
ಉಜಿರೆ ಎಸ್.ಡಿ.ಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ: ಸಂಧಿವಾತ, ಅಟೋ ಇಮ್ಯೂನ್ ತೊಂದರೆಗಳಿಗೆ ಉಚಿತ ಚಿಕಿತ್ಸಾ ಶಿಬಿರ
ಉಜಿರೆ: ಉಜಿರೆ ಎಸ್.ಡಿ.ಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಹೆಗ್ಗಡೆಯವರ ಆದೇಶದಂತೆ ಮತ್ತು ಡಿ. ಹರ್ಷೇಂದ್ರ ಕುಮಾರ್ ಮಾರ್ಗದರ್ಶನದಲ್ಲಿ,ಹೇಮಾವತಿ ವಿ. ಹೆಗ್ಗಡೆಯವರ ಹುಟ್ಟುಹಬ್ಬದ ಸಂದರ್ಭದಲ್ಲಿ ಆಯೋಜಿಸಲಾಗಿದ್ದ, ಸಂಧಿವಾತ ಮತ್ತು ಅಟೋ ಇಮ್ಯೂನ್ ತೊಂದರೆಗಳಿಗೆ ಉಚಿತ ಚಿಕಿತ್ಸಾ ಶಿಬಿರ ಏ.2ರಂದು ನಡೆಯಿತು.
ಉದ್ಘಾಟಿಸಿದ ಮಂಗಳೂರು ಅತ್ತಾವರ ಕೆಎಂ.ಸಿ ಆಸ್ಪತ್ರೆಯ ಸಂಧಿವಾತ ತಜ್ಞ ಡಾ.ಶಿವರಾಜ್ ಪಡಿಯಾರ್ ದೇಹದ ರೋಗ ನಿರೋಧಕ ಅವ್ಯವಸ್ಥೆಯಿಂದ ಆರೋಗ್ಯಕರ ಅಂಗಾಂಶಗಳ ಮೇಲೆ ಪರಿಣಾಮ ಬೀಳುತ್ತದೆ. ಇದರಿಂದ ಆಟೋಇಮ್ಯೂನ್ ಕಾಯಿಲೆಗಳು ಸಂಭವಿಸುತ್ತವೆ. ರುಮಟಾಯ್ಡ್ ಸಂಧಿವಾತ, ಮಲ್ಟಿಪಲ್ ಸ್ಕೈರೋಸಿಸ್ ಇತ್ಯಾದಿ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಈ ಎಲ್ಲಾ ತೊಂದರೆಗಳಿಗೆ ಈ ಶಿಬಿರದಲ್ಲಿ ಚಿಕಿತ್ಸೆ ನೀಡಲಾಗುತ್ತದೆ ಎಂದರು.
ಎಸ್.ಡಿ.ಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಮೂಳೆ ಶಸ್ತ್ರಚಿಕಿತ್ಸಾ ತಜ್ಞ ಡಾ. ಪ್ರತೀಕ್ಷ್.ಪಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ ಉಜಿರೆಎಸ್.ಡಿ.ಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಎಂ.ಜನಾರ್ದನ್ ಮಾತನಾಡಿ, ಎಲ್ಲಾ ಖಾಯಿಲೆಗಳಿಗೆ ಇಲ್ಲಿಯೇ ಅತ್ಯುತ್ತಮ ಚಿಕಿತ್ಸೆ ದೊರೆಯಬೇಕೆಂಬ ನೆಲೆಯಲ್ಲಿ ಈ ಶಿಬಿರ ನಡೆಸಲಾಗಿದೆ. ಹಲವಾರು ಜನರ ಕಾಯಿಲೆಗಳನ್ನು ಪ್ರಾರಂಭದ ಹಂತದಲ್ಲಿಯೇ ಪತ್ತೆಹಚ್ಚಲು ಸಾಧ್ಯವಾಗುವುದರಿಂದ ರೋಗಿಗಳಿಗೆ ಚಿಕಿತ್ಸಾ ವೆಚ್ಚ ಕಡಿಮೆಯಾಗುವುದಲ್ಲದೇ ಅತ್ಯಂತ ಶೀಘ್ರವಾಗಿ ಗುಣಮುಖರಾಗುತ್ತಾರೆ ಎಂದರು.
ಆಸ್ಪತ್ರೆಯ ಫಿಸಿಷಿಯನ್ ಡಾ. ಯಶಸ್ವಿನಿ, ಮೂಳೆ ಶಸ್ತ್ರಚಿಕಿತ್ಸಾ ತಜ್ಞ ಡಾ. ರಜತ್ ಉಪಸ್ಥಿತರಿದ್ದರು.ಇನ್ಶ್ಯೂರೆನ್ಸ್ ವಿಭಾಗದ ಜಗನ್ನಾಥ್ ಕಾರ್ಯಕ್ರಮ ನಿರೂಪಿಸಿದರು. ಸಂಧಿವಾತ, ಅಸ್ಥಿ ಸಂಧಿವಾತ, ಮಕ್ಕಳ ಸಂಧಿವಾತ, ರುಮಟಾಯ್ಡ್, ಆರ್ಥೈಟಿಸ್, ಸ್ಟಾಂಡಿಲೋಆರ್ಥೈಟಿಸ್, ಸಿಸ್ಟಮಿಕ್ ಲೂಪಸ್ ಎರಿಥೆಮಾಟೋಸಸ್, ಸೋರಿಯಾಸಿಸ್, ವಾಸ್ಕುಲೈಟಿಸ್ ಮುಂತಾದ ತೊಂದರೆಗಳಿಂದ ಬಳಲುತ್ತಿರುವವರು ಈ ಶಿಬಿರದಲ್ಲಿ ಭಾಗವಹಿಸಿ ಚಿಕಿತ್ಸೆ ಪಡೆದರು.