ಪಾಲಿಕೆಯ ಇಂಥ ದೊಡ್ಡ ನಿರ್ಲಕ್ಷ್ಯಕ್ಕೆ ಬಡ ರಿಕ್ಷಾಚಾಲಕನೋರ್ವ ಬಲಿಯಾಗಿದ್ದ ಘಟನೆ ಇನ್ನೂ ಹಚ್ಚ ಹಸುರಾಗಿದೆ. ಹಾಗಿದ್ದರೂ ಈ ಬಾರಿ ತನ್ನನ್ನು ತಿದ್ದಿಕೊಂಡು ಕಾಲುವೆ ಸ್ವಚ್ಛಗೊಳಿಸಲು ಪಾಲಿಕೆ ಮುಂದಾಗದಿರುವುದು ಆತಂಕದ ಸಂಗತಿ.
ಪ್ರಸ್ತುತ ಪಾಲಿಕೆಗೆ ಆಡಳಿತ ಮಂಡಳಿಯೂ ಇಲ್ಲ. ಮೇಯರ್, ಉಪಮೇಯರ್ ಇಲ್ಲದೆ ಅತಂತ್ರ ಸ್ಥಿತಿಯಲ್ಲಿದೆ. ಏನಿದ್ದರೂ ಅಧಿಕಾರಿಗಳಿಂದಲೇ ಮಳೆಗಾಲಕ್ಕೆ ಸಿದ್ಧತೆ ನಡೆಯಬೇಕಾಗಿದೆ. ಕಾರ್ಪೊರೇಟರ್ಗಳು ಒತ್ತಡ ಹಾಕಿದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ.
ನಗರದ ಪ್ರಮುಖ ರಾಜಕಾಲುವೆಗಳಲ್ಲಿ ಈಗ ನೀರು ಸರಾಗವಾಗಿ ಹರಿಯುವ ಸ್ಥಿತಿ ಇಲ್ಲ. ಒಂದು ಮಳೆ ಬಂದರೂ ಕೃತಕ ನೆರೆಗೆ ಮಂಗಳೂರು ನಗರ ತತ್ತರಿಸಬೇಕಾಗುವುದು ಅನಿವಾರ್ಯ. ಸ್ಮಾರ್ಟ್ ಸಿಟಿ ಹೆಸರಿನ ಹಿರಿಮೆ ಹೊಂದಿರುವ ಮಂಗಳೂರು ಮಳೆಯನ್ನೇ ನಿಭಾಯಿಸುವಲ್ಲಿ ಸೋಲಲಿದೆಯೇ ಎಂಬ ಆತಂಕ ಜನರಲ್ಲಿ ಮೂಡಿದೆ. ಕಾರ್ಪೊರೇಟರ್ಗಳಿಗೆ ಜನರಿಂದ ದೂರು ದುಮ್ಮಾನಗಳು ಬರುತ್ತಲೇ ಇವೆ. ಆದರೆ ಏನೂ ಮಾಡಲಾಗದ ಸ್ಥಿತಿ ಕಾರ್ಪೊರೇಟರ್ಗಳದ್ದಾಗಿದೆ ಎಂದು ಹೇಳಲಾಗುತ್ತಿದೆ.
ಏನಿದ್ದರೂ ಪಾಲಿಕೆ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ಕಾಲುವೆ ದುರಸ್ತಿಗೆ ಮುಂದಾಗಬೇಕಾಗಿದೆ. ಇಲ್ಲವಾದಲ್ಲಿ ಮಳೆಗಾಲದಲ್ಲಿ ಏನು ಅಪಾಯ ಸಂಭವಿಸಿದರೂ ಜನರು ಪಾಲಿಕೆ ಅಧಿಕಾರಿಗಳನ್ನೇ ಹೊಣೆ ಮಾಡುವುದು ಖಚಿತ.