
ಎನ್ಎಸ್ಎಸ್ ಸ್ವಯಂ ಸೇವಕರು ಯಾವುದೇ ಫಲಾಪೇಕ್ಷೆ ಬಯಸದೇ ಇತರರಿಗೆ ಸಹಾಯ ಮಾಡಬೇಕು: ಕುಶಾಲ್ ಕುಮಾರ್
Saturday, April 26, 2025
ಮಂಗಳೂರು: ಎನ್ಎಸ್ಎಸ್ ಸ್ವಯಂ ಸೇವಕರು ನಮಗಾಗಿ ಅಲ್ಲ ಇತರರಿಗಾಗಿ ಕೆಲಸ ಮಾಡಬೇಕು. ಯಾವುದೇ ಫಲಾಪೇಕ್ಷೆ ಬಯಸದೇ ಇತರರಿಗೆ ಸಹಾಯ ಮಾಡಬೇಕು ಎಂದು ಕಾನಡ್ಕದ ಪದವು ಫ್ರೆಂಡ್ಸ್ ಕ್ಲಬ್ನ ಅಧ್ಯಕ್ಷ ಕುಶಾಲ್ ಕುಮಾರ್ ಹೇಳಿದರು.
ಅವರು ಇಂದು ಇಲ್ಲಿನ ಶಕ್ತಿನಗರದ ನಾಲ್ಯಪದವಿನ ಕುವೆಂಪು ಶತಮಾನೋತ್ಸವ ಉನ್ನತೀಕರಿಸಿದ ಮಾದರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವರಹರೂಪ ವೇದಿಕೆಯಲ್ಲಿ ರಥಬೀದಿಯ ಡಾ. ಪಿ. ದಯಾನಂದ ಪೈ-ಪಿ. ಸತೀಶ್ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಸರ್ಕಾರಿ ಕಾಲೇಜುಗಳು ಬೆಳೆಯಬೇಕಾದರೆ ಉತ್ತಮ ನಾಯಕತ್ವ, ಉತ್ತಮ ಸೇವೆ ಹಾಗೂ ಸಹಭಾಗಿತ್ವ ಅತಿ ಅಗತ್ಯ. ಇದನ್ನು ಸಾಕಾರಗೊಳಿಸಲು ಕಾಲೇಜಿನ ಎಲ್ಲಾ ಉಪನ್ಯಾಸಕರುಗಳ ಸಹಕಾರವೂ ಅಗತ್ಯ ಎಂದ ಅವರು ವಿದ್ಯಾರ್ಥಿಗಳಿಗೆ ಅವಕಾಶ ಯಾವಾಗಲೂ ಸಿಗುವುದಿಲ್ಲ, ಸಿಕ್ಕ ಸಂದರ್ಭದಲ್ಲಿ ಅದನ್ನು ಸರಿಯಾಗಿ ಉಪಯೋಗಿಸಿಕೊಳ್ಳಬೇಕು. ಈ ಶಿಬಿರದಲ್ಲಿ ನಿಮಗೆ ಸಿಕ್ಕ ಅವಕಾಶವನ್ನು ಉಪಯೋಗಿಸಿಕೊಂಡು ಅದನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದು ಕಿವಿ ಮಾತು ಹೇಳಿದರು.
ಎನ್ಎಸ್ಎಸ್ ಸ್ವಯಂ ಸೇವಕರು ಯಾವಾಗಲೂ ಮತ್ತೊಬ್ಬರಿಗೆ ಸಹಾಯ ಮಾಡಬೇಕು ಅದರೊಂದಿಗೆ ನಾವು ಹಳೆ ವಿದ್ಯಾರ್ಥಿಗಳಾದ ನಂತರ ನಾವು ಕಲಿತ ಕಾಲೇಜಿನ ಏಳಿಗೆಗೆ ಶ್ರಮಿಸಬೇಕು ಎಂದು ತಿಳಿಸಿದರು.
ಹಿರಿಯ ವಿದ್ಯಾರ್ಥಿಗಳ ಸಂಘದ ಸಂಚಾಲಕರಾದ ಅಶೋಕ್ ನಾಯಕ್ ಮಾತನಾಡಿ, ಎರಡು ಕೋಣೆಗಳ ಹೆಂಚಿನ ಮನೆಯಂತಿದ್ದ ನಮ್ಮ ಶಾಲೆ ಇಂದು ಉತ್ತಮ ಕಟ್ಟಡ, ಕ್ರೀಡಾಂಗಣದಿಂದ ಕಂಗೊಳಿಸುತ್ತಿದ್ದು, 60ನೇ ವರ್ಷದ ಸಂದರ್ಭದಲ್ಲಿ ಡಾ. ಪಿ. ದಯಾನಂದ ಪೈ-ಪಿ. ಸತೀಶ್ ಪೈ ಕಾಲೇಜಿನ ವಿದ್ಯಾರ್ಥಿಗಳು ಇಲ್ಲಿ ಬಂದು ಶಿಬಿರ ನಡೆಸಿ ಸ್ವಚ್ಛತೆಯನ್ನು ನಡೆಸಿರುವುದು ಸಂತೋಷವನ್ನು ಉಂಟುಮಾಡಿದೆ ಎಂದು ಹೇಳಿದರು.
ಎಲ್ಲಾ ಕಡೆಗಳಲ್ಲಿ ಸರ್ಕಾರಿ ಶಾಲೆಗಳು ಮುಚ್ಚುತ್ತಿರುವ ಸಂದರ್ಭದಲ್ಲಿ ನಾವುಗಳು ಸರ್ಕಾರಿ ಶಾಲೆಗಳನ್ನು ಉಳಿಸುವ ಕೆಲಸ ಮಾಡಬೇಕು. ಅದಕ್ಕಾಗಿ ಸ್ಥಳೀಯ ಸಂಘ-ಸಂಸ್ಥೆಗಳು, ಹಳೆ ವಿದ್ಯಾರ್ಥಿಗಳು ಸಹಕರಿಸಬೇಕು ಎಂದರು.
ಮಂಚಿ ಸರ್ಕಾರಿ ಪ್ರೌಢಶಾಲೆಯ ಸಹಶಿಕ್ಷಕ ತಾರನಾಥ ಕೈರಂಗಳ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮನೆಗಳಿಗೆ ಅತಿಥಿಗಳು ಬಂದರೂ ಅವರನ್ನು ಸರಿಯಾಗಿ ಮಾತನಾಡದಿರುವ ಸಂದರ್ಭಲ್ಲಿ ಈ ಎನ್ಎಸ್ಎಸ್ ಸ್ವಯಂಸೇವಕರು ಆತ್ಮೀಯತೆಯಿಂದ ಮಾತನಾಡಿ ನಮ್ಮನ್ನು ಸತ್ಕರಿಸಿದ್ದನ್ನು ನೋಡಿದರೆ ಎನ್ಎಸ್ಎಸ್ ಹಿರಿಯರಿಗೆ ಗೌರವಿಸುವುದನ್ನು ಕಲಿಸುತ್ತದೆ ಎಂಬುವುದು ಸ್ವಷ್ಟವಾಗುತ್ತದೆ. ಎನ್ಎಸ್ಎಸ್ ಉತ್ತಮ ಸಂಸ್ಕಾರವನ್ನು ಬೆಳೆಸುತ್ತದೆ ಎಂದ ಅವರು 2005ರಲ್ಲಿ ಕರ್ನಾಟಕದಲ್ಲಿ ಪ್ರಾರಂಭವಾದ ವರ್ಲಿ ಚಿತ್ರಕಲೆ ಇಂದು ಸಾಕಷ್ಟು ಉನ್ನತ ಮಟ್ಟಕ್ಕೆ ಬೆಳೆದಿದ್ದು, ಮುಂದಿನ ಜನಾಂಗದವರು ಇದನ್ನು ಉಳಿಸಿ ಬೆಳೆಸಬೇಕು ಎಂದು ತಿಳಿಸಿದರು.
ಕುವೆಂಪು ಶತಮಾನೋತ್ಸವ ಉನ್ನತೀಕರಿಸಿದ ಮಾದರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕ ಪ್ರದೀಪ್ ಮಾತನಾಡಿ, ವರ್ಲಿ ಚಿತ್ರದೊಂದಿಗೆ ಶಾಲೆಯ ಸಭಾಂಗಣದ ಗೋಡೆಯನ್ನು ಶೃಂಗಾರಗೊಳಿಸಿದ್ದು, ಇದು ನಮ್ಮ ಶಾಲೆಯಲ್ಲಿ ಶಾಶ್ವತವಾಗಿ ಉಳಿಯುವಂತೆ ಮಾಡಿದ್ದಾರೆ ಎಂದು ಹೇಳಿದರು.
ಎನ್ಎಸ್ಎಸ್ ಸ್ವಯಂಸೇವಕರಿಗೆ ಮಾನಸಿಕ, ದೈಹಿಕ ಹಾಗೂ ಶೈಕ್ಷಣಿಕವಾಗಿ ಬೆಳೆಯಲು ಸಹಕಾರಿಯಾಗಿದೆ. ಎನ್ಎಸ್ಎಸ್ ಸೇವೆ ಮತ್ತು ಶಿಸ್ತನ್ನು ಕಳಿಸಿದ್ದು, ಅದು ಶಿಬಿರಕ್ಕೆ ಮಾತ್ರ ಸೀಮಿತವಾಗದೇ ಜೀವನದಲ್ಲೂ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ನಾಲ್ಯಪದವಿನ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಭಾರ ಪ್ರಾಂಶುಪಾಲೆ ಸುಮ ಮಾತನಾಡಿ, ಎನ್ಎಸ್ಎಸ್ ವೇದಿಕೆಯಲ್ಲಿ ಬಂದವರು ಮನುಷ್ಯರಾಗುತ್ತಾರೆ. ಅವರು ಸ್ವಂತಕ್ಕೆ ಸ್ವಲ್ಪ, ಸಮಾಜಕ್ಕೆ ಸರ್ವಸ್ವ ಎಂದು ಬದುಕುತ್ತಾರೆ, ಆದರೆ ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಯುಗವಾಗಿ ಬದಲಾಗಿದ್ದು, ಭಕ್ತಿಭಾವನೆಯ ಭಾರತ ಕಣ್ಮರೆಯಾಗುತ್ತಿದ್ದು, ನಮ್ಮ ಭಾರತವನ್ನು ಮತ್ತೆ ಭಕ್ತಿಭಾವನೆಯ ಭಾರತವನ್ನಾಗಿ ರೂಪಿಸಬೇಕಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ಜಯಕರ ಭಂಡಾರಿ ಎಂ. ಅವರು ಮಾತನಾಡಿ, ನಾವು ಎನ್ಎಸ್ಎಸ್ನಲ್ಲಿ ಕಲಿತ ಜ್ಞಾನವನ್ನು ಇತರಿಗೆ ನೀಡಿದರೆ ಆಗ ಸಮಾಜ ಬೆಳೆಯಲು ಸಾಧ್ಯ ಎಂದ ಅವರು ಮೂರು ವರ್ಷದಲ್ಲಿ ತರಗತಿಗಳ ಕೊಠಡಿಯಲ್ಲಿ ಕಲಿತದ್ದನ್ನು ನೀವುಗಳು ಒಂದು ವಾರದ ಶಿಬಿರದಲ್ಲಿ ಎನ್ಎಸ್ಎಸ್ ಕಲಿಸುತ್ತದೆ ಎಂದು ಹೇಳಿದರು.
ಪ್ರತಿಯೊಬ್ಬರಿಗೂ ಅವಕಾಶ, ಆಯ್ಕೆ ಮತ್ತು ಬದಲಾವಣೆ ತರಲು ಅವಕಾಶಗಳು ಸಿಗತ್ತವೆ ಆಗ ಅದನ್ನು ನಾವು ಉತ್ತಮ ರೀತಿಯಲ್ಲಿ ಉಪಯೋಗಿಸಿಕೊಳ್ಳಬೇಕು. ಸಿಕ್ಕ ಅವಕಾಶಗಳನ್ನು ನಾವು ಬಳಸಿಕೊಂಡರೆ ಉತ್ತಮ ಭವಿಷ್ಯ ನಿರ್ಮಾಣ ಸಾಧ್ಯ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಿಬಿರಕ್ಕೆ ಸಹಾಯ ಮಾಡಿದ ಗಣ್ಯರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಹಾಗೂ ಅನೇಕ ಸ್ಪರ್ಧೆಗಳಲ್ಲಿ ವಿಜೇತರಾದ ಸ್ವಯಂಸೇವಕರಿಗೆ ಅತಿಥಿಗಳು ಬಹುಮಾನವನ್ನು ವಿತರಿಸಿದರು.
ಶಕ್ತಿನಗರದ ವಿದ್ಯಾದೀವಿಗೆ ಎಜುಕೇಶನಲ್ ಚಾರೀಟೇಬಲ್ ಟ್ರಸ್ಟ್ನ ಅಧ್ಯಕ್ಷ ದೇವಾನಂದ್, ಪ್ರಗತಿಪರ ಕೃಷಿಕ ವಿಜಯ್ ಶೆಣೈ, ಕಾಲೇಜಿನ ಐಕ್ಯೂಎಸಿ ಸಂಯೋಜಕ ದೇವಿಪ್ರಸಾದ್, ಎನ್ಎಸ್ಎಸ್ ಯೋಜನಾಧಿಕಾರಿಗಳಾದ ಡಾ. ಲೋಕೇಶ್ನಾಥ್ ಬಿ., ಡಾ. ಮೋಹನ್ದಾಸ್, ಸಹ-ಯೋಜನಾಧಿಕಾರಿಗಳಾದ ಚೈತ್ರ ಕೆ., ಅಭಿಷೇಕ್ ಹೆಚ್.ಎಸ್. ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸ್ವಯಂಸೇವಕರುಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಸ್ವಯಂಸೇವಕರುಗಳಾದ ಭರತ್ ಸ್ವಾಗತಿಸಿ, ಕಾವ್ಯ ಶಿಬಿರದ ವರದಿಯನ್ನು ವಾಚಿಸಿದರು. ಭೂಮಿಕಾ ಕಾರ್ಯಕ್ರಮ ನಿರೂಪಿಸಿದರು. ಎನ್.ಎಸ್.ಎಸ್ ಯೋಜನಾಧಿಕಾರಿ ಶಾಂತಿ ವಂದಿಸಿದರು.